ಕೊಹ್ಲಿ ತಪ್ಪನ್ನು ಕಂಡಿದ್ದೇವೆ, ಡು ಪ್ಲೆಸಿಸ್ ಮತ್ತು ಸಂಜಯ್ ಬಂಗರ್ ಆಗಮನ ಆರ್ಸಿಬಿಯನ್ನು ಬದಲಿಸಿದೆ
ಕೋಚ್ ಆಗಿ ಸಂಜಯ್ ಬಂಗರ್ ಮತ್ತು ನಾಯಕನಾಗಿ ಫಾಫ್ ಡು ಪ್ಲೆಸಿಸ್ ಆಗಮಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯೋಚನೆಗಳು ಬದಲಾಗಿವೆ ಎಂದು ವಿರೇಂದ್ರ ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ ಆಟಗಾರನೋರ್ವ ಒಂದೆರಡು ಪಂದ್ಯಗಳಲ್ಲಿ ಕೆಟ್ಟ ಪ್ರದರ್ಶನ ನೀಡಿದರೆ ಸಾಕು ಆತನನ್ನು ವಿರಾಟ್ ಕೊಹ್ಲಿ ತಂಡದಿಂದ ಕೈಬಿಡುತ್ತಿದ್ದರು. ಆದರೆ, ಫಾಫ್ ಡು ಪ್ಲೆಸಿಸ್ ಆ ರೀತಿ ಮಾಡದೇ ಆಟಗಾರರಿಗೆ ಪದೇ ಪದೇ ಅವಕಾಶಗಳನ್ನು ನೀಡಿದರು, ಅನುರಾಜ್ ರಾವತ್ ಬದಲಾಗಿ ರಜರ್ ಪಾಟಿದರ್ ಅವರನ್ನು ಕಣಕ್ಕಿಳಿಸಿದ್ದನ್ನು ಬಿಟ್ಟರೆ ಫಾಫ್ ಮತ್ತು ಬಂಗರ್ ಜೋಡಿ ಹೆಚ್ಚೇನೂ ಬದಲಾವಣೆಗೆ ಕೈ ಹಾಕಲಿಲ್ಲ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಈ ಮೂಲಕ ಈ ಬದಲಾವಣೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿಗೆ ಸಹಾಯ ಮಾಡಿದೆ ಎಂದು ಸೆಹ್ವಾಗ್ ಪರೋಕ್ಷವಾಗಿ ತಿಳಿಸಿದ್ದಾರೆ.
ಆರ್ಸಿಬಿ ಈ ಬಾರಿ ಮತ್ತಷ್ಟು ಬಲಿಷ್ಠ
ಇನ್ನೂ ಮುಂದುವರೆದು ಮಾತನಾಡಿದ ವಿರೇಂದ್ರ ಸೆಹ್ವಾಗ್ ಇಷ್ಟು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಾಳಿಗಳು ಎಬಿ ಡಿ ವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿಯನ್ನು ಮಾತ್ರ ಕಟ್ಟಿಹಾಕಬೇಕಿತ್ತು ಆದರೆ, ಈ ಬಾರಿ ನಾಲ್ವರು ಬಲಿಷ್ಠ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಈ ಆಟಗಾರರಲ್ಲಿ ನಾನು ಬೌಲರ್ಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದಿರುವ ಸೆಹ್ವಾಗ್ ಕೊಹ್ಲಿ, ಡು ಪ್ಲೆಸಿಸ್, ಮ್ಯಾಕ್ಸ್ವೆಲ್ ಮತ್ತು ದಿನೇಶ್ ಕಾರ್ತಿಕ್ ಈ ನಾಲ್ವರು ಆಟಗಾರರನ್ನು ಕಟ್ಟಿಹಾಕುವುದು ಎದುರಾಳಿಗಳಿಗೆ ಕಷ್ಟವಾಗಿದೆ ಎಂದಿದ್ದಾರೆ.
ಆರ್ಸಿಬಿ ಕಪ್ ಗೆಲ್ಲಲು ಇನ್ನೂ ಮೂರು ಪಂದ್ಯ ಗೆಲ್ಲಬೇಕು
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇಆಫ್ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಆರ್ಸಿಬಿ ಅರ್ಹತೆ ಪಡೆದುಕೊಳ್ಳಲಿದ್ದು, ಆ ಪಂದ್ಯದಲ್ಲಿ ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತು ಬರುವ ತಂಡದ ವಿರುದ್ಧ ಆರ್ಸಿಬಿ ಸೆಣಸಾಡಬೇಕಿದೆ. ಇನ್ನು ಈ ಪಂದ್ಯದಲ್ಲಿಯೂ ಗೆದ್ದರೆ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಡಲಿದೆ.