ಪಶ್ಚಿಮ ಬಂಗಾಳದ ವೇಗದ ಬೌಲರ್ ಅಶೋಕ್ ದಿಂಡಾ ವಿರುದ್ಧ ನಿರಂತರವಾಗಿ ಮಾಡುತ್ತಿರುವ ಟ್ರೋಲ್ಗೆ ಶ್ರೀಲಂಕಾದ ವೇಗಿ ಇಸುರು ಉದಾನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆಟಗಾರನ ನೈಜ ಸಾಮರ್ಥ್ಯವನ್ನು ತಿಳಿಯದೇ ಈ ರೀತಿ ಟ್ರೋಲ್ ಮಾಡಿ ವಿಡಂಬನೆ ಮಾಡುವುದು ಸರಿಯಲ್ಲ ಎಂದು ಇಸುರು ಉದಾನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಪಂದ್ಯಗಳಲ್ಲಿ ಯಾವುದೇ ಬೌಲರ್ ಬ್ಯಾಟ್ಸ್ಮನ್ ಕಡೆಯಿಂದ ಹಿಗ್ಗಾಮುಗ್ಗ ಚಚ್ಚಿಸಿಕೊಂಡರೆ ಆತನನ್ನು ಅಶೋಕ್ ದಿಂಡಾಗೆ ಹೋಲಿಸಿ ಟ್ರೋಲ್ ಮಾಡಲಾಗುತ್ತದೆ. ದಿಂಡಾ ಅಕಾಡೆಮಿಗೆ ಸೇರಿದ್ದಾನೆ ಎಂದು ವ್ಯಂಗ್ಯ ಮಾಡುವುದು ನಿರಂತರವಾಗಿ ದಶಕಗಳಿಂದಲೂ ನಡೆಯುತ್ತಿದೆ. ಇದೇ ವಿಚಾರವಾಗಿ ಇಸುರು ಉದಾನ ಅಶೋಕ್ ದಿಂಡಾ ಪರವಾಗಿ ಮಾತನಾಡಿದ್ದಾರೆ.
ಅಂಬಾಟಿ ರಾಯುಡು, ಡ್ವೇಯ್ನ್ ಬ್ರಾವೋ ಮರಳುವಿಕೆ ಬಗ್ಗೆ ಅಪ್ಡೇಟ್ ಕೊಟ್ಟ ಸಿಎಸ್ಕೆ ಸಿಇಒ
ಐಪಿಎಲ್ ಆರಂಭಿಕ ಆವೃತ್ತಿಯಿಂದಲೂ ಭಾಗವಾಗಿದ್ದ ಅಶೋಕ್ ದಿಂಡಾ 2017ರಲ್ಲಿ ಕೊನೆಯದಾಗಿ ಕಣಕ್ಕಿಳಿದಿದ್ದರು. ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 5 ತಂಡಗಳಲ್ಲಿ ದಿಂಡಾ ಕಣಕ್ಕಿಳಿದಿದ್ದಾರೆ. ಇದರಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಪ್ರಮುಖ ತಂಡಗಳಾಗಿದೆ. ಆರಂಭಿಕ ಆವೃತ್ತಿಗಳಲ್ಲಿ ಯಶಸ್ಸು ಗಳಿಸಿದರೂ ಬಳಿಕ ದಿಂಡಾ ಬೌಲಿಂಗ್ ಪ್ರದರ್ಶನ ಪರಿಣಾಮಕಾರಿಯಾಗಿರಲಿಲ್ಲ.
ಇದು ಟ್ರೊಲಿಗರಿಗೆ ಆಹಾರವಾಗಲು ಆರಂಭವಾಯಿತು. ಈಗ ಪ್ರತಿ ಬೌಲರ್ ಹೆಚ್ಚು ರನ್ ಬಿಟ್ಟುಕೊಟ್ಟಾಗಲೂ "ಆತ ದಿಂಡಾ ಅಕಾಡೆಮಿಯ ಭಾಗ" ಎಂದೇ ವ್ಯಂಗ್ಯ ಮಾಡಲಾಗುತ್ತದೆ. ಈ ಟ್ರೋಲ್ ಎಷ್ಟರಮಟ್ಟಿಗೆ ಹೋಗಿದೆಯೆಂದರೆ ಈ ಬಗ್ಗೆ ಸ್ವತಃ ದಿಂಡಾ ಪ್ರತಿಕ್ರಿಯಿಸಿ ತಮ್ಮ ಆಟದ ದಾಖಲೆ ಹಾಗೂ ಕ್ರಿಕೆಟ್ಗೆ ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದ್ದರು. ಆದರೆ ದಿಂಡಾ ಅವರ ಈ ಮಾತುಗಳು ಹೆಚ್ಚಿನ ಪರಿಣಾಮವನ್ನೇನೂ ಮಾಡಲಿಲ್ಲ. ದಿಂಡಾ ಕುರಿತಾಗಿ ವ್ಯಂಗ್ಯಗಳು ಮುಂದುವರಿದೇ ಇದೆ.
ಐಪಿಎಲ್ನಲ್ಲಿ ಕಣಕ್ಕಿಳಿದ ಹೊಸ ಪ್ರತಿಭೆ: ಯಾರಿದು ಅಬ್ದುಲ್ ಸಮದ್?
ಹಾಗಾಗಿ ಇಸುರು ಉದಾನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಶೋಕ್ ದಿಂಡಾ ಅವರ ಸಾಧನೆಯ ಬಗ್ಗೆ ಮಾತುಗಳನ್ನಾಡಿದ್ದಾರೆ. "ಈತ ಪ್ರಥಮದರ್ಜೆ ಕ್ರಿಕೆಟ್ನಲ್ಲಿ 400ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ. ಓರ್ವನ ಬಗ್ಗೆ ಸಂಪೂರ್ಣ ತಿಳಿದುಕೊಳ್ಳದೆ ತೀರ್ಪು ನೀಡಬೇಡಿ. ನಿಮಗೆ ಅರ್ಥವಾಗಿದೆ ಎಂದು ನೀವು ಭಾವಿಸಿರಬಹುದು. ಆದರೆ ನಿಮಗೆ ಅದು ಅರ್ಥವಾಗುವುದಿಲ್ಲ" ಎಂದು ಇಸುರು ಉದಾನ ಬರೆದುಕೊಂಡಿದ್ದಾರೆ.