ಬೆಂಗಳೂರು, ಸೆಪ್ಟೆಂಬರ್ 9: ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್ನ ಐದನೇ ಪಂದ್ಯದಲ್ಲಿ ಗಂಗ ವಾರಿಯರ್ಸ್ ತಂಡವನ್ನು ಸೋಲಿಸುವ ಮೂಲಕ ಯಶ್ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಫೈನಲ್ ಪ್ರವೇಶಿಸಿದೆ.
ಪುನೀತ್ ರಾಜ್ಕುಮಾರ್ ನೇತೃತ್ವದ ಗಂಗ ವಾರಿಯರ್ಸ್ ತಂಡವನ್ನು ಸೋಲಿಸುವ ಮೂಲಕ ಅಂತಿಮ ಘಟ್ಟಕ್ಕೆ ಪ್ರವೇಶಿಸಿದ ಯಶ್ ತಂಡವು, ಫೈನಲ್ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜಸ್ ತಂಡವನ್ನು ಎದುರಿಸಲಿದೆ.
110 ರನ್ ಗುರಿ ಬೆನ್ನತ್ತಿದ ರಾಷ್ಟ್ರಕೂಟ ಪ್ಯಾಂಥರ್ಸ್ ಆರಂಭಿಕ ಸ್ಟಾಲಿನ್ ಹೂವರ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 7.5 ಓವರ್ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಸ್ಟಾಲಿನ್ ಹೂವರ್ 28 ಎಸೆತಗಳಲ್ಲಿ ಅಜೇಯ 72 ರನ್ ಬಾರಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಮದರಂಗಿ ಕೃಷ್ಣ 12 ಎಸೆತಗಳಲ್ಲಿ 22 ರನ್ ಗಳಿಸಿ ಔಟಾಗದೆ ಉಳಿದರು.
ಕೆಸಿಸಿ 2018 : ಸುದೀಪ್ ತಂಡದ ಮೇಲೆ ಗಣೇಶ್ ತಂಡದ ಸವಾರಿ
ಮೊದಲು ಬ್ಯಾಟಿಂಗ್ ಮಾಡಿದ ಗಂಗ ವಾರಿಯರ್ಸ್ ನಿಹಾಲ್ ಉಲ್ಲಾಳ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು.
ನಿಹಾಲ್ ಉಲ್ಲಾಳ್ 21 ಎಸೆತಗಳಲ್ಲಿ 47 ರನ್ ಚಚ್ಚಿದರು. ಸ್ಟಾರ್ ಆಟಗಾರ ಲ್ಯಾನ್ಸ್ ಕ್ಲೂಸ್ನರ್ ಕೇವಲ 10 ರನ್ ಗಳಿಸಿದರು.
ರಾಷ್ಟ್ರಕೂಟ ತಂಡದ ಪರವಾಗಿ ಕೆ. ಕಾಮತ್ 20 ರನ್ ನೀಡಿ 3 ವಿಕೆಟ್ ಪಡೆದರು. ಪ್ರೀತಂ ಗುಬ್ಬಿ ಮಹತ್ವದ ಎರಡು ವಿಕೆಟ್ಗಳನ್ನು ಪಡೆದರು.
ಕೊನೆಯ ಓವರ್ನಲ್ಲಿ ಬೌಲಿಂಗ್ ಮಾಡಿದ ಯಶ್ 13 ರನ್ ನೀಡಿದರು.
ಪುನೀತ್ ರಾಜ್ಕುಮಾರ್ ಬದಲು ನಾಯಕತ್ವದ ಹೊಣೆ ವಹಿಸಿಕೊಂಡಿರುವ ಗಂಗಾ ವಾರಿಯರ್ಸ್ನ ನಿಹಾಲ್ ಉಲ್ಲಾಳ್ ಪಡೆ ಬ್ಯಾಟಿಂಗ್ಗೆ ಇಳಿಯಿತು.
ಶನಿವಾರ ಆಡಿದ ಮೊದಲ ಪಂದ್ಯದಲ್ಲಿ ಯಶ್ ಪಡೆ ಶಿವರಾಜ್ಕುಮಾರ್ ನೇತೃತ್ವದ ವಿಜಯನಗರ ತಂಡವನ್ನು ಸೋಲಿಸಿತ್ತು. ಬಳಿಕ ನಡೆದ ಪಂದ್ಯದಲ್ಲಿ ಪುನೀತ್ ತಂಡ ಶಿವರಾಜ್ಕುಮಾರ್ ತಂಡದ ವಿರುದ್ಧ ಸೋಲು ಅನುಭವಿಸಿತ್ತು.