ನಾಟಿಂಗ್ಹ್ಯಾಮ್, ಆಗಸ್ಟ್ 9: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಸನಿಹದಲ್ಲಿದ್ದರೂ ಮಳೆಯ ಕಾರಣದಿಂದಾಗಿ ಗೆಲುವು ಸಾಧ್ಯವಾಗಲಿಲ್ಲ. ಅಂತಿಮ ದಿನದಾಟದಲ್ಲಿ ಸುಲಭ ಗುರಿ ಭಾರತದ ಮುಂದಿದ್ದರೂ ಮಳೆ ಅಡ್ಡಿಯಾದ ಕಾರಣದಿಂದಾಗಿ ಪಂದ್ಯ ಡ್ರಾಗೊಂಡಿತು. ಭಾರೀ ಮಳೆಯಿಂದಾಗಿ ಅಂತಿಮ ದಿನ ಒಂದೂ ಎಸೆತ ಕಾಣದೆ ಪಂದ್ಯ ಡ್ರಾ ಗೊಂಡಿತು. ಈ ಮೂಲಕ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಹಾಗೂ ಅಭಿಮಾನಿಗಳು ನಿರಾಸೆಯನ್ನು ಅನುಭವಿಸಿದ್ದಾರೆ. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದು ಇಂಗ್ಲೆಂಡ್ನಲ್ಲಿದ್ದು ಒಂದು ತಿಂಗಳುಗಳ ಕಾಲ ನಡೆಸಿದ ಸಿದ್ಧತೆ ಯಶಸ್ಸು ಕಂಡಿದೆ ಎಂದಿದ್ದಾರೆ.
"ಈ ಪಂದ್ಯದಲ್ಲಿ ನಾವು ಸಾಗಿದ ರೀತಿ ನಿಜಕ್ಕೂ ಉತ್ತಮವಾಗಿತ್ತು. ನಮ್ಮ ಬ್ಯಾಟಿಂಗ್ ಕೂಡ ಉತ್ತಮವಾಗಿತ್ತು. ಹವಾಮಾನ ವೈಪರಿತ್ಯದೊಂದಿಗೆ ಸವಾಲಿನ ಪಿಚ್ ಒಳಗೆ ಹೊರಗೆ ಮಾಡುತ್ತಿತ್ತು. ಹೀಗಾಗಿ ಏಕಾಗ್ರತೆಯನ್ನು ಕಾಯ್ದುಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ ನಾವು ಉತ್ತಮವಾಗಿ ಪ್ರದರ್ಶನ ನೀಡಲು ಯಶಸ್ವಿಯಾದೆವು" ಎಂದು ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ ಕೆಎಲ್ ರಾಹುಲ್ ಹೇಳಿಕೆ ನೀಡಿದ್ದಾರೆ.
ಇನ್ನು ಆತಿಥೇಯ ರಾಷ್ಟ್ರವನ್ನು ಆರಂಭದಿಂದಲೇ ಹಿಮ್ಮೆಟ್ಟಿಸುವ ಮೂಲಕ ಪಂದ್ಯದುದ್ದಕ್ಕೂ ಭಾರತೀಯ ತಂಡ ತೀವ್ರತೆಯನ್ನು ಕಾಯ್ದುಕೊಂಡಿತ್ತು ಎಂದು ಕೆಎಲ್ ರಾಹುಲ್ ಹೇಳಿದ್ದಾರೆ. "ನನ್ನ ಪ್ರಕಾರ ನಮ್ಮ ತಂಡದ ಶಕ್ತಿ ಅದ್ಭುತವಾಗಿತ್ತು. ಕಳೆದ ಒಂದು ತಿಂಗಳಿನಿಂದ ನಾವು ನಡೆಸಿದ ಸಿದ್ಧತೆ ಎಲ್ಲವೂ ಉತ್ತಮವಾಗಿ ಕಾರ್ಯರೂಪಕ್ಕೆ ಬಂದಿತ್ತು. ಇದು ಸರಣಿಯಲ್ಲಿ ನಮಗೆ ದೊರೆತ ಅತ್ಯುತ್ತಮ ಆರಂಭವಾಗಿದೆ. ನಾವು ನಮ್ಮ ಪ್ರದರ್ಶನವನ್ನು ಮತ್ತಷ್ಟು ಉತ್ತಮವಾಗಿಸುತ್ತಾ ಸಾಗುವ ಭರವಸೆಯನ್ನು ಹೊಂದಿದ್ದೇವೆ" ಎಂದು ಕೆಎಲ್ ರಾಹುಲ್ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಕೆಎಲ್ ರಾಹುಲ್ ಜಸ್ಪ್ರಿತ್ ಬೂಮ್ರಾ ಬಗ್ಗೆ ಕೇಳಿದ ಪ್ರಶ್ನೆಗೆ ಅಚ್ಚರಿಯನ್ನು ವ್ಯಕ್ತಪಡಿಸಿದರು. ಬೂಮ್ರಾ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದಾಗಿನಿಂದಲೂ ನಮ್ಮ ತಂಡದ ಪ್ರಮುಖ ಆಟಗಾರ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಜಸ್ಪ್ರೀತ್ ಬೂಮ್ರಾ 9 ವಿಕೆಟ್ ಪಡೆದಿದ್ದಾರೆ. ಈ ಪ್ರದರ್ಶನದ ಮೂಲಕ ಜಸ್ಪ್ರೀತ್ ಬೂಮ್ರಾ ಮ್ಬ್ಯಾಕ್ ಮಾಡಿದಂತಿದೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬುದು ಪತ್ರಕರ್ತರ ಪ್ರಶ್ನೆಯಾಗಿತ್ತು. ಈ ಪ್ರಶ್ನೆ ಕೆಎಲ್ ರಾಹುಲ್ಗೆ ಅಚ್ಚರಿಯನ್ನು ಮೂಡಿಸಿತ್ತು.
"ಸರ್ ನೀವು ಬೂಮ್ರಾ ಕಮ್ಬ್ಯಾಕ್ ಮಾಡಿದ್ದಾರೆ ಎಂದು ಯಾಕೆ ಕೇಲುತ್ತಿದ್ದೀರಿ ಎಂದು ಅರ್ಥವಾಗುತ್ತಿಲ್ಲ. ಪ್ರತಿ ಬಾರಿತೂ ಪ್ರತಿ ಪಂದ್ಯದಲ್ಲಿಯೂ ಆತ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆತ ನಮ್ಮ ನಂಬರ್ 1 ಬೌಲರ್. ಕ್ರಿಕೆಟ್ಗೆ ಕಾಲಿಟ್ಟ ಆರಂದಿಂದಲೂ ಅವರು ನೀಡುತ್ತಿರುವ ಪ್ರದರ್ಶನದಿಂದ ಸಾವು ಸಂತಸಗೊಂಡಿದ್ದೇವೆ. ಯಾವಾಗೆಲ್ಲ ಅವರು ಭಾರತ ತಂಡಕ್ಕಾಗಿ ಆಡಿದ್ದಾರೋ ಆತನೋರ್ವ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಮತ್ತೊಮ್ಮೆ ಅಂತಾ ಪ್ರದರ್ಶನ ನೀಡಿರುವುದಕ್ಕೆ ನಾವು ಸಂತಸಗೊಂಡಿದ್ದೇವೆ. "
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮೊದಲಿಗೆ ಇಂಗ್ಲೆಂಡ್ ತಂಡವನ್ನು 183 ರನ್ಗಳಿಗೆ ಆಲೌಟ್ ಮಾಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದ್ದರು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಭಾರತದ ಪರವಾಗಿ ಕೆಎಲ್ ರಾಹುಲ್ ಉತ್ತಮ ಕೊಡುಗೆಯನ್ನು ನೀಡಿದರು. ಇದರ ಪರಿಣಾಮವಾಗಿ ಭಾರತ 278 ರನ್ಗಳನ್ನು ಗಳಿಸುವ ಮೂಲಕ 95 ರನ್ಗಳ ಮುನ್ನಡೆಯನ್ನು ಪಡೆದುಕೊಂಡಿತ್ತು. ನಂತರ ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಶತಕದ ಕೊಡುಗೆಯನ್ನು ನೀಡುವ ಮೂಲಕ ಆಸರೆಯಾದರು. ದ್ವಿತೀಯ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 303 ರನ್ಗಳನ್ನು ಗಳಿಸಿತು. ಈ ಮೂಲಕ ಭಾರತ ಗೆಲುವು ಸಾಧಿಸಲು ಅಂತಿಮ ಇನ್ನಿಂಗ್ಸ್ನಲ್ಲಿ 209 ರನ್ಗಳ ಗುರಿಯನ್ನು ಪಡೆದುಕೊಂಡಿತ್ತು. ಇದನ್ನು ಬೆನ್ನಟ್ಟಿದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ 52 ರನ್ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತ್ತು. ಆದರೆ ಅಂತಿಮ ದಿನದಾಟದಲ್ಲಿ ಒಂದೂ ಎಸೆತ ಸಾಧ್ಯವಾಗದ ಕಾರಣ ಅಂತಿಮವಾಗಿ ಪಂದ್ಯವನ್ನು ಡ್ರಾ ಎಮದು ಘೋಷಿಸಲಾಗಿದೆ.