ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲನ್ನ ಕಂಡಿದೆ. ಟೆಸ್ಟ್ ಸರಣಿಯಲ್ಲಿ 1-2 ಅಂತರದಲ್ಲಿ ಸೋತ ಭಾರತ, ಏಕದಿನ ಸರಣಿಯಲ್ಲಿ ಈಗಾಗಲೇ 0-3 ಅಂತರದಲ್ಲಿ ಮುಗ್ಗರಿಸಿತು.
ಏಕದಿನ ಸರಣಿಯಲ್ಲಿ ವೈಟ್ ವಾಶ್ ಅವಮಾನ ಎದುರಿಸಿದ ಭಾರತ, ದಕ್ಷಿಣ ಆಫ್ರಿಕಾದಲ್ಲಿ ಅನುಭವಿಸಿದ ಕೆಟ್ಟ ಸೋಲುಗಳಲ್ಲಿ ಇದು ಒಂದಾಗಿದೆ. ಆದ್ರೆ ಈ ಸೋಲಿನ ಬಳಿಕ ಏಕದಿನ ಸರಣಿಯ ನಾಯಕರಾಗಿದ್ದ ಕೆಎಲ್ ರಾಹುಲ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸೋಲಿನ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿರುವ ರಾಹುಲ್, ಕಷ್ಟದ ಪ್ರಯಾಣಗಳು ನನ್ನನ್ನು ಸುಧಾರಿಸಲು ಮತ್ತು ಬಲವಾಗಿ ಬೆಳೆಯಲು ಸಹಾಯ ಮಾಡುತ್ತದೆ ಎಂದು ಬರೆದಿದ್ದಾರೆ. ದೇಶವನ್ನು ಮುನ್ನಡೆಸುವುದೇ ದೊಡ್ಡ ಗೌರವ ಎಂದರು. ಇದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸಬೇಕು ಮತ್ತು ಅದನ್ನು ಎಂದಿಗೂ ಬಿಡಬಾರದು ಎಂದು ಹೇಳಿದರು. ಕೊನೆಗೂ ರಾಹುಲ್ ತಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
Difficult journeys help you to improve and grow stronger.
— K L Rahul (@klrahul11) January 24, 2022
The results might not have gone our way, but we will learn from the mistakes.
Leading the country was a great honour, a proud moment which cannot be described in words. pic.twitter.com/jc7dNQlEeJ
ನಾಯಕನಾಗಿ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರಾಹುಲ್ ನಿರಾಶೆಗೊಂಡರು. ಒಂದು ಟೆಸ್ಟ್ ಪಂದ್ಯ ಸೇರಿದಂತೆ ಒಟ್ಟು 4 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದರು, ಆದರೆ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರಾಹುಲ್ ಮೊದಲ ಬಾರಿಗೆ ಭಾರತವನ್ನು ಮುನ್ನಡೆಸಿದರು. ಜೋಹಾನ್ಸ್ಬರ್ಗ್ನಲ್ಲಿ ನಡೆದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ನಾಯಕತ್ವ ವಹಿಸಿದ್ದರು. ಆದರೆ ಈ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳಿಂದ ಸೋಲು ಕಂಡಿತ್ತು. ನಂತರ ಮೂರನೇ ಟೆಸ್ಟ್ನಲ್ಲಿ ಸೋತು ಸರಣಿಯನ್ನು ಕಳೆದುಕೊಂಡಿತು. ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ಗೆ ಲಭ್ಯರಿದ್ದರೂ ಫಲಿತಾಂಶ ಉತ್ತಮವಾಗಿರಲಿಲ್ಲ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ಗಳಿಂದ ಸೋತಿತ್ತು. ನಂತರ ಎರಡನೇ ಏಕದಿನ ಪಂದ್ಯದಲ್ಲಿ 7 ವಿಕೆಟ್ಗಳಿಂದ ಸೋತಿತ್ತು. ಮೂರನೇ ಏಕದಿನ ಪಂದ್ಯದಲ್ಲಿ 4 ರನ್ಗಳಿಂದ ಸೋತಿತ್ತು. ಈ ಏಕದಿನ ಸರಣಿಯಲ್ಲಿ ರಾಹುಲ್ ಬ್ಯಾಟ್ಸ್ಮನ್ ಆಗಿಯೂ ಮಿಂಚಲಿಲ್ಲ.
ರಾಹುಲ್ ಆಟಗಾರನಾಗಿ ಅಷ್ಟೇ ಅಲ್ಲದೆ ನಾಯಕನಾಗಿ ಅವರ ವೈಫಲ್ಯದ ತಂತ್ರಗಳಿಗಾಗಿ ಟೀಕೆಗೆ ಒಳಗಾಗಿದ್ದಾರೆ. ಈ ಮೂಲಕ ಟೀಂ ಇಂಡಿಯಾದ ಭವಿಷ್ಯದ ನಾಯಕ ಎಂದು ಬಿಂಬಿತವಾಗಿರುವ ಕೆ.ಎಲ್ ರಾಹುಲ್ ಸಾಮರ್ಥ್ಯದ ಮೇಲೆ ಅನುಮಾನ ಮೂಡಿಸಿದೆ. ಟೀಂ ಇಂಡಿಯಾದ ಮುಂದಿನ ನಾಯಕನಾಗಲು ರಾಹುಲ್ ಸೂಕ್ತ ವ್ಯಕ್ತಿಯಲ್ಲ ಎಂಬ ಆಕ್ಷೇಪಗಳಿವೆ. ಆದರೆ, ಇಂತಹ ಸನ್ನಿವೇಶದಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಹಲವು ಮಾಜಿ ಆಟಗಾರರು ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ.