ಚೆಂಡನ್ನು ಟೆಂಬಾ ಬವುಮಾ ಕಡೆ ಜೋರಾಗಿ ಎಸೆದ ಕೊಹ್ಲಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡುವಾಗ 35ನೇ ಓವರ್ನಲ್ಲಿ ಬೌಲರ್ ಯಜುವೇಂದ್ರ ಚಾಹಲ್ ಎಸೆದ ಎಸೆತಕ್ಕೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಟೆಂಬಾ ಬವುಮಾ ಬ್ಯಾಟ್ ಬೀಸಿದರು. ಹೀಗೆ ಟೆಂಬಾ ಬವುಮಾ ಹೊಡೆದ ಚೆಂಡು ವಿರಾಟ್ ಕೊಹ್ಲಿ ಕೈ ಸೇರಿತು. ಆ ಸಂದರ್ಭದಲ್ಲಿ ಚೆಂಡನ್ನು ರಭಸವಾಗಿ ಸ್ಟಂಪ್ ಕಡೆಗೆ ವಿರಾಟ್ ಕೊಹ್ಲಿ ಎಸೆದರು. ಕೊಹ್ಲಿ ಎಸೆದ ಚೆಂಡು ಸ್ಟಂಪ್ ಬಳಿ ಇದ್ದ ಟೆಂಬಾ ಬವುಮಾಗೆ ಬೀಳುವುದರಲ್ಲಿತ್ತು. ಆದರೆ ತಕ್ಷಣವೇ ತೆಂಬಾ ಬವುಮಾ ನೆಲಕ್ಕೆ ಬಾಗುವುದರ ಮೂಲಕ ತಪ್ಪಿಸಿಕೊಂಡರು. ನಂತರ ಟೆಂಬಾ ಬವುಮಾ ಮತ್ತು ಕೊಹ್ಲಿ ನಡುವೆ ಮೈದಾನದಲ್ಲಿಯೇ ಮಾತಿನ ಚಕಮಕಿ ನಡೆಯಿತು.
ನಾನೀಗ ನಾಯಕನಲ್ಲ ಎಂದ ವಿರಾಟ್ ಕೊಹ್ಲಿ
ಹೀಗೆ ವಿರಾಟ್ ಕೊಹ್ಲಿ ಚೆಂಡನ್ನು ಎಸೆದ ಬೆನ್ನಲ್ಲೇ ಮೈದಾನದಲ್ಲಿಯೇ ಪ್ರತಿಕ್ರಿಯಿಸಿದ ತೆಂಬಾ ಬವುಮಾಗೆ ಪ್ರತ್ಯುತ್ತರ ನೀಡಿದ ವಿರಾಟ್ ಕೊಹ್ಲಿ 'ಏನು? ನೀನು ಸ್ಟಂಪ್ ಗೆರೆ ಬಿಟ್ಟು ಮುಂದೆ ಬಂದಿದ್ದೆ, ಹಾಗಾಗಿ ನಾನು ಚೆಂಡನ್ನು ಎಸೆದೆ. ನಾನು ಇನ್ನು ಮುಂದೆ ನಾಯಕನಲ್ಲ, ಹೀಗಾಗಿ ನಾನು ಪಂದ್ಯ ಮುಗಿದ ನಂತರ ಯಾರಿಗೂ ಉತ್ತರವನ್ನು ನೀಡಬೇಕಾಗಿಲ್ಲ. ಆದ್ದರಿಂದ ನೀನು ನಿನ್ನ ಮಿತಿಯಲ್ಲಿರುವುದು ಒಳ್ಳೆಯದು' ಎಂದು ಹೇಳಿದರು. ವಿರಾಟ್ ಕೊಹ್ಲಿ ಈ ರೀತಿ ಹೇಳಿರುವ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಮೂಲಕ ನಾಯಕನಾಗಿದ್ದ ದಿನಗಳಲ್ಲಿ ಪಂದ್ಯದ ವೇಳೆ ಯಾವುದೇ ರೀತಿ ವರ್ತಿಸಿದರೂ ಸಹ ಪಂದ್ಯ ಮುಗಿದ ನಂತರ ಉತ್ತರ ನೀಡಬೇಕೆಂಬ ಹೆದರಿಕೆ ಇತ್ತು ಆದರೆ ಈಗ ನಾಯಕನಾಗಿ ಇಲ್ಲದ ಕಾರಣ ನನಗೆ ಆ ರೀತಿಯ ಹೆದರಿಕೆ ಇಲ್ಲ ಎಂಬುದನ್ನು ವಿರಾಟ್ ಕೊಹ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ.
ಶತಕ ಬಾರಿಸಿದ ಬವುಮಾ
ತಂಡದ ಮೊದಲ 3 ವಿಕೆಟ್ಗಳನ್ನು ವೇಗವಾಗಿ ಕಳೆದುಕೊಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ತೆಂಬಾ ಬವುಮಾ 110 ರನ್ ಬಾರಿಸುವುದರ ಮೂಲಕ ಆಸರೆಯಾದರು. 148 ಎಸೆತಗಳಲ್ಲಿ 110 ರನ್ ಬಾರಿಸಿದ ಬವುಮಾ 8 ಬೌಂಡರಿ ಸಿಡಿಸಿದರು.