ಹುಬ್ಬಳ್ಳಿ, ಸೆ.12: ಆರ್ ವಿನಯ್ ಕುಮಾರ್ ಅವರ ನಾಯಕತ್ವದ ಬೆಳಗಾವಿ ಪ್ಯಾಂಥರ್ಸ್ ತಂಡ ಒಡೆಯರ್ ಕರ್ನಾಟಕ ಪ್ರಿಮಿಯರ್ ಲೀಗ್ 2014 ಫೈನಲ್ ತಲುಪಿದ ಬೆನ್ನಲ್ಲೇ ಚೊಚ್ಚಲ ಬಾರಿಗೆ ಮನೀಶ್ ಪಾಂಡೆ ನೇತೃತ್ವದ ಮೈಸೂರು ವಾರಿಯರ್ಸ್ ತಂಡ ಕೂಡಾ ಅಂತಿಮ ಹಣಾಹಣಿ ತಲುಪಿದೆ.
ಗುರುವಾರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಿಜಾಪುರ್ ಬುಲ್ಸ್ ತಂಡವನ್ನು 53 ರನ್ ಗಳಿಂದ ಬೆಳಗಾವಿ ಸೋಲಿಸಿ ಫೈನಲ್ ತಲುಪಿದರೆ, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಮಂಗಳೂರು ಯುನೈಟೆಡ್ ತಂಡವನ್ನು 60 ರನ್ ಗಳಿಂದ ಮಣಿಸಿ ಅಂತಿಮ ಹಣಾಹಣಿ ಸೇರಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡ 178ರನ್ ಗಳಿಸಿತು. ನಂತರ ಮಂಗಳೂರು ತಂಡವನ್ನು 118ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಗೆಲುವು ಸಾಧಿಸಿತು.
ಮೈಸೂರು ಪರ ಶಿಶಿರ್ ಭಾವನೆ 61 ರನ್ ಚೆಚ್ಚಿದರೆ, ಎಸ್ ಪಿ ಮಂಜುನಾಥ್ ಅವರು 8 ಎಸೆತಗಳಲ್ಲಿ 3 ಸಿಕ್ಸರ್ ಇದ್ದ 22 ರನ್, ಜೆ ಸುಚಿತ್ 10 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಿಡಿಸಿ 25 ರನ್ ಬಾರಿಸಿದರು. ಕೊನೆಯ ನಾಲ್ಕು ಓವರ್ ಗಳಲ್ಲಿ ಮೈಸೂರು ತಂಡ 76 ಚೆಚ್ಚಿದ್ದು ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. 16 ಓವರ್ ಗಳಲ್ಲಿ 102/5 ಇದ್ದ ಸ್ಕೋರ್ 20 ಓವರ್ ಗಳಲ್ಲಿ 178ರನ್ ಗೇರಿತು.
ಈ ಸ್ಕೋರ್ ಬೆನ್ನು ಹತ್ತಿದ ಮಂಗಳೂರು ಯುನೈಟೆಡ್ ತಂಡ 18 ಓವರ್ ಗಳಲ್ಲಿ 118 ಸ್ಕೋರಿಗೆ ಆಲೌಟ್ ಆಯಿತು. ಸ್ಪಿನ್ನರ್ ಸುಚಿತ್ ಹಾಗೂ ಮಧ್ಯಮ ವೇಗಿ ರಾಜು ಭಟ್ಕಳ ತಲಾ 3 ವಿಕೆಟ್ ಕಿತ್ತು ಮಂಗಳೂರು ತಂಡದ ಬೆನ್ನೆಲುಬು ಮುರಿದರು. ಮಂಗಳೂರು ಪರ ಸ್ಟಾರ್ ಆಟಗಾರ ಕರಣ್ ನಾಯರ್ ವಿಫಲರಾದರೆ, ಗಣೇಶ್ ಸತೀಶ್ 39 ರನ್ ಗಳಿಸಿ ಹೆಚ್ಚು ರನ್ ಹೊಡೆದ ಆಟಗಾರ ಎನಿಸಿದರು.
ಎರಡೂ ಸೆಮಿಫೈನಲ್ ಪಂದ್ಯಗಳಲ್ಲೂ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆಲುವು ಸಾಧಿಸಿದ್ದು ವಿಶೇಷ. ಅಂತಿಮ ಪಂದ್ಯ ಹುಬ್ಬಳ್ಳಿಯಲ್ಲೇ ಶುಕ್ರವಾರ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಸೋನಿ ಸಿಕ್ಸ್ ವಾಹಿನಿಯಲ್ಲಿ ನೇರ ಪ್ರಸಾರವಿರುತ್ತದೆ.
ಮಂಗಳೂರು ಯುನೈಟೆಡ್ 118 ಸ್ಕೋರಿಗೆ ಆಲೌಟ್ 18 ಓವರ್ಸ್ (ಗಣೇಶ್ ಸತೀಶ್ 39 (26b, 4x4, 1x6), ರೋಹಿತ್ ಸಭರವಾಲ್ 18 (24b, 3x4), ಚೇತನ್ ವಿಲಿಯಮ್ಸ್ 15 (10b, 1x4, 1x6), ಕರುಣ್ ನಾಯರ್ 15 (18b, 2x4) ಜೆ ಸುಚೀತ್ 3/9, ರಾಜು ಭಟ್ಕಳ 3/15, ಅಮಿತ್ ವರ್ಮಾ 1/23, ಬಿಎನ್ ಭರತ್ 1/29)
ಫಲಿತಾಂಶ : ಮಂಗಳೂರು ವಿರುದ್ಧ ಮೈಸೂರು ತಂಡಕ್ಕೆ 60 ರನ್ ಗಳಿಂದ ಜಯ.
ಪಂದ್ಯಶ್ರೇಷ್ಠ : ಶಿಶಿರ್ ಭಾವನೆ
ಸೆಮಿಫೈನಲ್ ನಲ್ಲಿ ಸೋತ ಮಂಗಳೂರು ಯುನೈಟೆಡ್ ತಂಡಕ್ಕೆ 2.5 ಲಕ್ಷ ರು ಲಭಿಸಿದೆ.