ಮಾರ್ಗದರ್ಶಕನಾಗ್ತಾರಾ ಸಚಿನ್ ತೆಂಡೂಲ್ಕರ್?
ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಟೀಮ್ ಇಂಡಿಯಾಗೆ ಕರೆತರುವಲ್ಲಿ ಜಯ್ ಶಾ ಯಶಸ್ವಿಯಾದರೆ ತೆಂಡೂಲ್ಕರ್ ಅವರಿಗೆ ಯಾವ ಜವಾಬ್ದಾರಿಯನ್ನು ನೀಡಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಟೀಮ್ ಇಂಡಿಯಾದ ಕೋಚ್ ಹುದ್ದಗಳ ಪೈಕಿ ಉನ್ನತ ಹುದ್ದೆಯಾದ ಹೆಡ್ ಕೋಚ್ ಸ್ಥಾನದಲ್ಲಿ ಈಗಾಗಲೇ ರಾಹುಲ್ ದ್ರಾವಿಡ್ ಇರುವುದರಿಂದ ಸಚಿನ್ ತೆಂಡೂಲ್ಕರ್ ಅವರಿಗೆ ಟೀಮ್ ಇಂಡಿಯಾದ ಮೆಂಟರ್ ಸ್ಥಾನವನ್ನು ನೀಡುವ ಸಾಧ್ಯತೆಗಳು ಹೆಚ್ಚಿವೆ ಎಂಬ ಮಾತುಗಳು ಹರಿದಾಡುತ್ತಿವೆ.
ಬಿಸಿಸಿಐ ಮಾತಿಗೆ ಒಪ್ಪಿಗೆ ಸೂಚಿಸಿದರೆ ಮುಂಬೈ ಇಂಡಿಯನ್ಸ್ ಬಿಡಬೇಕಾಗುತ್ತದೆ ಸಚಿನ್
ಇನ್ನು ಸಚಿನ್ ತೆಂಡೂಲ್ಕರ್ ಅವರ ಮನವೊಲಿಸುವ ಯತ್ನದಲ್ಲಿರುವ ಬಿಸಿಸಿಐ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇ ಆದರೆ ಐಸಿಸಿ ನಿಯಮದ ಪ್ರಕಾರ ಸಚಿನ್ ತೆಂಡೂಲ್ಕರ್ ತಾವು ನಿರ್ವಹಿಸುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ಮಾರ್ಗದರ್ಶಕನ ಜವಾಬ್ದಾರಿಯನ್ನು ಕೈಬಿಡಬೇಕಾಗುತ್ತದೆ. ಇನ್ನು ಕಳೆದ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಚಿನ್ ತೆಂಡೂಲ್ಕರ್ ಉತ್ತಮವಾಗಿ ತಂಡವನ್ನು ನಿಭಾಯಿಸುತ್ತಿದ್ದು, ಅದೇ ಕೆಲಸವನ್ನು ಭಾರತ ಕ್ರಿಕೆಟ್ ತಂಡದಲ್ಲಿಯೂ ಮುಂದುವರೆಸುವ ಸಾಧ್ಯತೆಗಳಿವೆ.
ಜಯ್ ಶಾ ಮನವೊಲಿಸದೇ ಬಿಡುವುದಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು
ಇನ್ನು ಜಯ್ ಶಾ ಸಚಿನ್ ತೆಂಡೂಲ್ಕರ್ ಅವರ ಮನವೊಲಿಸಲು ಯತ್ನಿಸುತ್ತಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ನೆಟ್ಟಿಗರು ಹಾಗೂ ಕ್ರೀಡಾ ಪಂಡಿತರು ಜಯ್ ಶಾ ಈ ಕೆಲಸವನ್ನು ಮಾಡದೇ ಬಿಡುವುದಿಲ್ಲ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಭಾರತದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲು ರಾಹುಲ್ ದ್ರಾವಿಡ್ ಮೊದಲಿಗೆ ಒಲ್ಲೆ ಎಂದಿದ್ದರು. ಆದರೆ ಜಯ್ ಶಾ ರಾಹುಲ್ ದ್ರಾವಿಡ್ ಅವರ ಮನವೊಲಿಸುವವರೆಗೂ ಹೆಜ್ಜೆಯನ್ನು ಹಿಂದಿಡಲಿಲ್ಲ, ಅದೇ ರೀತಿ ಈ ಬಾರಿಯೂ ಕೂಡ ಜಯ್ ಶಾ ಸಚಿನ್ ತೆಂಡೂಲ್ಕರ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ನೆಟ್ಟಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.