ಮೈಸೂರು, ಆಗಸ್ಟ್ 27: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಬಳ್ಳಾರಿ ಟಸ್ಕರ್ಸ್ ಮತ್ತು ಬಿಜಾಪುರ್ ಬುಲ್ಸ್ ನಡುವಿನ ಕೆಪಿಎಲ್ 14ನೇ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡ ಎರಡು ವಿಕೆಟ್ ಗೆಲುವು ಸಾಧಿಸಿದೆ.
ಕೆಪಿಎಲ್: ಮೈಸೂರು ವಾರಿಯರ್ಸ್ ವಿರುದ್ಧ ಹುಬ್ಳಿ ಟೈಗರ್ಸ್ ಗೆ ಜಯ
ಕೆಎನ್ ಭರತ್ ಅವರ 76 ರನ್ ನೆರವಿನೊಂದಿಗೆ ಬಿಜಾಪುರ್ ಬುಲ್ಸ್ ಗೆಲುವು ತನ್ನದಾಗಿಸಿಕೊಂಡಿತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಬಳ್ಳಾರಿ ತಂಡ 20 ಓವರ್ ಮುಕ್ತಾಯಕ್ಕೆ 9 ವಿಕೆಟ್ ಕಳೆದು 152 ರನ್ ಪೇರಿಸಿತ್ತು. ಚೇಸಿಂಗ್ ಗೆ ಇಳಿದ ಬಿಜಾಪುರ ತಂಡ 19.5 ಓವರ್ ಗಳಲ್ಲಿ 8 ವಿಕೆಟ್ ಕಳೆದು 154 ರನ್ ಪೇರಿಸುವುದರೊಂದಿಗೆ ಗೆಲುವಿನ ಸಂಭ್ರಮಾಚರಿಸಿತು.
ಮೊದಲು ಬ್ಯಾಟಿಂಗ್ ಗೆ ಇಳಿದ ಬಳ್ಳಾರಿ ಟಸ್ಕರ್ಸ್ ಗೆ ಬ್ಯಾಟ್ಸ್ಮನ್ ಗಳ ಪೂರ್ಣ ಬೆಂಬಲ ದೊರೆಯಲಿಲ್ಲ. ಆರಂಭಿಕ ಆಟಗಾರರಾದ ರೋಹನ್ ಕದಮ್ 52, ಸಿಎ ಕಾರ್ತಿಕ್ 45 ರನ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಶ್ರಮಿಸಿದರಾದರೂ ಉಳಿದ ಆಟಗಾರರ ಬೆಂಬಲ ತಂಡಕ್ಕೆ ಗಮನಾರ್ಹ ಮಟ್ಟಿನಲ್ಲಿ ದೊರೆಯದಾಯಿತು.
ಬಳ್ಳಾರಿ ಇನ್ನಿಂಗ್ಸ್ ವೇಳೆ ಬಿಜಾಪುರ್ ಬುಲ್ಸ್ ನ ಸಿಎ ಕಾರಿಯಪ್ಪ 3, ಜಹೂರ್ ಫಾರುಕಿ ಮತ್ತು ಕೆಪಿ ಅಪ್ಪಣ್ಣ ತಲಾ ಎರಡು ವಿಕೆಟ್ ಕೆಡವಿ ಕಾಡಿದರು. ಬಿಜಾಪುರ್ ಬುಲ್ಸ್ ಗೆ ಈ ಕೆಪಿಎಲ್ ಆವೃತ್ತಿಯಲ್ಲಿ ಸಿಕ್ಕ ಮೊದಲ ಜಯವಿದು.