ನಮ್ಮ ತಂಡ ಈ ವಿಷಯದಲ್ಲಿ ಎಡವಿತು ಎಂದ ರಾಹುಲ್
ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಏಕದಿನ ಪಂದ್ಯದಲ್ಲಿ ನಮ್ಮ ತಂಡ ಒಂದಿಷ್ಟು ಅಂಶಗಳಲ್ಲಿ ಎಡವಿತು ಎನ್ನುವುದನ್ನು ಬಿಚ್ಚಿಡುವುದರಲ್ಲಿ ಯಾವುದೇ ನಾಚಿಕೆ ಇಲ್ಲ ಎಂದು ಹೇಳುವ ಮೂಲಕ ಕೆ ಎಲ್ ರಾಹುಲ್ ಪಂದ್ಯ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನ್ನು ಆರಂಭಿಸಿದರು. ಇನ್ನೂ ಮುಂದುವರಿದು ಮಾತನಾಡಿದ ಕೆಎಲ್ ರಾಹುಲ್ ನಮ್ಮ ತಂಡದ ಬ್ಯಾಟ್ಸ್ಮನ್ಗಳ ಶಾಟ್ ಸೆಲೆಕ್ಷನ್ ಕಳಪೆಯಾಗಿತ್ತು ಮತ್ತು ಬೌಲಿಂಗ್ ವಿಭಾಗ ಕೂಡ ಸತತವಾಗಿ ಉತ್ತಮ ರೀತಿಯಲ್ಲಿ ಬೌಲಿಂಗ್ ಮಾಡುವಲ್ಲಿ ವಿಫಲವಾಯಿತು ಎಂದು ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ತೃತೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಲು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳು ಕಾರಣವಾದವು ಎಂಬುದನ್ನು ರಾಹುಲ್ ತಿಳಿಸಿದ್ದಾರೆ.
ಉತ್ತಮ ಪ್ರದರ್ಶನ ನೀಡಿದರೂ ಎದುರಾಳಿಗಳ ಮೇಲೆ ಒತ್ತಡವನ್ನು ಹೇರಲು ಆಗಲಿಲ್ಲ
ಇನ್ನು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೂಡ ನಮ್ಮ ತಂಡದ ಆಟಗಾರರು ಎದುರಾಳಿಗಳ ಮೇಲೆ ಸತತವಾಗಿ ಒತ್ತಡವನ್ನು ಹೇರಲು ಆಗಲಿಲ್ಲ ಎಂದು ಕೆ ಎಲ್ ರಾಹುಲ್ ಹೇಳಿದ್ದಾರೆ. ಆದರೆ, ಇದರಲ್ಲಿ ಆಟಗಾರರ ತಪ್ಪಿದೆ ಎಂದು ಹೇಳಲು ನಾನು ಇಚ್ಛಿಸುವುದಿಲ್ಲ ಏಕೆಂದರೆ ಇಂತಹ ತಪ್ಪುಗಳು ಆಗಾಗ ಆಗುತ್ತವೆ ಎಂದು ಕೆಎಲ್ ರಾಹುಲ್ ತಿಳಿಸಿದ್ದಾರೆ.
ದೀಪಕ್ ಚಹರ್ ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟಿದ್ದರು
ಇನ್ನು ದೀಪಕ್ ಚಹರ್ 34 ಎಸೆತಗಳಿಗೆ 54 ರನ್ ಬಾರಿಸಿ ಗೆಲುವಿನ ಭರವಸೆಯನ್ನು ಹುಟ್ಟುಹಾಕಿದ್ದರು. ಈ ಕುರಿತು ವಿಶೇಷವಾಗಿ ಮಾತನಾಡಿರುವ ಕೆ ಎಲ್ ರಾಹುಲ್ ದೀಪಕ್ ಚಹರ್ ತಂಡಕ್ಕೆ ಗೆಲ್ಲುವ ನಿಜವಾದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು, ಆದರೆ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ನಮ್ಮ ತಂಡ ಎಡವಿತು ಮತ್ತು ಇದರಿಂದ ಪಾಠವನ್ನು ಕೂಡ ಕಲಿತೆವು ಎಂದು ರಾಹುಲ್ ಹೇಳಿದ್ದಾರೆ. ಈ ಮೂಲಕ ಪಂದ್ಯದ ಕೊನೆಯಲ್ಲಿ ದೀಪಕ್ ಚಹರ್ ಗೆಲ್ಲುವ ಅವಕಾಶವನ್ನು ಕಲ್ಪಿಸಿಕೊಟ್ಟರೂ ಕೂಡ ಆಟಗಾರರು ಉತ್ತಮ ಪ್ರದರ್ಶನ ನೀಡದೇ ಇರುವುದು ಸೋಲಿಗೆ ಕಾರಣವಾಯಿತು ಎಂಬುದನ್ನು ಕೆಎಲ್ ರಾಹುಲ್ ಪರೋಕ್ಷವಾಗಿ ತಿಳಿಸಿದ್ದಾರೆ.