ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡ ಹೀನಾಯ ಸೋಲು ಕಂಡಿದೆ. ಈ ಸೋಲಿನ ಬಳಿಕ ನಾಯಕ ಇಯಾನ್ ಮಾರ್ಗನ್ ತನ್ನ ನಿರ್ಧಾರವನ್ನು ಧೂಷಿಸಿಕೊಂಡಿದ್ದಾರೆ. ತನ್ನ ತಪ್ಪು ನಿರ್ಧಾರದಿಂದ ತಂಡ ಸೋಲು ಕಂಡಿದೆ ಎಂದು ಹೇಳಿಕೆ ನೀಡಿದ್ದಾರೆ.
ಆರ್ಸಿಬಿ ವಿರುದ್ದದ ಪಂದ್ಯದಲ್ಲಿ ಕೆಕೆಆರ್ ನಾಯಕ ಇಯಾನ್ ಮಾರ್ಗನ್ ಟಾಸ್ ಗೆದ್ದುಕೊಂಡಿದ್ದರು. ಆದರೆ ಮೊದಲಿಗೆ ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಘೋಷಿಸಿದ್ದರು. ಆದರೆ ಪಿಚ್ ಆರಂಭದಿಂದಲೇ ಬೌಲರ್ಗಳಿಗೆ ಸಂಪೂರ್ಣ ಸಹಕಾರವನ್ನು ನೀಡಲು ಆರಂಭಿಸಿತ್ತು. ಇದರ ಲಾಭವನ್ನು ಆರ್ಸಿಬಿ ಬೌಲರ್ಗಳು ಸೂಕ್ತ ರೀತಿಯಲ್ಲಿ ಬಳಸಿಕೊಂಡರು.
ಐಪಿಎಲ್ನಲ್ಲಿ 20 ಓವರ್ ಆಡಿಯೂ ದಾಖಲಾಗಿರುವ ಕಡಿಮೆ ಟೋಟಲ್ಗಳು
"ನನಗನಿಸುತ್ತದೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರಿಂದಲೇ ಇದು ಆರಂಭವಾಯಿತು. ಶೀಘ್ರವಾಗಿ ನಾಲ್ಕು ಐದು ವಿಕೆಟ್ ಕಳೆದುಕೊಂಡಾಗಲೇ ನಾವು ಅಸಮಾಧಾನಗೊಂಡೆವು. ಆರ್ಸಿಬಿ ಅದ್ಭುತವಾಗಿ ಬೌಲಿಂಗ್ ದಾಳಿ ನಡೆಸಿತು. ಆದರೆ ನಾವು ಅದಕ್ಕೆ ಪ್ರತಿಯಾಗಿ ಬ್ಯಾಟಿಂಗ್ನಲ್ಲಿ ಉತ್ತರವನ್ನು ನೀಡಲೇ ಬೇಕಿತ್ತು. ಇಬ್ಬನಿಯೂ ಇದ್ದ ಕಾರಣ ನಾವು ಬೌಲಿಂಗ್ ಆಯ್ಕೆ ಮಾಡಿಕೊಳ್ಳಬೇಕಿತ್ತು" ಎಂದು ಮಾರ್ಗನ್ ಪ್ರತಿಕ್ರಿಯಿಸಿದ್ದಾರೆ.
"ನಾವು ಅಗ್ರ ಕ್ರಮಾಂಕದ ಮೂರು ಬ್ಯಾಟ್ಸ್ಮನ್ಗಳ ಆಯ್ಕೆಗೆ ಬದ್ಧರಾಗಿದ್ದೇವೆ. ಅವರು ನಮ್ಮನ್ನು ಮುಂದೆ ಕೊಂಡೊಯ್ಯುತ್ತಾರೆ ಎಂದು ನಾವು ನಂಬುತ್ತೇವೆ. ಅವರು ಈ ಬಗ್ಗೆ ಈಗಾಗಲೇ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಆದ್ದರಿಂದ ಭಾರತೀಯ ಬ್ಯಾಟ್ಸ್ಮನ್ಗಳನ್ನು ಬೆಂಬಲಿಸುವುದು ಮುಖ್ಯವಾಗಿತ್ತು" ಎಂದು ಮಾರ್ಗನ್ ಹೇಳಿದ್ದಾರೆ.
ಐಪಿಎಲ್ 2020: ಕೆಕೆಆರ್ಗೆ ಭರ್ಜರಿಯಾಗಿ ಸೋಲಿನ ರುಚಿ ತೋರಿಸಿದ ಆರ್ಸಿಬಿ
ಕೆಕೆಆರ್ ಟೂರ್ನಿಯಲ್ಲಿ ಈವರೆಗೆ ಆಡಿದ ಹತ್ತು ಪಂದ್ಯಗಳ ಪೈಕಿ 5ರಲ್ಲಿ ಗೆದ್ದು 5 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ಈಗ ನಾಲ್ಕನೇ ಸ್ಥಾನದಲ್ಲಿದ್ದರೂ ಇಂದಿನ ಸೋಲು ಪ್ಲೇ ಆಫ್ ಹಂತಕ್ಕೇರಲು ಹಾದಿಯನ್ನು ಕಠಿಣಗೊಳಿಸಲಿದೆ. ಸದ್ಯ ರಾಜಸ್ಥಾನ್ ಹಾಗೂ ಪಂಜಾಬ್ ತಂಡಗಳು ಕೆಕೆಆರ್ಗಿಂತ ಕೇವಲ 2 ಅಂಕಗಳಷ್ಟು ಮಾತ್ರವೇ ಹಿಂದುಳಿದಿದೆ.