ತಿರುವನಂತಪುರಂ, ಸೆ. 08: ಕ್ರಿಕೆಟ್ ಲೋಕದ ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಇಲ್ಲದೆ ಇರಬಹುದು. ಆದರೆ ಅನೇಕ ಕ್ರಿಕೆಟರ್ ಗಳಂತೆ ಸಹಾಯಕ ಸಿಬ್ಬಂದಿ, ಗ್ರೌಂಡ್ಸ್ ಮನ್ ಗಳ ನೆರವಿಗೆ ಧಾವಿಸುವುದರಲ್ಲಿ ಮುಂದಿದ್ದಾರೆ. ಭಾರತ 'ಎ' ಪರ ಕ್ರಿಕೆಟ್ ಆಡಿದಾಗ ಸಿಕ್ಕ ಸಂಭಾವನೆಯನ್ನು ತಿರುವನಂತಪುರಂನ ಅಂತಾರಾಷ್ಟ್ರೀಯ ಮೈದಾನದ ಸಿಬ್ಬಂದಿಗಳಿಗೆ ನೀಡಿ ಎಲ್ಲರ ಮನ ಗೆದ್ದಿದ್ದಾರೆ.
ಸ್ಯಾಮ್ಸನ್, ಧವನ್ ಮಿಂಚು, ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಭಾರತ 'ಎ'ಗೆ ಸರಣಿ
ಮಳೆ ಸೀಸನ್ ನಲ್ಲೂ ದಕ್ಷಿಣ ಆಫ್ರಿಕಾ ಎ ಹಾಗೂ ಭಾರತ ಎ ತಂಡದ ನಡುವಿನ ಸರಣಿಯನ್ನು ಜಾರಿಯಲ್ಲಿರಿಸಲು ಮೈದಾನದ ಸಿಬ್ಬಂದಿಯ ಪರಿಶ್ರಮವಹಿಸಿದ್ದರು. ನಾಲ್ಕು ದಿನಗಳ ಪಂದ್ಯದಲ್ಲಿ ಎರಡು ದಿನಗಳ ಕಾಲ ಪಂದ್ಯ ನಡೆಯುವಂತೆ ಮಾಡಿದ್ದರು. 48 ಎಸೆತಗಳಲ್ಲಿ 91 ರನ್ ಗಳಿಸಿ ಮೈದಾನದಲ್ಲಿ ಮಿಂಚಿದ್ದ ಸ್ಯಾಮ್ಸನ್ ಈಗ ಮೈದಾನದ ಹೊರಗೂ ತಮ್ಮ ಉತ್ತಮ ನಡೆಯಿಂದ ಪ್ರಶಂಸೆಗೊಳಗಾಗಿದ್ದಾರೆ.
ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಮೈದಾನದಲ್ಲಿ ಸಂಜು 91ರನ್ ನೆರವಿನಿಂದ ಭಾರತ 'ಎ' ತಂಡವು ದಕ್ಷಿಣ ಆಫ್ರಿಕಾ 'ಎ' ವಿರುದ್ಧ 4-1ರಲ್ಲಿ ಸರಣಿ ಜಯ ದಾಖಲಿಸಿತು. ಎರಡು ಪಂದ್ಯವಾಡಿದ್ದ ಸಂಜು ತಲಾ 75000 ರು ಪಡೆದಿದ್ದರು. "ಪಂದ್ಯ ನಡೆಯುವಂತೆ ಮಾಡಲು ಇಲ್ಲಿನ ಸಿಬ್ಬಂದಿಯ ಎಷ್ಟು ಶ್ರಮ ವಹಿಸಿದರು ಎಂಬುದನ್ನು ಕಣ್ಣಾರೆ ಕಂಡಿದ್ದೇನೆ, ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡಿದೆ" ಎಂದು ಸ್ಯಾಮ್ಸನ್ ಹೇಳಿದ್ದಾರೆ.