ಬೆಂಗಳೂರು, ಫೆಬ್ರವರಿ 13: ನಗರದ ಹೊರವಲಯದ ಆಲೂರಿನ ಕ್ರಿಕೆಟ್ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಎ ಗುಂಪಿನ ಕರ್ನಾಟಕ ಮತ್ತು ಒಡಿಶಾ ತಂಡದ ನಡುವೆ ನಡೆದ ಏಕದಿನ ಪಂದ್ಯದಲ್ಲಿ ಕರ್ನಾಟಕ ಭರ್ಜರಿ ಗೆಲವು ಪಡೆದಿದೆ.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಗೆಲ್ಲಲು ಒಡಿಶಾಗೆ 354 ರನ್ ಗುರಿ ನೀಡಿತು. ಆದರೆ ಕರ್ನಾಟಕದ ಬೌಲರ್ಗಳ ಅತ್ಯುತ್ತಮ ದಾಳಿಯ ಮುಂದೆ ಮುಗ್ಗರಿಸಿದ ಒಡಿಶಾ ಕೇವಲ 220 ರನ್ಗಳಿಗೆ ಆಲ್ಔಟ್ ಆಗಿದೆ. ಕರ್ನಾಟಕ ತಂಡವು 133 ರನ್ಗಳ ಅಂತರದಿಂದ ಜಯ ಗಳಿಸುವ ಮೂಲಕ ಕ್ವಾಟರ್ಫೈನಲ್ ಪ್ರವೇಶಿಸುವ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.
ಆಲ್ರೌಂಡ್ ಪ್ರದರ್ಶನ ತೋರಿದ ಕರ್ನಾಟಕ ತಂಡದ ಪರ ಮಯಾಂಕ್ ಅಗರ್ವಾಲ್ 94 ಬಾಲ್ನಲ್ಲಿ 102 ರನ್ ಗಳಿಸಿದರು ಅವರು 10 ಬೌಂಡರಿ ಬಾರಿಸಿ ಎರಡು ಸಿಕ್ಸರ್ ಎತ್ತಿದರು. ಕರುಣ್ ನಾಯರ್ 111 ಬಾಲ್ ಎದುರಿಸಿ ಬರೋಬ್ಬರಿ 100 ರನ್ ಗಳಿಸಿದರು ಅವರ ಬ್ಯಾಟಿನಿಂದ ಬಂದದ್ದು 12 ಬೌಂಡರಿ.
ಆರಂಭಿಕ ಬ್ಯಾಟ್ಸ್ಮನ್ಗಲು ಔಟಾದ ನಂತರ ಬಂದ ಪವನ್ ದೇಶಪಾಂಡೆ ಬಿರುಸಿನ ಆಟವಾಡಿ ಕೇವಲ 37 ಎಸೆತಕ್ಕೆ 54 ರನ್ ಗಳಿಸಿ ಕೊನೆಯ ವರೆಗೆ ಔಟಾಗದೆ ಉಳಿದರು. ಪವನ್ ಅವರು 5 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು. ಶ್ರೇಯಸ್ ಗೋಪಾಲ್ 18 ಬಾಲ್ಗೆ 25 ರನ್ ಗಳಿಸಿದರು. ಆ ನಂತರ ಬಂದ ಗೌತಮ್ ಕೇವಲ 26 ಬಾಲ್ ಎದುರಿಸಿ 47 ರನ್ ಭಾರಿಸಿದರು. ಅವರು 5 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಇವರುಗಳ ಸಂಘಟಿತ ಬ್ಯಾಟಿಂಗ್ನಿಂದಾಗಿ ಕರ್ನಟಕವು 353 ರನ್ಗಳ ಬೃಹತ್ ಮೊತ್ತ ಪೇರಿಸಿತು.
ಗುರಿ ಬೆನ್ನತ್ತಿದ ಒಡಿಶಾ ತಂಡವು ಉತ್ತಮ ಆರಂಭವನ್ನೇ ಕಂಡಿತು 15 ಓವರ್ಗಳ ವರೆಗೆ ಒಡಿಶಾ ಬ್ಯಾಟ್ಸ್ಮನ್ಗಳು ಓವರ್ ಒಂದಕ್ಕೆ 7 ಕ್ಕಿಂತಲೂ ಹೆಚ್ಚಿನ ಸರಾಸರಿಯಲ್ಲಿ ರನ್ ಭಾರಿಸುತ್ತಿದ್ದರು ಆದರೆ ಆ ನಂತರ ಕರ್ನಾಟಕದ ಬೌಲರ್ಗಳ ಶಿಸ್ತು ಬದ್ಧ ದಾಳಿಗೆ ಎದುರುತ್ತರಿಸಲಾರದೆ ಔಟಾಗಿ ಪೆವಿಲಿಯನ್ ಸೇರಿದರು.
15 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 118 ರನ್ ಭಾರಿಸಿ ಸುಸ್ಥಿಯಲ್ಲಿದ್ದ ಒಡಿಶಾ ಆನಂತರ 102 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ಗಳನ್ನೂ ಕಳೆದುಕೊಂಡಿತು.
ಭಾರತದ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಜಗದೀಶ್ ಶುಚಿತ್ 5 ವಿಕೆಟ್ ಕಬಳಿಸಿದರು. ಕೆ.ಗೌತಮ್ ಮತ್ತು ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್ ಪಡೆದರು. ಒಡಿಶಾ ಪರ ಆರಂಭಿಕ ಬ್ಯಾಟ್ಸ್ಮನ್ಗಳಾದ ರಾಜೇಶ್ ದೂಪೇರ್ 53 ರನ್ ಗಳಿಸಿದರೆ, ಅನುರಾಗ್ ಸಾರಂಗಿ 58 ರನ್ ಗಳಿಸಿದರು.
ಈ ಗೆಲುವಿನಿಂದಾಗಿ ಕರ್ನಾಟಕವು ಪಾಯಿಂಟ್ ಪಟ್ಟಿಯಲ್ಲಿ ಮೊದಲಿನಲ್ಲಿದೆ. ಜೊತೆಗೆ ಕರ್ನಾಟಕದ ಸರಾಸರಿ ಕೂಡ ಹೆಚ್ಚಿದ್ದು ಇನ್ನುಳಿದ ಒಂದು ಪಂದ್ಯದಲ್ಲಿ ಸೋತರೂ ಕ್ವಾಟರ್ ಫೈನಲ್ ತಲುಪುವ ಅವಕಾಶ ಇದೆ.
ಕರ್ನಾಟಕದ ಮುಂದಿನ ಪಂದ್ಯ ಫೆಬ್ರವರಿ 16ರಂದು ರೈಲ್ವೇಸ್ ತಂಡದ ವಿರುದ್ಧ ಇದೆ.