ಮುಂಬೈ, ಸೆಪ್ಟೆಂಬರ್ 23: ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ನೆಟ್ವರ್ಕ್ ಜಿಯೋ, ಭಾರತದ ಪ್ರಮುಖ ಪ್ರಸಾರ ಸಂಸ್ಥೆಯಾದ ಸ್ಟಾರ್ ಇಂಡಿಯಾ ಜೊತೆಗೆ ಕ್ರೀಡಾ ಮನರಂಜನೆಯಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಲಿರುವ ಐದು ವರ್ಷಗಳ ಪಾಲುದಾರಿಕೆಯನ್ನು ಘೋಷಿಸಿದೆ.
ಟೀವಿಯಲ್ಲಿ ಪ್ರಸಾರವಾಗುವ ಎಲ್ಲ ಭಾರತೀಯ ಕ್ರಿಕೆಟ್ ಪಂದ್ಯಗಳನ್ನೂ ಜಿಯೋ ಮತ್ತು ಸ್ಟಾರ್ ಈ ಪಾಲುದಾರಿಕೆಯ ಮೂಲಕ ಜಿಯೋಟೀವಿ ಹಾಗೂ ಹಾಟ್ಸ್ಟಾರ್ನ ಭಾರತದಲ್ಲಿನ ಬಳಕೆದಾರರಿಗೆ ಒದಗಿಸಲಿವೆ. ಈ ಕುರಿತ ಒಪ್ಪಂದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಸಹಿಹಾಕಿವೆ.
ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ಕ್ರಿಕೆಟ್ ಕಾರ್ಯಕ್ರಮ ನಿರ್ಮಾಣ, ಸ್ಟ್ರೀಮಿಂಗ್ ವೇದಿಕೆ ಮತ್ತು ಅತಿವೇಗದ ಜಾಲಗಳು ಒಟ್ಟಾಗಿ ಸೇರಿದ್ದು, ಅತ್ಯುತ್ತಮ ಕ್ರಿಕೆಟಿಂಗ್ ಕಾರ್ಯಕ್ರಮಗಳನ್ನು ಮೊಬೈಲ್ ಮೂಲಕ ಭಾರತೀಯ ಬಳಕೆದಾರರ ಅನುಕೂಲಕ್ಕಾಗಿ ನೀಡಲಾಗುತ್ತಿದೆ.
ಈ ಪಾಲುದಾರಿಕೆಯು ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ:
1. ಟಿ20
2. ಏಕದಿನ ಪಂದ್ಯಗಳು
3. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್
4. ಬಿಸಿಸಿಐನ ಪ್ರೀಮಿಯರ್ ದೇಶೀಯ ಸ್ಪರ್ಧೆಗಳು
ಗ್ರಾಹಕರನ್ನು ಹೊಸ ಬದಲಾವಣೆಗಳ ಕೇಂದ್ರದಲ್ಲಿಟ್ಟುಕೊಳ್ಳುವ ಇಂತಹ ಇನ್ನೂ ಹಲವಾರು ಗಮನಾರ್ಹ ಚಟುವಟಿಕೆಗಳಲ್ಲಿ ಜಿಯೋ ಮತ್ತು ಸ್ಟಾರ್ ತೊಡಗಿಕೊಂಡಿವೆ.
"ತನ್ನ ಗ್ರಾಹಕರಿಗೆ ವಿಶಿಷ್ಟ ಕಾರ್ಯಕ್ರಮಗಳನ್ನು ಪರಿಚಯಿಸುವ ಕಾರ್ಯವನ್ನು ಜಿಯೋ ಈ ಬಾರಿ ಜಿಯೋಟೀವಿ ಆಪ್ ಮೂಲಕ ಮುಂದುವರೆಸಿದೆ. ಭಾರತದಲ್ಲಿ ಕ್ರಿಕೆಟ್ ಅನ್ನು ಆಡಲಾಗುವುದಿಲ್ಲ, ಆರಾಧಿಸಲಾಗುತ್ತದೆ. ಅತ್ಯುತ್ತಮ ಕ್ರೀಡಾ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶದ ಜೊತೆಗೆ ಅದಕ್ಕೆ ಬೇಕಾದ ಗುಣಮಟ್ಟದ ಬ್ಯಾಂಡ್ವಿಡ್ತ್ ಕೂಡ ಕೈಗೆಟುಕುವ ದರದಲ್ಲಿ ಎಲ್ಲ ಭಾರತೀಯರಿಗೂ ದೊರಕುವಂತಾಗಬೇಕು. ಈ ಪಾಲುದಾರಿಕೆಯೊಂದಿಗೆ, ಜಿಯೋ ಗ್ರಾಹಕರಿಗೆ ಅತ್ಯುತ್ತಮ ಕ್ರೀಡಾ ಕಾರ್ಯಕ್ರಮಗಳ ಜೊತೆಗೆ ಅತ್ಯುತ್ತಮ ಡಿಜಿಟಲ್ ಮೂಲಸೌಕರ್ಯವನ್ನೂ ನೀಡುವ ಉದ್ದೇಶ ನಮ್ಮದು. ಕ್ರೀಡೆ, ಎಆರ್, ವಿಆರ್, ಇಮ್ಮರ್ಸಿವ್ ವೀಕ್ಷಣೆ ಹಾಗೂ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಗ್ರಾಹಕ ಅನುಭವವನ್ನು ಕಟ್ಟಿಕೊಡುವ ಕೆಲಸವನ್ನು ಇನ್ನು ಮುಂದೆಯೂ ಜಿಯೋ ಮಾಡಲಿದೆ," ಎಂದು ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ.
"ಕಳೆದ ಐದು ವರ್ಷಗಳಲ್ಲಿ, ದೂರದರ್ಶನ ಹಾಗೂ ಡಿಜಿಟಲ್ ಎರಡೂ ಮಾಧ್ಯಮಗಳಲ್ಲಿ, ಭಾರತದಲ್ಲಿ ಕ್ರೀಡೆಯ ಅನುಭವವನ್ನು ನಾವು ಮರು-ಆವಿಷ್ಕರಿಸಿದ್ದೇವೆ. ಬಿಸಿಸಿಐ ಅಡಿಯಲ್ಲಿ ಭಾರತೀಯ ಕ್ರಿಕೆಟ್ ವಿಶ್ವದಲ್ಲೇ ವಿಶಿಷ್ಟವಾದ ಅನುಭವವಾಗಿದ್ದು ನಾವು ಕಳೆದ ಕೆಲವರ್ಷಗಳಲ್ಲಿ ಇತರ ಕ್ರೀಡೆಗಳಲ್ಲಿ ತಂದಂಥದ್ದೇ ಹೊಸ ಬದಲಾವಣೆ ಹಾಗೂ ಮರುಆವಿಷ್ಕಾರಗಳನ್ನು ಇಲ್ಲಿಯೂ ತರಲು ಸಂತೋಷಿಸುತ್ತೇವೆ. ಅಲ್ಲದೆ, ರಿಲಯನ್ಸ್ ಜಿಯೋ ಜೊತೆಗಿನ ಹೊಸ ಪಾಲುದಾರಿಕೆಯ ಮೂಲಕ, ಕ್ರಿಕೆಟ್ ಅಭಿಮಾನಿಗಳಿಗೆ ನವೀನ ಅನುಭವಗಳನ್ನು ಕಟ್ಟಿಕೊಡುವ ಇನ್ನೂ ಹೆಚ್ಚಿನ ಅವಕಾಶಗಳು ನಮಗೆ ದೊರಕಲಿವೆ," ಎಂದು ಸ್ಟಾರ್ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಸಂಜಯ್ ಗುಪ್ತಾ ಹೇಳಿದ್ದಾರೆ.