ಬೇರೆ ಆಟಗಾರರನ್ನು ಕರೆತರುವ ಅಗತ್ಯವಿಲ್ಲ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಮತ್ತೋರ್ವ ಆರಂಭಿಕ ಆಟಗಾರನನ್ನು ಕರೆತರುವ ನಿರ್ಧಾರಕ್ಕೆ ಕಪಿಲ್ದೇವ್ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿ ಯುನೈಟೆಡ್ ಕಿಂಗ್ಡಂನಲ್ಲಿರುವ 20 ಆಟಗಾರರನ್ನು ಹೊರತುಪಡಿಸಿ ಉಳೀದ ಆಟಗಾರರತ್ತ ಚಿತ್ತ ಹರಿಸುವ ಅಗತ್ಯವೇ ಇಲ್ಲ ಎಂದು ಕಪಿಲ್ ದೇವ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಆಯ್ಕೆಗಾರರಿಗೂ ನಾವು ಗೌರವ ನೀಡಬೇಕು
"ನನ್ನ ಪ್ರಕಾರ ಬೇರೆ ಆರಂಭಿಕನನ್ನು ಸೇರ್ಪಡೆಗೊಳಿಸುವ ಯಾವುದೇ ಅಗತ್ಯಗಳು ಕಾಣಿಸುತ್ತಿಲ್ಲ. ಆಯ್ಕೆಗಾರರಿಗೂ ನಾವು ಗೌರವವನ್ನು ನೀಡಬೇಕಾಗುತ್ತದೆ. ಅವರು ತಂಡವನ್ನು ಆಯ್ಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಅವರನ್ನು ಸಂಪರ್ಕಿಸದೆ ಈ ತಂಡವನ್ನು ಆಯ್ಕೆ ಮಾಡಿರುವುದಿಲ್ಲ. ನಿಮ್ಮ ಬಳಿ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಅವರಂತಾ ಇಬ್ಬರು ಖ್ಯಾತ ಆರಂಭಿಕ ಆಟಗಾರರು ಇದ್ದಾರೆ. ನಿಜಕ್ಕೂ ಮೂರನೇ ಆರಂಭಿಕ ಆಟಗಾರನ ಆಯ್ಕೆಯ ಅಗತ್ಯವನ್ನು ಕಾಣುತ್ತಿದ್ದೀರಾ? ನನಗೆ ಇದು ಸರಿ ಎಂದು ಎನಿಸುತ್ತಿಲ್ಲ" ಎಂದು ಕಪಿಲ್ ದೇವ್ ತಮ್ಮ ನೇರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಸಿದ್ಧಾಂತ ನನಗೆ ಅರ್ಥವಾಗುತ್ತಿಲ್ಲ!
"ಈ ಸಿದ್ಧಾಂತ ನನಗೆ ಅರ್ಥವಾಗುತ್ತಿಲ್ಲ. ಅವರು ಆಯ್ಕೆ ಮಾಡಿದ ತಂಡ ಈಗಾಗಲೇ ಆರಂಭಿಕ ಆಟಗಾರರನ್ನು ಹೊಂದಿದೆ. ಹೀಗಾಗಿ ಆಡಬೇಕಾಗಿರುವವರು ಅವರೇ ಎಂದು ನಾನು ಭಾವಿಸುತ್ತೇನೆ. ಇಲ್ಲವಾದಲ್ಲಿ ಈಗಾಗಲೇ ತಂಡದಲ್ಲಿರುವ ಆಟಗಾರರನ್ನು ನೀವು ಅವಮಾನ ಮಾಡಿದಂತೆ" ಎಂದು ಕಪಿಲ್ ದೇವ್ ಈ ನಿರ್ಧಾರದ ಬಗ್ಗೆ ಕಿಡಿ ಕಾರಿದ್ದಾರೆ.
ನೀವು ಆಯ್ಕೆ ಮಾಡಿದ ಆಟಗಾರರಿಗೆ ಅವಮಾನ ಮಾಡುವಂತಿಲ್ಲ
"ನನ್ನ ಪ್ರಕಾರ ಇದೊಂದು ತಪ್ಪು ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ನೀವು ಆಯ್ಕೆ ಮಾಡಿದ ಆಟಗಾರರನ್ನು ನೀವು ಅವಮಾನ ಮಾಡುವಂತಿಲ್ಲ. ಅವರು ಅತ್ಯುತ್ತಮ ಆಟಗಾರರು. ಈ ರೀತಿಯ ಬೆಳವಣಿಗೆ ನಡೆಯುವುದನ್ನು ನಾನು ಬಯಸುವುದಿಲ್ಲ. ಇಲ್ಲಿ ಯಾವುದೇ ವಿವಾದಗಳು ಅನಗತ್ಯ" ಎಂದಿದ್ದಾರೆ ಕಪಿಲ್ ದೇವ್.