ಬೆಂಗಳೂರು, ಮಾರ್ಚ್ 02: ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ರಾಷ್ಟ್ರೀಯ ಆಯ್ಕೆ ಸಮಿತಿ (ಜ್ಯೂನಿಯರ್) ಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿದ್ದಾರೆ. ವೈಯಕ್ತಿಕ ಕಾರಣಗಳಿಂದ ಹುದ್ದೆ ತೊರೆಯುತ್ತಿರುವುದಾಗಿ ಶುಕ್ರವಾರ(ಮಾರ್ಚ್ 02)ದಂದು ಹೇಳಿದರು.
ಅಂಡರ್ 19 ವಿಶ್ವಕಪ್ ಗೆದ್ದ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಿಂದ ಗಿಫ್ಟ್ ಸಿಕ್ಕಿದ್ದರೂ, ಆಯ್ಕೆ ಸಮಿತಿಯನ್ನು ಕಡೆಗಣಿಸಲಾಗಿತ್ತು. ಹಿರಿಯ ಆಯ್ಕೆ ಸಮಿತಿ ಹಾಗೂ ಮಹಿಳಾ ಆಯ್ಕೆ ಸಮಿತಿ ಸದಸ್ಯರಿಗೆ ಬಿಸಿಸಿಐಯಿಂದ ಉಡುಗೊರೆಗಳು ಸಿಕ್ಕಿವೆ.
ವೆಂಕಟೇಶ್ ಪ್ರಸಾದ್ ಅವರು ಹುದ್ದೆ ತೊರೆಯಲು ಇದು ಕಾರಣ ಇರಬಹುದು ಎನ್ನಲಾಗಿದೆ. ಅಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ ತಂಡವೊಂದನ್ನು ಸೇರಲು ಉತ್ಸುಕರಾಗಿದ್ದು, ಲಾಭದಾಯಕ ಹುದ್ದೆ ಆರೋಪ ಎದುರಿಸದೆ ಈಗಾಳೇ ಹುದ್ದೆ ತೊರೆಯುವ ಜಾಣತನ ತೋರಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಹಾಗೆ ನೋಡಿದರೆ 2016ರಲ್ಲಿ ಹಿರಿಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ ಖಚಿತವಾಗಿತ್ತು. ಆದರೆ, ಕಿರಿಯರ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಮುಂದುವರೆಸಲು ಬಿಸಿಸಿಐ ನಿರ್ಧರಿಸಿತು. ಹೀಗಾಗಿ ಎಂಎಸ್ ಕೆ ಪ್ರಸಾದ್ ಗೆ ಹುದ್ದೆ ಲಭಿಸಿತ್ತು.