ಟಿ20 ವಿಶ್ವಕಪ್ನಲ್ಲಿ ಭಾರತ ಸತತ ಎರಡನೇ ಸೋಲು ಅನುಭವಿಸಿದೆ. ಭಾರತ ತಮಡದ ಆಟಗಾರರ ಪ್ರದರ್ಶನ ಈಗ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಪಾಕಿಸ್ತಾನದ ವಿರುದ್ಧ 10 ವಿಕೆಟ್ಗಳ ಅಂತರದಿಂದ ಸೋಲು ಅನುಭವಿಸಿದ ನಂತರ ಭಾರತ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ಗಳ ಅಂತರದ ಸೋಲು ಅನುಭವಿಸಿ ಆಘಾತಕ್ಕೆ ಒಳಗಾಗಿದೆ. ಹೀಗಾಗಿ ಟೀಮ್ ಇಂಡಿಯಾದ ಆಟಗಾರರ ಪ್ರದರ್ಶನದ ವಿರುದ್ಧ ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಟೀಮ್ ಇಂಡಿಯಾ ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ.
"ಆಟ ಎಂದರೆ ಅಲ್ಲ ಒಂದು ತಂಡ ಗೆಲ್ಲುತ್ತದೆ ಒಂದು ತಂಡ ಸೋಲುತ್ತದೆ. ಯಾವ ತಂಡ ಕೂಡ ಸೋಲಲೆಂದು ಅಂಗಳಕ್ಕೆ ಇಳಿಯುವುದಿಲ್ಲ. ನಿಮ್ಮ ದೇಶವನ್ನು ಪ್ರತಿನಿಧಿಸುವುದು ಆಟಗಾರರಿಗೆ ಅತಿ ದೊಡ್ಡ ಹೆಮ್ಮೆಯ ಸಂಗತಿ. ಆದರೆ ಒಂದು ಅರ್ಥ ಮಾಡಿಕೊಳ್ಳಿ ಆಟಗಾರರು ರೋಬೋಟ್ಗಳಲ್ಲ. ಅವರು ಎಲ್ಲಾ ಸಂದರ್ಭಗಳಲ್ಲಿಯೂ ಬೆಂಬಲವನ್ನು ನಿರೀಕ್ಷಿಸುತ್ತಾರೆ" ಎಂದು ಕೆವಿನ್ ಪೀಟರ್ಸನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್: ಭಾರತಕ್ಕೆ ಸೋಲುಣಿಸಿದ ಕಿವೀಸ್ ಪಡೆ; ವಿಶ್ವಕಪ್ ಕನಸು ಬಹುತೇಕ ಭಗ್ನ
ಈ ಟ್ವೀಟ್ಅನ್ನು ಪೀಟರ್ಸನ್ ಹಿಂದಿಯಲ್ಲಿ ಮಾಡಿ ಗಮನಸೆಳೆದಿದ್ದಾರೆ. ಭಾರತೀಯ ಆಟಗಾರರಿಗೆ ಅಭಿಮಾನಿಗಳು ಹಾಗೂ ವಿಶ್ಲೇಷಕರು ಸಾಕಷ್ಟು ಕಟು ಟೀಕೆಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ ಕೆವಿನ್ ಪೀಟರ್ಸನ್ ತಮ್ಮ ಭಾವನೆಯನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಕೆಲ ರಣತಂತ್ರಗಳು ಹಾಗೂ ಆಟಗಾರರ ಹೊಡೆತಗಳ ಆಯ್ಕೆಯ ಬಗ್ಗೆ ಟೀಕೆಯನ್ನು ಮಾಡುತ್ತಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ಆಟಗಾರರ ಕ್ರಮಾಂಕವನ್ನು ಬದಲಿಸಿದ ಬಗ್ಗೆಯೂ ಇಲ್ಲಿ ಸಾಕಷ್ಟು ಪ್ರಶ್ನೆಗಳು ವ್ಯಕ್ತವಾಗುತ್ತಿದೆ. ಅನುಭವಿ ರೋಹಿತ್ ಶರ್ಮಾ ಆರಂಬಿಕನಾಗಿ ಕಣಕ್ಕಿಳಿಯುವ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದದ್ದು, ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿದು ವೈಫಲ್ಯವನ್ನು ಅನುಭವಿಸಿದ್ದು ಹಾಗೂ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ.
ಟಿ20 ವಿಶ್ವಕಪ್: ಫೈನಲ್ನಲ್ಲಿ ಪಾಕಿಸ್ತಾನದ ಜೊತೆ ಕಾದಾಟ ನಡೆಸಲಿರುವ ತಂಡವನ್ನು ಹೆಸರಿಸಿದ ಶೇನ್ ವಾರ್ನ್!
ಇನ್ನು ಭಾರತದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಕೂಡ ಟೀಮ್ ಇಂಡಿಯಾ ಆಟಗಾರರಿಗೆ ಬೆಂಬಲವನ್ನು ಸೂಚಿಸಿದ್ದಾರೆ. "ನಮ್ಮ ಆಟಗಾರರನ್ನು ಕಟುವಾಗಿ ಟೀಕಿಸದಿರಿ. ಅವರು ಅತ್ಯುತ್ತಮ ಕ್ರಿಕೆಟ್ ಆಟವನ್ನು ಸಾಮರ್ಥ್ಯವನ್ನು ಹೊಂದಿದ ಆಟಗಾರರು ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಒಂದು ಸೋಲಿನ ನಂತರ ಆಟಗಾರರು ಅತ್ಯಂತ ಹೆಚ್ಚು ನೊಂದಿರುತ್ತಾರೆ. ಆದರೆ ನ್ಯೂಜಿಲೆಂಡ್ ತಂಡ ಅತ್ಯುತ್ತಮ ಆಟವನ್ನು ಪ್ರದರ್ಶನ ಮಾಡಿತು. ಅವರು ಎಲ್ಲಾ ವಿಭಾಗಗಳಲ್ಲಿಯೂ ಅತ್ಯುತ್ತಮವಾದ ಪ್ರದರ್ಶನ ನೀಡುವಲ್ಲಿ ಸಫಲವಾದರು ಎಂದು ಹರ್ಭಜನ್ ಸಿಂಗ್ ನ್ಯೂಜಿಲೆಂಡ್ ತಮಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಪಂದ್ಯದ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡ ಪ್ರತಿಕ್ರಿಯಿಸಿದ್ದರು. "ಈ ಸೋಲು ತುಂಬಾ ವಿಲಕ್ಷಣವಾಗಿದೆ. ನನ್ನ ಪ್ರಕಾರ ಬ್ಯಾಟ್ ಹಾಗೂ ಬೌಲಿಂಗ್ನಲ್ಲಿ ನಮ್ಮ ತಂಡ ವ್ಯಕ್ತಪಡಿಸಿದ ಧೈರ್ಯ ಸಾಕಾಗಲಿಲ್ಲ ಎನಿಸುತ್ತದೆ. ನಾವು ರನ್ ಉಳಿಸಿಕೊಳ್ಳಲು ಹೆಚ್ಚಿನ ಗುರಿ ನೀಡಿರಲಿಲ್ಲ. ಅಲ್ಲದೆ ನಾವು ಅಂಗಳಕ್ಕಿಳಿಯುವಾಗ ಹೆಚ್ಚಿನ ಆತ್ಮ ಸ್ಥೈರ್ಯದೊಂದಿಗೆ ಕಣಕ್ಕಿಳಿದಿರಲಿಲ್ಲ ಎಂದಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರನಾಗಿ ನೀವು ಕಣಕ್ಕಿಳಿಯುತ್ತಿದ್ದೀರಿ ಎಂದರೆ ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆಗಳು ಇರುತ್ತದೆ. ಅದು ಕೇವಲ ಅಭಿಮಾನಿಗಳಿಂದ ಮಾತ್ರವೇ ಇರುವುದಿಲ್ಲ. ಆಟಗಾರರಿಂದಲೂ ಇರುತ್ತದೆ. ಹಾಗಾಗಿ ನಮ್ಮ ಆಟದಲ್ಲಿ ಯಾವಾಗಲೂ ಗೆಚ್ಚಿನ ಒತ್ತಡ ಇರುತ್ತದೆ. ನಾವು ಈ ಒತ್ತಡವನ್ನು ಸುದೀರ್ಘ ಕಾಲದಿಂದ ಸ್ವೀಕರಿಸಿದ್ದೇವೆ" ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಗೆಲ್ಲಲು ಈ ಮೂವರು ಭಾರತ ತಂಡದಲ್ಲಿ ಇರಲೇಬೇಕು: ಸಲ್ಮಾನ್ ಬಟ್
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಮೊದಲಿಗೆ ಬ್ಯಾಟಿಂಗ್ ನಡೆಸಿ ಕೇವಲ 110 ರನ್ಗಳಿಸಲಷ್ಟೇ ಶಕ್ತವಾಯಿತು. ಟೀಮ್ ಇಂಡಿಯಾ ಪರವಾಗಿ ಯಾರಿಂದಲೂ ಕೂಡ ಉತ್ತಮ ಜೊತೆಯಾಟ ಬಂದಿರಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ಉತ್ತಮ ಮೊತ್ತದ ಗುರಿ ನೀಡಲು ಸಾಧ್ಯವಾಗಲೇ ಇಲ್ಲ. ಭಾರತ ನೀಡಿದ 111 ರನ್ಗಳ ಗುರಿಯನ್ನು ನ್ಯೂಜಿಲೆಂಡ್ ಪಡೆ ಕೇವಲ 2 ವಿಕೆಟ್ ಕಳೆದುಕೊಂಡು 14ನೇ ಓವರ್ನ್ಲಲಿಯೇ ಗೆದ್ದು ಬೀಗಿತು. ಈ ಮೂಲಕ ನಿರ್ಣಾಯಕ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆ ಗೆಲುವು ಸಾಧಿಸಲು ಯಶಸ್ವಿಯಾಗಿದೆ.
ಈ ಬಾರಿಯ ವಿಶ್ವಕಪ್ನಲ್ಲಿ ಸೆಮಿಫೈನಲ್ ಹಂತಕ್ಕೇರಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಈ ಮೂಲಕ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ಗೇರುವ ಅವಕಾಶ ಬಹುತೇಕ ಕಮರಿದಂತಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಭಾರತ 8 ವಿಕೆಟ್ಗಳ ಅಂತರದಿಂದ ಕಳೆದುಕೊಂಡ ಕಾರಣ ಸತತ ಎರಡನೇ ಸೋಲು ಅನುಭವಿಸಿದೆ. ಈ ಸೋಲಿನ ಬಗ್ಗೆ ಈಗ ಸಾಕಷ್ಟು ಚರ್ಚೆ ನಡೆಯುತ್ತಿದ್ದು ತಮ್ಮದೇ ಆದ ವಿಶ್ಲೇಷಣೆಗಳನ್ನು ಮಾಡಿತ್ತಿದ್ದಾರೆ.
ಟೀಮ್ ಇಂಡಿಯಾ ತನ್ನ ಮುಂದಿನ ಪಂದದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯ ನವೆಂಬರ್ 3 ರಂದು ನಡೆಯಲಿದ್ದು ಅಬುಧಾಬಿಯಲ್ಲಿ ಆಯೋಜನೆಯಾಗಲಿದೆ.