ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಬೆನ್ನು ನೋವಿನ ಕಾರಣದಿಂದಾಗಿ ಟಿ20 ವಿಶ್ವಕಪ್ನಿಂದ ಹೊರಗುಳಿಯುವುದು ಖಚಿತವಾಗಿದೆ. ಈ ಬಗ್ಗೆ ಬಿಸಿಸಿಐ ಸೋಮವಾರ ಅಧಿಕೃತ ಘೋಷಣೆ ಮಾಡುವ ಮೂಲಕ ಎಲ್ಲಾ ಊಹಾಪೋಹಗಳಿಗೂ ತೆರೆಬಿದ್ದಂತಾಗಿದೆ. ಬೂಮ್ರಾ ಬದಲಿಗೆ ಯಾರಿಗೆ ಅವಕಾಶ ನೀಡಲಾಗುತ್ತದೆ ಎಂಬುದನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಬಿಸಿಸಿಐ ಈ ಘೋಷಣೆಯನ್ನು ಮಾಡಿದ ಬಳಿಕ ಅಭಿಮಾನಿಗಳು ನಾನಾ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಹಾರ್ದಿಕ್ ಪಾಂಡ್ಯ ಕೂಡ ಬೂಮ್ರಾಗೆ ಟ್ವೀಟ್ನಲ್ಲಿ ವಿಶೇಷ ಸಂದೇಶವನ್ನು ನೀಡಿದ್ದಾರೆ. "ನನ್ನ ಜಸ್ಸಿ, ನೀನು ಯಾವಾಗಲೂ ಇರುವಂತೆಯೇ ಬಲಿಷ್ಠವಾಗಿ ವಾಪಾಸಾಗು"ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದು ಅಭಿಮಾನಿಗಳು ಈ ಟ್ವೀಟ್ಗೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
360 ಡಿಗ್ರಿ ಹೋಗ್ಲಿ, 180 ಡಿಗ್ರಿ ಶಾಟ್ಸ್ ಆದ್ರೂ ಹೊಡೀರಿ: ಪಾಕ್ ತಂಡದ ವಿರುದ್ಧ ವಾಸಿಂ ಅಕ್ರಂ ಗರಂ
"ಜಸ್ಪ್ರೀತ್ ಬೂಮ್ರಾ ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ತಜ್ಞರು ಸಂಪೂರ್ಣ ಪರಾಮರ್ಶೆ ನಡೆಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೂ ಮುನ್ನ ಬೂಮ್ರಾ ಬೆನ್ನು ನೋವಿನ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಬಿದ್ದಿದ್ದರು. ಬಿಸಿಸಿಐ ಈ ಪ್ರತಿಷ್ಠಿತ ಟೂರ್ನಿಗೆ ಜಸ್ಪ್ರಿತ್ ಬೂಮ್ರಾಗೆ ಬದಲಿ ಆಟಗಾರನನ್ನು ಶೀಘ್ರದಲ್ಲೇ ಹೆಸರಿಸಲಿದೆ" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರು ಅಲಭ್ಯವಾಗಲಿದ್ದಾರೆ. ಕಳೆದ ಏಷ್ಯಾಕಪ್ನಲ್ಲಿ ಭಾರತ ತಂಡದ ಭಾಗವಾಗಿದ್ದ ರವೀಂದ್ರ ಜಡೇಜಾ ಬಳಿಕ ಅವರು ಕೂಡ ಗಾಯಕ್ಕೆ ತುತ್ತಾಗಿದ್ದು ಸದ್ಯ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ದೀರ್ಘ ಕಾಲದ ವಿಶ್ರಾಂತಿಯ ಅಗತ್ಯವಿರುವ ಕಾರಣ ಜಡೇಜಾ ಮಹತ್ವದ ಟೂರ್ನಿಯಿಂದ ಈಗಾಗಲೇ ಹೊರಗುಳಿದಿದ್ದಾರೆ. ಇದೀಗ ಜಸ್ಪ್ರಿತ್ ಬೂಮ್ರಾ ಕೂಡ ಚುಟುಕು ವಿಶ್ವಕಪ್ನಿಂದ ಹೊರಗುಳಿಯುತ್ತಿರುವುದು ನಿರಾಸೆ ಮೂಡಿಸಿದೆ.
ICC T20 Ranking: ನಂಬರ್ 1 ಸ್ಥಾನಕ್ಕೇರಲು ಸಿದ್ಧವಾದ ಸೂರ್ಯಕುಮಾರ್ ಯಾದವ್
ಇನ್ನು ಜಸ್ಪ್ರೀತ್ ಬೂಮ್ರಾ ವಿಶ್ವಕಪ್ ಟೂರ್ನಿಗೆ ಅಲಭ್ಯವಾಗುತ್ತಿರುವ ಕಾರಣದಿಂದಾಗಿ ಮೀಸಲು ಆಟಗಾರರಾಗಿರುವ ಮೊಹಮ್ಮದ್ ಶಮಿ ಮತ್ತು ದೀಪಕ್ ಚಾಹರ್ ಮಧ್ಯೆ ಒಬ್ಬರು ಆಯ್ಕೆಯಾಗಲಿದ್ದಾರೆ. ಅನುಭವದ ಹಿನ್ನೆಲೆಯಲ್ಲಿ ಶಮಿ ಭಾರತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದರೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ದೀಪಕ್ ಚಾಹರ್ ನಿಡಿರುವ ಪ್ರದರ್ಶನದಿಂದಾಗಿ ಆಯ್ಕೆ ಮಂಡಳಿ ಚಾಹರ್ಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ದೀಪಕ್ ಚಹಾರ್ ಸೇರ್ಪಡೆಯಾದರೆ ಬ್ಯಾಟಿಂಗ್ ವಿಭಾಗದಲ್ಲಿಯೂ ಕೊಡುಗೆ ನೀಡುವ ಕಾರಣ ತಂಡದ ಸಮತೋಲನದಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ.