ಮೈಸೂರು, ಆಗಸ್ಟ್ 25: ಬಾಲಂಗೋಚಿ ಬ್ಯಾಟ್ಸ್ಮನ್ ಅಭಿಷೇಕ್ ಭಟ್ ಅವರ ವೀರೋಚಿತ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್, ಶಿವಮೊಗ್ಗ ಲಯನ್ಸ್ ವಿರುದ್ಧ ಎರಡು ವಿಕೆಟ್ಗಳ ರೋಚಕ ಗೆಲುವು ಪಡೆಯಿತು.
ಕೈಯಲ್ಲಿದ್ದ ಸುಲಭದ ಗೆಲುವನ್ನು ಬೆಂಗಳೂರು ತಂಡಕ್ಕೆ ಒಪ್ಪಿಸಿದ ಶಿವಮೊಗ್ಗ, ನಿರಾಶೆ ಅನುಭವಿಸಿತು.
ಕೆಪಿಎಲ್: ಬೆಳಗಾವಿ ಪ್ಯಾಂಥರ್ಸ್ಗೆ 22 ರನ್ ಗೆಲುವು
ಟಾಸ್ ಗೆದ್ದ ಬೆಂಗಳೂರು ನಾಯಕ ರಾಬಿನ್ ಉತ್ತಪ್ಪ, ಶಿವಮೊಗ್ಗವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅವರ ಆಯ್ಕೆಯನ್ನು ಬೌಲರ್ಗಳು ಸಮರ್ಥಿಸಿಕೊಂಡರು.
ಶಿವಮೊಗ್ಗ ಮೊದಲ ವಿಕೆಟ್ಅನ್ನು ಬೇಗನೆ ಕಳೆದುಕೊಂಡರೂ, ಎರಡನೆಯ ವಿಕೆಟ್ಗೆ ನಿಹಾಲ್ ಉಲ್ಲಾಳ್ ಮತ್ತು ರೋಹಿತ್ ಕೆ. ಉತ್ತಮ ಜತೆಯಾಟ ನೀಡಿದ್ದರಿಂದ ಚೇತರಿಸಿಕೊಂಡಿತು. ನಾಯಕ ಅನಿರುದ್ಧ್ ಜೋಶಿ ಮತ್ತು ಜೊನಾಥನ್ ಆರ್. ತಂಡಕ್ಕೆ ನೆರವಾದರು. ಆದರೆ, ವೇಗದ ಆಟಕ್ಕೆ ಒತ್ತು ನೀಡದ ಕಾರಣ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
147 ರನ್ಗಳ ಸುಲಭದ ಗುರಿ ಬೆನ್ನತ್ತಿದ್ದ ಬೆಂಗಳೂರು ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಆರಂಭದಲ್ಲಿಯೇ ನಾಯಕ ರಾಬಿನ್ ಉತ್ತಪ್ಪ, ಎಂ. ವಿಶ್ವನಾಥನ್, ಕೆ.ಬಿ. ಪವನ್, ಅರ್ಶದೀಪ್ ಸಿಂಗ್ ಬ್ರಾರ್ ಮತ್ತು ಮನೋಜ್ ಭಾಂಡಗೆ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಸಂಕಷ್ಟದಲ್ಲಿದ್ದ ತಂಡಕ್ಕೆ ಎಡಗೈ ಬ್ಯಾಟ್ಸ್ಮನ್ ಪವನ್ ದೇಶಪಾಂಡೆ ನೆರವಾದರು. 23 ಎಸೆತಗಳಲ್ಲಿ 34 ರನ್ ಗಳಿಸಿದ್ದ ಪವನ್, ಔಟಾದ ಬಳಿಕ ಬೆಂಗಳೂರು ಮತ್ತೆ ಸೋಲಿನ ಸುಳಿಯಲ್ಲಿ ಸಿಲುಕಿತ್ತು. 84 ರನ್ಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಭರತ್ ದೇವರಾಜ್ ಮತ್ತು ಅಭಿಷೇಕ್ ಭಟ್ ಆಸರೆಯಾದರು.
ಭರತ್ ದೇವರಾಜ್ 38 (41) ಎಚ್ಚರಿಕೆಯ ಆಟವಾಡಿದರೆ, 19 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಆಕರ್ಷಕ ಸಿಕ್ಸರ್ನೊಂದಿಗೆ 40 ರನ್ ಬಾರಿಸಿದ ಅಭಿಷೇಕ್ ಭಟ್ ಪಂದ್ಯದ ಗತಿಯನ್ನೇ ಬದಲಿಸಿದರು.
ಭರತ್ ಮತ್ತು ಮಿತ್ರಕಾಂತ್ ಯಾದವ್ ಔಟಾದರೂ ಅಭಿಷೇಕ್ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು. ಕ್ಯಾಚ್ಗಳನ್ನು ಕೈಚೆಲ್ಲಿದಲ್ಲದೆ ಇತರೆ ರನ್ಗಳನ್ನು ನೀಡಿದ ಶಿವಮೊಗ್ಗ, ಅಂತ್ಯದಲ್ಲಿ ನೀಡಿದ ಕಳಪೆ ಬೌಲಿಂಗ್ ಪ್ರದರ್ಶನಕ್ಕೆ ಬೆಲೆ ತೆರಬೇಕಾಯಿತು.
ಸಂಕ್ಷಿಪ್ತ ಸ್ಕೋರ್
ಶಿವಮೊಗ್ಗ ಲಯನ್ಸ್: 146/6 (20) ನಿಹಾಲ್ ಉಲ್ಲಾಳ್ 34, ರೋಹಿತ್ ಕೆ. 36, ಜೊನಾಥನ್ ಆರ್. 37, ಅನಿರುದ್ಧ್ ಜೋಶಿ 28, ಅರ್ಷದೀಪ್ ಸಿಂಗ್ ಬ್ರಾರ್ 7/2, ಅಭಿಷೇಕ್ ಭಟ್ 16/1, ವಿ. ಕೌಶಿಕ್ 16/1
ಬೆಂಗಳೂರು ಬ್ಲಾಸ್ಟರ್ಸ್: 147/8 (19.1) ಪವನ್ ದೇಶಪಾಂಡೆ 34, ಭರತ್ ದೇವರಾಜ್ 38, ಅಭಿಷೇಕ್ ಭಟ್ 40, ಆದಿತ್ಯ ಸೋಮಣ್ಣ 34/3, ಪೃಥ್ವಿ ಶೆಕಾವತ್ 26/2, ಕಿಶೋರ್ ಕಾಮತ್ 14/1
ಫಲಿತಾಂಶ: ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಎರಡು ವಿಕೆಟ್ ಜಯ
ಪಂದ್ಯ ಶ್ರೇಷ್ಠ: ಅಭಿಷೇಕ್ ಭಟ್