‘ಕೆಪಿಎಲ್ ನಡೆಸಲು ಉತ್ಸುಕರಾಗಿದ್ದೇವೆ’
ಜುಲೈ 19ರ ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆ.ಎಸ್.ಸಿ.ಎ.) ನಡೆಸಿದ ಸುದ್ದಿಗೋಷ್ಠಿ ಕಮ್ ಕೆಪಿಎಲ್ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಸ್.ಸಿ.ಎ. ಅಧ್ಯಕ್ಷ ಸಂಜಯ್ ದೇಸಾಯಿ, ‘ಕರ್ನಾಟಕ ಪ್ರೀಮಿಯರ್ ಲೀಗ್ 7ನೇ ಆವೃತ್ತಿ ನಡೆಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಈ ಮಣ್ಣಿನ ಅಚ್ಚುಮೆಚ್ಚಿನ ಟೂರ್ನಮೆಂಟ್ ಆಗಿ ಬೆಳೆಯುತ್ತಿರುವ ಕೆಪಿಎಲ್ ಭಾರತದ ಅತ್ಯುತ್ತಮ ಪಂದ್ಯಾಟವಾಗಲಿದೆ' ಎಂದರು.
ಬಲಾಬಲ ಪ್ರದರ್ಶಿಸಲಿರುವ ಏಳು ತಂಡಗಳು
ಲಕ್ಷ್ಮೀ ವಿಲಾಸ್ ಬ್ಯಾಂಕ್ ಸಹಯೋಗದೊಂದಿದೆ ಕಾರ್ಬನ್ ಸ್ಮಾರ್ಟ್ ಫೋನ್ಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಕೆಪಿಎಲ್ 2018ರ ಈ ಸೀಸನ್ ನಲ್ಲಿ ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮೈಸೂರ್ ವಾರಿಯರ್ಸ್, ಶಿವಮೊಗ್ಗ ಲಯನ್ಸ್, ಬೆಂಗಳೂರು ಬ್ಲಾಸ್ಟರ್ಸ್ ಹೀಗೆ ಏಳು ತಂಡಗಳ ನಡುವೆ ಜಿದ್ದಾಜಿದ್ದಿ ನಡೆಯಲಿದ್ದು ಪಂದ್ಯಾಟ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಏಳೂ ಫ್ರಾಂಚೈಸಿಗಳು ಪ್ರತಿಭಾನ್ವಿತ ಆಟಗಾರರನ್ನು ಒಳಗೊಳ್ಳಲಿದ್ದು ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ದೊರೆಯಲಿದೆ.
ಅದ್ಭುತ ಪ್ರತಿಭೆಗಳ ಕುತೂಹಲಕಾರಿ ಸೀಸನ್
ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಸಿ.ಎ. ಕಾರ್ಯದರ್ಶಿ ಸುಧಾಕರ್ ರಾವ್ ಮಾಹಿತಿ ನೀಡಿ, ‘ಕ್ರೀಡಾಭಿಮಾನಿಗಳನ್ನು ಸೆಳೆಯಬಲ್ಲ ಮೂರು ಪ್ರಮುಖ ತಾಣಗಳಲ್ಲಿ ಪಂದ್ಯಗಳನ್ನು ನಡೆಸಲು ಬೇಕಾದ ತಯಾರಿ ನಡೆಸುತ್ತಿದ್ದೇವೆ. ಅದ್ಭುತ ಪ್ರತಿಭೆಗಳ ಮುಖಾಂತರ ಕುತೂಹಲಕಾರಿ ಕೆಪಿಎಲ್ ಸೀಸನ್ ಈ ಬಾರಿ ನೀಡಲಿದ್ದೇವೆ ಎಂದರು.
ದಿಗ್ಗಜರ ಸಮಾಗಮ
ಕೆಪಿಎಲ್ ಕುರಿತ ಪತ್ರಿಕಾಗೋಷ್ಠಿಯಲ್ಲಿ ಕ್ರಿಕೆಟ್ ದಿಗ್ಗಜರಾದ ಬಿಎಸ್ ಚಂದ್ರಶೇಖರ್, ಸೈಯದ್ ಕೀರ್ಮಾನಿ ಅವರ ಸಮಾಗಮ ಮೆರಗು ತಂದಿತು. ಪ್ರೊ ಕಬಡ್ಡಿ ಲೀಗ್ ನ ನಿರ್ದೇಶಕ, 2008ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಿಇಒ ಆಗಿದ್ದ ಚಾರು ಶರ್ಮಾ ಅವರ ನಿರೂಪಣೆ ಕಾರ್ಯಕ್ರಮವನ್ನು ನಿನ್ನಷ್ಟು ಚಂದವಾಗಿಸಿತು. ಕೆಪಿಎಲ್ ಆಡಳಿತ ಸಮಿತಿಯ ಸದಸ್ಯ ವಿನಯ್ ಮೃತ್ಯುಂಜಯ ಸಹಿತ ಏಳು ತಂಡಗಳ ಆಟಗಾರರು, ಫ್ರಾಂಚೈಸಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದವು.
ಕಿಚ್ಚನ ಮೆಚ್ಚು ಮಾತುಗಳು
ಕಾರ್ಯಕ್ರಮದ ಆಕರ್ಷಣೆಯ ಬಿಂದುವಾಗಿದ್ದ ನಟ ಕಿಚ್ಚ ಸುದೀಪ್ ಅವರು ಕೆಪಿಎಲ್ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು. ‘ಕೆಪಿಎಲ್ ಲೀಗೊಂದರಲ್ಲಿ ಆಡಿದ್ದೆ. ಹಾಗಾಗಿ ಹೆಚ್ಚು ಜನರ ಪರಿಚಯವಾಯ್ತು. ಸ್ನೇಹಿತರ ಬಳಗ ಇನ್ನಷ್ಟು ಬೆಳೆಯಿತು. ಎಲ್ಲದ್ದಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಬಗೆಗಿನ ನಿಜವಾದ ಅರಿವು, ಪ್ರೀತಿ ಬೆಳೆದಿದ್ದು ಕೆಪಿಎಲ್ ನಿಂದ. ಕೆಪಿಎಲ್ ಮೇಲಿನ ಪ್ರೀತಿ ಆಪ್ ಮೂಲಕವೂ ಪಂದ್ಯ ವೀಕ್ಷಿಸುವಷ್ಟರ ಮಟ್ಟಿಗೆ ಬೆಳೆಯಿತು' ಎಂದು ಸುದೀಪ್ ಹೇಳಿದರು. ಸುದೀಪ್ ಜೊತೆಗೆ ಮತ್ತೊಬ್ಬ ನಟಿ, ಕೆಪಿಎಲ್ ಬ್ರ್ಯಾಂಡ್ ಅಂಬಾಸಿಡರ್ ರಾಗಿಣಿ ದ್ವಿವೇದಿಯೂ ಕಣ್ಸೆಳೆದರು.
ಕರುಣ್ ನಾಯರ್ ಬದಲು ರಾಬಿನ್ ಉತ್ತಪ್ಪ!
ಜುಲೈ 21ರ ಶನಿವಾರ ನಡೆಯಲಿರುವ ಕೆಪಿಎಲ್ 2018ರ ಆಟಗಾರರ ಹರಾಜಿನಲ್ಲಿ ಕರುಣ್ ನಾಯರ್ ದುಬಾರಿ ಬೆಲೆಗೆ ಮಾರಾಟವಾಗುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಗಾಗಿ ಭಾರತ ತಂಡವನ್ನು ಪ್ರತಿನಿಧಿಸಲಿರುವುದರಿಂದ ನಾಯರ್ ಬದಲಿಗೆ ರಾಬಿನ್ ಉತ್ತಪ್ಪ ಕೆಪಿಎಲ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ರಾಬಿನ್ ಉತ್ತಪ್ಪ ಅವರೂ ಹರಾಜಿನಲ್ಲಿ ದುಬಾರಿ ಆಟಗಾರರೆನಿಸಲಿದ್ದಾರೆ.
ಹಿಂದಿನ ಆವೃತ್ತಿಗಳ ಚಾಂಪಿಯನ್ ಗಳು
ಹಿಂದಿನ ಆರು ಆವೃತ್ತಿಗಳಲ್ಲಿ 2008ರಲ್ಲಿ ಪ್ರಾವಿಡೆಂಟ್ ಬೆಂಗಳೂರು ರೂರಲ್, 2009ರಲ್ಲಿ ಮ್ಯಾಂಗಲೂರ್ ಉನೈಟೆಡ್, 2014ರಲ್ಲಿ ಮೈಸೂರ್ ವಾರಿಯರ್ಸ್, 2015ರಲ್ಲಿ ಬಿಜಾಪುರ್ ಬುಲ್ಸ್, 2016ರಲ್ಲಿ ಬಳ್ಳಾರಿ ಟಸ್ಕರ್ಸ್, 2017ರಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದವು. ಈ ಬಾರಿ ಚಾಂಪಿಯನ್ ಪಟ್ಟ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಹಿಂದಿನ ಆವೃತ್ತಿಗಳ ಚಾಂಪಿಯನ್ ಗಳು
ಹಿಂದಿನ ಆರು ಆವೃತ್ತಿಗಳಲ್ಲಿ 2008ರಲ್ಲಿ ಪ್ರಾವಿಡೆಂಟ್ ಬೆಂಗಳೂರು ರೂರಲ್, 2009ರಲ್ಲಿ ಮ್ಯಾಂಗಲೂರ್ ಯುನೈಟೆಡ್, 2014ರಲ್ಲಿ ಮೈಸೂರ್ ವಾರಿಯರ್ಸ್, 2015ರಲ್ಲಿ ಬಿಜಾಪುರ್ ಬುಲ್ಸ್, 2016ರಲ್ಲಿ ಬಳ್ಳಾರಿ ಟಸ್ಕರ್ಸ್, 2017ರಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದವು. ಈ ಬಾರಿ ಚಾಂಪಿಯನ್ ಪಟ್ಟ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.