ಶ್ರೀನಗರ, ಸೆಪ್ಟೆಂಬರ್ 16: ರಾಜ್ಯದಲ್ಲಿ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ತನ್ನದೇ ಐಪಿಎಲ್ ತಂಡ ಹೊಂದಲಿದೆ ಎಂದು ರಾಜ್ಯಕ್ಕೆ ಇತ್ತೀಚೆಗೆ ಗವರ್ನರ್ ಆಗಿ ನೇಮಕಗೊಂಡಿರುವ ಸತ್ಯ ಪಾಲ್ ಮಲಿಕ್ ಪ್ರಕಟಿಸಿದ್ದಾರೆ.
ಏಷ್ಯಾಕಪ್ನಲ್ಲಿ ಎಂಎಸ್ ಧೋನಿಯೇ ಕಿಂಗ್, ಅಂಕಿ-ಅಂಶ ನೋಡಿ
ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿದ್ದ ಎನ್ಎನ್ ವೋಹ್ರಾ ಅವರ ಸ್ಥಾನಕ್ಕೆ ನೇಮಕವಾಗಿರುವ ಮಲಿಕ್, ರಾಜ್ಯಕ್ಕಾಗಿಯೇ ಪ್ರತ್ಯೇಕ ತಂಡ ಕಟ್ಟುವ ಕನಸನ್ನು ಬಿಚ್ಚಿಟ್ಟಿದ್ದಾರೆ.
ಶ್ರೀನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಉದಯೋನ್ಮುಖ ಕ್ರಿಕೆಟಿಗ ಮಂಜೂರ್ ದಾರ್ ಕೂಡ ಭಾಗವಹಿಸಿದ್ದರು.
2018ರ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆಯ್ಕೆಯಾಗಿದ್ದರೂ ಅವರಿಗೆ ಆಡುವ ಅವಕಾಶ ದೊರಕಿರಲಿಲ್ಲ.
ಮಂಜೂರ್ ಅವರ ಹೃದಯಸ್ಪರ್ಶಿ ಕಥನ ಮಲಿಕ್ ಅವರಿಗೆ ರಾಜ್ಯದ ಪ್ರತಿಭಾವಂತ ಕ್ರಿಕೆಟಿಗರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಐಪಿಎಲ್ ತಂಡವನ್ನು ರಚಿಸುವ ಹೆಜ್ಜೆ ಇರಿಸಲು ಸ್ಫೂರ್ತಿ ನೀಡಿದೆ.
ಮಂಜೂರ್ ಅವರ ಕಥೆ ಕೇಳಿ ನಾನು ಭಾವುಕನಾದೆ. ಕ್ರಿಕೆಟ್ನಲ್ಲಿ ಮಿಂಚಬೇಕೆಂಬ ಕನಸನ್ನು ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಎಷ್ಟು ಸಂಕಷ್ಟಗಳನ್ನು ಎದುರಿಸಬೇಕಾಯಿತು ಎನ್ನುವುದು ಗೊತ್ತಾಯಿತು. ಇತ್ತೀಚೆಗೆ ನಾನು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರನ್ನು ಭೇಟಿ ಮಾಡಿದ್ದೆ. ಮಂಜೂರ್ ಮತ್ತು ಅವರ ಕ್ರೀಡಾಸಕ್ತಿಯ ಬಗ್ಗೆ ಅವರು ನನಗೆ ಹೇಳಿದ್ದರು ಎಂದು ಮಲಿಕ್ ತಿಳಿಸಿದ್ದಾರೆ.
ಮೂಳೆ ಮುರಿದರೂ ಒಂದೇ ಕೈಯಲ್ಲಿ ಬ್ಯಾಟು ಹಿಡಿದು ಆಡಿದ ತಮೀಮ್ ಇಕ್ಬಾಲ್
ರಾಜ್ಯದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಮಾತನಾಡಿದ್ದು, ಜಮ್ಮು ಮತ್ತು ಕಾಶ್ಮೀರದ್ದೇ ಆದ ತಂಡವೊಂದನ್ನು ರಚಿಸಲು ನಾವು ನಿರ್ಧರಿಸಿದ್ದೇವೆ. ಅಲ್ಲದೆ, ರಾಜ್ಯದ ಪ್ರತಿಭೆಗಳಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯದಲ್ಲಿಯೂ ಐಪಿಎಲ್ ಪಂದ್ಯಗಳನ್ನು ಆಡಿಸುತ್ತೇವೆ ಎಂದು ಹೇಳಿದ್ದಾರೆ.
ಭದ್ರತೆ, ಹಿಂಸಾಚಾರ ಮುಂತಾದ ಸಮಸ್ಯೆಗಳಿಗೆ ಸಿಲುಕಿರುವ ಜಮ್ಮು ಮತ್ತು ಕಾಶ್ಮೀರದಿಂದ ಪರ್ವೇಜ್ ರಸೂಲ್ ಮತ್ತು ಮಂಜೂರ್ ದಾರ್ ಅವರನ್ನು ಹೊರತುಪಡಿಸಿ ಗಮನ ಸೆಳೆಯುವಂತಹ ಕ್ರಿಕೆಟಿಗರು ಸೃಷ್ಟಿಯಾಗಿಲ್ಲ.
ಏಷ್ಯಾಕಪ್: ಲಂಕನ್ನರ ಹೆಡೆ ಮುರಿ ಕಟ್ಟಿದ ಬಾಂಗ್ಲಾ ಹುಲಿಗಳು
ರಾಜ್ಯದಲ್ಲಿ ಶ್ರೀನಗರ ಮತ್ತು ಜಮ್ಮುವಿನಲ್ಲಿ ಮಾತ್ರ ಮಾನ್ಯತೆ ಪಡೆದ ಕ್ರೀಡಾಂಗಣಗಳಿವೆ. 80ರ ದಶಕದಲ್ಲಿ ಇಲ್ಲಿ ಎರಡು ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿದ್ದವು. ಆದರೆ, ವಿವಿಧ ಕಾರಣಗಳಿಂದಾಗಿ ಅಲ್ಲಿ ಕೆಲವು ವರ್ಷಗಳಿಂದ ಅಂತರ್ ರಾಜ್ಯ ಪಂದ್ಯಗಳನ್ನು ಸಹ ಆಡಿಸಲು ಸಾಧ್ಯವಾಗುತ್ತಿಲ್ಲ.
ಜಮ್ಮು ಮತ್ತು ಕಾಶ್ಮೀರ ಸರ್ಕಾರದ ತೀರ್ಮಾನಕ್ಕೆ ಬಿಸಿಸಿಐ ಸ್ಪಂದಿಸಿದರೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಈ ಹೊಸ ತಂಡ ಸೇರ್ಪಡೆಯಾಗುವ ಸಾಧ್ಯತೆ ಇದೆ.