ಲಂಡನ್, ಸೆಪ್ಟೆಂಬರ್ 1: ಓವಲ್ ಮೈದಾನದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರು ಸಜ್ಜಾಗಿದ್ದಾರೆ. ಆದರೆ ಈ ಪಂದ್ಯಕ್ಕೂ ಮುನ್ನ ನಡೆದ ಮೂರನೇ ಟೆಸ್ಟ್ನಲ್ಲಿ ಭಾರತ ಆಘಾತಕಾರಿಯಾಗಿ ಸೋಲು ಕಾಣುವ ಮೂಲಕ ನಿರಾಸೆಯನ್ನು ಅನುಭವಿಸಿತು. ಈ ಸೋಲಿನ ಕಹಿನೆನಪಿನಲ್ಲಿರುವ ಟೀಮ್ ಇಂಡಿಯಾ ಆಟಗಾರರಿಗೆ ಕೋಚ್ ರವಿ ಶಾಸ್ತ್ರಿ ಸ್ಪೂರ್ತಿಯ ಮಾತುಗಳನ್ನಾಡುವ ಮೂಲಕ ಹುರಿದುಂಬಿಸಿದ್ದಾರೆ. ವಿರಾಟ್ ಪಡೆಯ ಆಟಗಾರರಿಗೆ ಕೋಚ್ ರವಿ ಶಾಸ್ತ್ರಿ ನೇರ ಸಂದೇಶವೊಂದನ್ನು ನೀಡಿದ್ದಾರೆ. ಲಾರ್ಡ್ಸ್ ಪಂದ್ಯವನ್ನು ಸ್ಮರಿಸಿಕೊಳ್ಳಿ, ಲೀಡ್ಸ್ ಸೋಲನ್ನು ಮರೆತುಬಿಡಿ" ಎಂದು ರವಿ ಶಾಸ್ತ್ರಿ ಟೀಮ್ ಇಂಡಿಯಾ ಆಟಗಾರರಿಗೆ ಸ್ಪೂರ್ತಿಯುತ ಮಾತುಗಳನ್ನು ಆಡಿದ್ದಾರೆ.
ಗುರುವಾರ ಈ ಸರಣಿಯ ನಾಲ್ಕನೇ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸದ್ಯ 1-1 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ಐದು ಪಮದ್ಯಗಳ ಈ ಸರಣಿಯಲ್ಲಿ ಈಗ ಎರಡು ಪಂದ್ಯಗಳು ಉಳಿದುಕೊಂಡಿದ್ದು ಮುಂದಿನ ಎರಡು ಪಂದ್ಯಗಳು ಕೂಡ ಎರಡು ತಂಡಗಳಿಗೂ ನಿರ್ಣಾಯಕವಾಗಿದ್ದು ಸಾಕಷ್ಟು ಜಿದ್ದಾಜಿದ್ದಿನ ಪ್ರದರ್ಶನ ಏರ್ಪಡುವುದರಲ್ಲಿ ಅನುಮಾನವಿಲ್ಲ.
ಭಾರತ vs ಇಂಗ್ಲೆಂಡ್: ನಾಲ್ಕನೇ ಟೆಸ್ಟ್ ಮೊದಲ ದಿನ ಮಳೆ ಅಡ್ಡಿಯುಂಟು ಮಾಡುತ್ತಾ?
"ಇದು ತುಂಬಾ ಸುಲಭ, ನೀವೀಗ ಲಾರ್ಡ್ಸ್ ಪಂದ್ಯಕ್ಕೆ ಹೋಗಬೇಕು. ಕೇವಲ ಲಾರ್ಡ್ಸ್ ಪಂದ್ಯದ ಬಗ್ಗೆ ಮಾತ್ರ ನೀವು ಯೋಜನೆ ಮಾಡಿ. ಅಂತಿಮ ಪಂದ್ಯವನ್ನು ಮರೆತುಬಿಡಿ. ಇದು ಅಷ್ಟೇ ಸುಲಭವಾಗಿರುವ ವಿಧಾನ. ಕಾರ್ಯರೂಪಕ್ಕೆ ಇದನ್ನು ತರುವುದಕ್ಕಿಂತ ಹೇಳುವುದು ಸುಲಭ ಎಂದು ನನಗೆ ಅರಿವಿದೆ. ಆದರೆ ನಾವು ನಮ್ಮ ಅತ್ಯುತ್ತಮ ಸಂದರ್ಭಗಳ ನೆನಪುಗಳನ್ನು ಮಾಡಬೇಕಿದೆ. ಇಂತಾ ಸಂದರ್ಭಗಳನ್ನು ಆಟದಲ್ಲಿ ಸಂಭವಿಸುತ್ತದೆ" ಎಂದು ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿಕೊಂಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಕೋಚ್ ಎದುರಾಳಿ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನವನ್ನು ಪ್ರಶಂಸಿಸಿದರು. "ಕೊನೆಯ ಟೆಸ್ಟ್ ಪಂದ್ಯದಲ್ಲಿ ಅವರು ಅದ್ಭುತವಾಗಿ ಬೌಲಿಂಗ್ ದಾಳಿಯನ್ನು ನಡೆಸಿದರು. ಅವರು ಮೊದಲ ದಿನದಾಟದಲ್ಲಿಯೇ ನಮ್ಮ ವಿರುದ್ಧ ಮೇಲುಗೈ ಸಾಧಿಸಿದರು. ಈ ಮೂಲಕ ನಮ್ಮನ್ನು ಅವರು ಹಿಂದಕ್ಕೆ ತಳ್ಳಿದರು. ಹಾಗಿದ್ದರೂ ನಾವು ಎರಡನೇ ಇನ್ನಿಂಗ್ಸ್ನಲ್ಲಿ ಪ್ರತಿರೋಧದ ಮನೋಭಾವ ತೋರಿದೆವು. ಆದರೆ ಮೊದಲ ದಿನದಾಟದಲ್ಲಿ ನಾವು 78 ರನ್ಗಳಿಗೆ ಆಲೌಟ್ ಆಗಿದ್ದು ಇಲ್ಲಿ ತುಂಬಾ ದುಬಾರಿಯಾಯಿತು" ಎಂದಿದ್ದಾರೆ ರವಿ ಶಾಸ್ತ್ರಿ.
ಕಮ್ಬ್ಯಾಕ್ ವಿಶ್ವಾಸದಲ್ಲಿ ಟೀಮ್ ಇಂಡಿಯಾ: ಇನ್ನು ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರೀ ಅಂತರದಿಂದ ಸೋಲು ಕಂಡ ಭಾರತ ಸರಣಿಯನ್ನು ಸಮಬಲಗೊಳಿಸಲು ಇಂಗ್ಲೆಂಡ್ಗೆ ಅವಕಾಶ ಮಾಡಿಕೊಟ್ಟಿತ್ತು. ಇದೀಗ ಟೆಸ್ಟ್ ಸರಣಿಯನ್ನು ಗೆಲ್ಲಬೇಕಾದರೆ ಓವಲ್ ಮೈದಾನದಲ್ಲಿ ಭಾರತ ಅದ್ಭುತವಾದ ಕಮ್ಬ್ಯಾಕ್ ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಕಮ್ಬ್ಯಾಕ್ ಮಾಡುವ ಸಾಮರ್ಥ್ಯವನ್ನು ಸಾಕಷ್ಟು ಸಂದರ್ಭಗಳಲ್ಲಿ ಟೀಮ್ ಇಂಡಿಯಾ ವ್ಯಕ್ತಪಡಿಸಿದೆ. ಓವಲ್ ಅಂಗಳದಲ್ಲಿಯೂ ಮುಂದುವರಿಯುವ ವಿಶ್ವಾಸ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿದೆ.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಜಾನಿ ಬೈರ್ಸ್ಟೊ (ವಿಕೆಟ್ ಕೀಪರ್), ಆಲ್ಲಿ ಪೋಪ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಕ್ರೇಗ್ ಓವರ್ಟನ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್