ಬಯೋಬಬಲ್ನಲ್ಲಿ ಸೋಂಕು
ಭಾರತದಲ್ಲಿ 2021ರ ಐಪಿಎಲ್ ಆರಂಭವಾಗಿ ಅರ್ಧದಷ್ಟು ಪಂದ್ಯಗಳು ಮುಗಿದಿದ್ದಾಗ ಬಯೋ ಬಬಲ್ ಒಳಗೆ ಕೋವಿಡ್-19 ಸೋಂಕಿನ ಪ್ರಕರಣಗಳು ಕಾಣಿಸಿಕೊಂಡವು. ಕೋಲ್ಕತ್ತಾ ನೈಟ್ ರೈಡರ್ಸ್ ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಸನ್ ರೈಸರ್ಸ್ ಹೈದರಾಬಾದ್ನ ವೃದ್ಧಿಮಾನ್ ಸಾಹ, ಡೆಲ್ಲಿ ಕ್ಯಾಪಿಟಲ್ಸ್ನ ಅಮಿತ್ ಮಿಶ್ರಾ, ಚೆನ್ನೈ ಸೂಪರ್ ಕಿಂಗ್ಸ್ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು.
ಕ್ವಾರಂಟೈನ್ನಿಂದ ಸುಸ್ತು
ಐಪಿಎಲ್ ಮುಂದೂಡಿದ ಬಳಿಕ ಆಸ್ಟ್ರೇಲಿಯಾ ಆಟಗಾರರು ಸ್ವದೇಶಕ್ಕೆ ತೆರಳು ಪರದಾಡಿದ್ದರು. ಭಾರತದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಿದ್ದರಿಂದ ಆಸ್ಟ್ರೇಲಿಯಾ ದೇಶ ಕೂಡ ಭಾರತದಿಂದ ಬರುವ ದೇಶಿಗರಿಗೆ ನಿರ್ಬಂಧ ಹೇರಿತ್ತು. ಹೀಗಾಗಿ ಐಪಿಎಲ್ ಮುಂದೂಡಿಕೆ ಬಳಿಕ ಆಸೀಸ್ ಆಟಗಾರರು ಮಾಲ್ಡೀವ್ಸ್ಗೆ ತೆರಳಿ ಅಲ್ಲಿಂದ ಮತ್ತೆ ಆಸ್ಟ್ರೇಲಿಯಾಕ್ಕೆ ಬಂದಿದ್ದರು. ಇಷ್ಟರಲ್ಲಾಗಲೇ ಕಾಂಗರೂ ದೇಶದ ಆಟಗಾರರು ಭಾರತದಲ್ಲಿ, ಮಾಲ್ಡೀವ್ಸ್ನಲ್ಲಿ ಮತ್ತು ಆಸ್ಟ್ರೇಲಿಯಾಕ್ಕೆ ವಾಪಸ್ ಬಂದ ಮೇಲೂ ಸಾಲು ಸಾಲು ಕ್ವಾರಂಟೈನ್ ಅನುಭವಿಸಿ ಸುಸ್ತಾಗಿದ್ದರು. ಅಕ್ಟೋಬರ್-ನವೆಂಬರ್ನಲ್ಲಿ ಟಿ20 ವಿಶ್ವಕಪ್ ಕೂಡ ನಡೆಯಲಿರುವುದರಿಂದ ಐಪಿಎಲ್ ಬದಿಗಿರಿಸಿ ವಿಶ್ವಕಪ್ನತ್ತ ಗಮನ ಹರಿಸಲು ಆಸೀಸ್ ಆಟಗಾರರು ಎದುರು ನೋಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ಯಾಟ್ ಕಮಿನ್ಸ್ ಆಡಲ್ಲ
'ಪ್ಯಾಟ್ ಕಮಿನ್ಸ್ ಮಲ್ಟಿ ಮಿಲಿಯನ್ ಡಾಲರ್ ಐಪಿಎಲ್ ಕಾಂಟ್ರ್ಯಾಕ್ಟ್ ಹೊಂದಿದ್ದಾರಾದರೂ ಈ ಸೀಸನ್ನ ಟೂರ್ನಿಗೆ ವಾಪಸ್ಸಾಗುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ,' ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಹೇಳಿದೆ. ಕೋವಿಡ್ ಕಾರಣದಿಂದ ಐಪಿಎಲ್ ಮುಂದೂಡಲ್ಪಟ್ಟ ಕೆಲವೇ ದಿನಗಳಲ್ಲಿ ಕಮಿನ್ಸ್ ಕೂಡ ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು.