ಹುಬ್ಬಳ್ಳಿ, ಸೆ. 19: ಕೆಪಿಎಲ್ ಐದನೇ ಆವೃತ್ತಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಬಿಜಾಪುರ ಬುಲ್ಸ್ ತಂಡ ಸವಾರಿ ಮಾಡಿದೆ. ರಾಬಿನ್ ಉತ್ತಪ್ಪ ಅವರ ಪಡೆ ಸುಲಭವಾಗಿ ಕುನಾಲ್ ಅವರ ಹುಬ್ಳಿ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಹುಬ್ಳಿ ತಂಡ ನೀಡಿದ್ದ 189 ರನ್ ಗುರಿಯನ್ನು ಬಿಜಾಪುರ್ ಬುಲ್ಸ್ ತಂಡ ಇನ್ನು ಎರಡು ಎಸೆತ ಬಾಕಿ ಇರುವಂತೆಯೇ ಕೇವಲ ಮೂರು ವಿಕೆಟ್ ಕಳೆದುಕೊಂಡು ಸಾಧಿಸಿತು. ಆರ್ ಸಮರ್ಥ್ ಹಾಗೂ ನಾಯಕ ಉತ್ತಪ್ಪ ಅವರ ಬ್ಯಾಟಿಂಗ್ ಚೇಸಿಂಗ್ ಸುಲಭವಾಗಿಸಿತು.
ಬಿಜಾಪುರ್ ಇನ್ನಿಂಗ್ಸ್: ಆರ್ ಸಮರ್ಥ್ 54 ಎಸೆತಗಳಲ್ಲಿ 87 ರನ್ (7x4,3x6), ರಾಬಿನ್ ಉತ್ತಪ್ಪ 33 ಎಸೆತಗಳಲ್ಲಿ 51 (6X4, 1x6) ನೆರವಿನಿಂದ 19.4 ಓವರ್ ಗಳಲ್ಲಿ 191/3 ಸ್ಕೋರ್ ಮಾಡಿ ಸುಲಭವಾಗಿ ಟಾರ್ಗೆಟ್ ಮುಟ್ಟಿದರು.
ಆರಂಭಿಕ ಅಟಗಾರ ನವೀನ್ 20 ರನ್, ಭರತ್ ಚಿಪ್ಲಿ 11 ರನ್ ಗಳಿಸಿದರು. ಹುಬ್ಳಿ ಪರ ಸ್ಟಾಲಿನ್ ಹೂವರ್ 2 ವಿಕೆಟ್, ಶ್ರೀನಾಥ್ ಅರವಿಂದ್ 1 ವಿಕೆಟ್ ಪಡೆದರು.
Man of the match goes to R Samarth! #NammaKPL @kplbijapurbulls pic.twitter.com/ZsevqUuHXi
— Karbonn KPL (@KPLKSCA) September 19, 2016
ಹುಬ್ಳಿ ಇನ್ನಿಂಗ್ಸ್ : ಹುಬ್ಬಳ್ಳಿ ತಂಡ ಉತ್ತಮ ಆರಂಭ ಪಡೆಯಿತು ಮೊದಲ ವಿಕೆಟ್ ಗೆ 118 ರನ್ ಜೊತೆಯಾಟ ಕಲೆ ಹಾಕಿತು. ಆದರೆ, ನಂತರ ಮಧ್ಯಮ ಕ್ರಮಾಂಕದಲ್ಲಿ ನಿರಂತರ ವಿಕೆಟ್ ಕಳೆದುಕೊಂಡಿತು. 200 ರನ್ ಗಡಿ ದಾಟುವ ನಿರೀಕ್ಷೆ ಇತ್ತಾದರೂ 20 ಓವರ್ ಗಳಲ್ಲಿ 188/7 ಸ್ಕೋರ್ ಮಾಡಲಷ್ಟೇ ಸಾಧ್ಯವಾಯಿತು.
ಹುಬ್ಬಳ್ಳಿ ಪರ ಅಭಿಮನ್ಯು ಮಿಥುನ್, ನವೀನ್ ಎಂಜಿ, ಸಿನಾನ್ ಅಬ್ದುಲ್ ಖಾದರ್ ತಲಾ 2 ವಿಕೆಟ್ ಪಡೆದುಕೊಂಡರು. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಿಜಾಪುರದ ಆರ್ ಸಮರ್ಥ್ ಅವರು ಕಿತ್ತಳೆ ಟೋಪಿ ಕೂಡಾ ಪಡೆದರು. (ಒನ್ಇಂಡಿಯಾ ಸುದ್ದಿ)