ಉದ್ದೇಶವೆಲ್ಲ ಹದಗೆಟ್ಟಿತು
ಈ ಸುಧಾರಣೆಗಳನ್ನು ಶಿಫಾರಸು ಮಾಡುವ ಮೂಲಕ ಅದರಲ್ಲಿನ ಲೋಪಗಳನ್ನು ನಿರ್ಮೂಲನೆ ಮಾಡಲು ನಾವು ಬಯಸಿದ್ದೆಲ್ಲವೂ ಹದೆಗೆಟ್ಟಿತು. ಇದು ಸುಧಾರಣೆಯ ಸಂಪೂರ್ಣ ಪ್ಯಾಕೇಜ್ ಆಗಿತ್ತು. ಬಿಸಿಸಿಐಗೆ ಬಲವಾದ ಆಡಳಿತಾತ್ಮಕ ಹಾಗೂ ಕಾರ್ಯನಿರ್ವಹಣಾ ರಚನೆಯನ್ನು ನೀಡುವ ಉದ್ದೇಶ ಹೊಂದಿತ್ತು. ಗಟ್ಟಿಯಾದ ಕಟ್ಟಡವೊಂದರಿಂದ ಕೆಲವು ಮುಖ್ಯವಾದ ಇಟ್ಟಿಗೆಗಳನ್ನು ತೆಗೆದುಹಾಕಿದರೆ ಅದರ ಶಕ್ತಿಗೆ ಹಾನಿಯುಂಟು ಮಾಡುತ್ತದೆ. ಈಗ ಅದೇ ಆಗಿರುವುದು ಎಂದು ಲೋಧಾ ಹೇಳಿದ್ದಾರೆ.
ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ ಅನುರಾಗ್ ಠಾಕೂರ್
ಹಿಂಬಾಗಿಲ ಪ್ರವೇಶ
ಸರ್ಕಾರವು ಹಿಂಬಾಗಿಲಿನ ಮೂಲಕ ಬಿಸಿಸಿಐ ಒಳಗೆ ಪ್ರವೇಶಿಸುತ್ತಿರುವುದು ಬೇಸರದ ಸಂಗತಿ. ಬಿಸಿಸಿಐ ಸ್ವಾಯತ್ತವಾಗಿದ್ದು, ಈ ಸ್ವಾಯತ್ತ ಸಂಸ್ಥೆಗಳಲ್ಲಿ ಸರ್ಕಾರ ಯಾವುದೇ ಪಾತ್ರ ನಿಭಾಯಿಸಬಾರದು ಎಂಬುದನ್ನು ಖಾತರಿಪಡಿಸಿಕೊಳ್ಳಲು ನಾವು ಅಪೇಕ್ಷಿಸಿದ್ದೇವೆ ಎಂದು ಲೋಧಾ ತಿಳಿಸಿದ್ದಾರೆ.
ಚುನಾವಣೆ ವೇಳೆ ತಂತ್ರಗಳಿಗೆ ಅವಕಾಶ
ಈಗ ರೈಲ್ವೇಸ್, ಸರ್ವೀಸಸ್ ಮತ್ತು ವಿಶ್ವವಿದ್ಯಾಲಯ ತಂಡಗಳು ಮತ ಚಲಾಯಿಸುವ ಅವಕಾಶ ಪಡೆದುಕೊಂಡಿದ್ದು, ಬಿಸಿಸಿಐ ವ್ಯವಹಾರದಲ್ಲಿ ಭಾರಿ ಪರಿಣಾಮ ಉಂಟುಮಾಡಲಿದೆ. ಜಿದ್ದಾಜಿದ್ದಿನ ಪೈಪೋಟಿ ನಡೆದಾಗ ಈ ಮತಗಳು ಇಲ್ಲಿ ಪ್ರಮುಖವಾಗಲಿವೆ. ಇದು ತಂತ್ರ, ಕುತಂತ್ರಗಳಿಗೆ ಎಡೆಮಾಡಿಕೊಡಲಿದೆ.
ಉದ್ದೇಶವೇ ದುರ್ಬಲ
ಬಿಸಿಸಿಐನ ಏಕಸ್ವಾಮ್ಯವನ್ನು ಅಂತ್ಯಗೊಳಿಸಲು ತಾವು ಬಯಸಿದ್ದಾಗಿ ಹೇಳಿದ ಲೋಧಾ, ವಾಸ್ತವವಾಗಿ ಈ ಅಧಿಕಾರಿಗಳ ಏಕಸ್ವಾಮ್ಯವನ್ನು ನಿರ್ಮೂಲನೆ ಮಾಡುವ ಉಪಾಯವಿತ್ತು. ಆದರೆ, ಈಗ ಅಧಿಕಾರಿಗಳು ಎರಡು ಸತತ ಅವಧಿಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದರಿಂದ ಆ ಉದ್ದೇಶವೇ ದುರ್ಬಲವಾದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರು ಸಂಸ್ಥೆಗಳದ್ದೇ ಮೇಲುಗೈ ಆಗಲಿದೆ
ಒಂದು ರಾಜ್ಯ ಒಂದು ಮತ ನೀತಿಯಡಿ ಎಲ್ಲ ಇತರೆ ಸಂಸ್ಥೆಗಳನ್ನೂ ಮತದಾನದಿಂದ ದೂರವಿಡಬೇಕಿತ್ತು. ಈಗ ಮಹಾರಾಷ್ಟ್ರ ಮತ್ತು ಗುಜರಾತ್ನ ಎಲ್ಲ ತಲಾ ಮೂರು ಸಂಸ್ಥೆಗಳು ಸೇರಿ ಒಟ್ಟು ಆರು ಮತಗಳು ಇಡೀ ಚುನಾವಣಾ ಪ್ರಕ್ರಿಯೆಗೇ ಬೇರೆ ಬಣ್ಣ ನೀಡಲಿವೆ. ಅವರು ಆರು ಮತಗಳ ಶಕ್ತಿಯಿರುವುದರಿಂದ ಚುನಾವಣೆಯಲ್ಲಿ ಅವರದೇ ಮೇಲುಗೈ ಉಂಟಾಗುವುದರ ಜತೆಗೆ ಚೌಕಾಸಿ ನಡೆಸುವ ಅಧಿಕಾರವನ್ನೂ ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.
ಬಿಸಿಸಿಐಗೆ ಹೊಸ ಮುಖಗಳು
ಹೊಸ ಸಂವಿಧಾನದ ಕರಡು ಪ್ರತಿ ಪ್ರಕಾರ ಬಿಸಿಸಿಐನ ಹಾಲಿ ಅಧಿಕಾರಿಗಳಲ್ಲಿ ಕೆಲವರು ಮಾತ್ರ ಮತ್ತೆ ಸ್ಪರ್ಧಿಸಲು ಅವಕಾಶವಿದೆ. ಹೀಗಾಗಿ ಮಂಡಳಿಗೆ ಹೊಸ ಮುಖಗಳು ಬರಬೇಕಾಗಲಿದೆ. ಆದರೆ, ಅಧಿಕಾರಿಗಳ ಆಡಳಿತಾವಧಿ ವಿಚಾರವಾಗಿ ಕೋರ್ಟ್ ಮರುಪರಿಶೀಲನೆ ನಡೆಸುವ ಸಾಧ್ಯತೆ ಇದೆ.
ರಾಜ್ಯ ಅಥವಾ ರಾಷ್ಟ್ರೀಯ ಮಂಡಳಿಯಲ್ಲಿ ಆರು ವರ್ಷಗಳವರೆಗೆ ಎರಡು ಅವಧಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಲು ಹೊಸ ಸಂವಿಧಾನ ಅವಕಾಶ ನೀಡಲಿದೆ.
ಹೊಸ ಸಂವಿಧಾನವು ನಾಲ್ಕು ವಾರಗಳಲ್ಲಿ ಅಳವಡಿಕೆಯಾಗಬೇಕಿದ್ದು, ಬಿಸಿಸಿಐ ಖಜಾಂಚಿ ಅನಿರುದ್ಧ್ ಚೌಧರಿ, ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದುಕೊಳ್ಳಲಿದ್ದಾರೆ.