ಬೆಂಗಳೂರು, ನವೆಂಬರ್ 07: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಮ್ಮ ಶಿವಮೊಗ್ಗ ತಂಡದ ಆಟಗಾರ ನಿಶಾಂತ್ ಸಿಂಗ್ ಶೇಖಾವತ್(29) ಬಂಧನ ಬಳಿಕ, ಇನ್ನಿಬ್ಬರು ಅನುಭವಿ ಆಟಗಾರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್, ಅಬ್ರಾರ್ ಕಾಜಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಂದು ಸಿಸಿಬಿ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
2019ರ ಆಗಸ್ಟ್ 31ರಂದು ಮೈಸೂರಿನ ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ ಫೈನಲ್ ಪಂದ್ಯವೇ ಫಿಕ್ಸ್ ಆಗಿತ್ತು ಎಂದು ಸಿಸಿಬಿ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಈ ಎರಡು ತಂಡದ ಆಟಗಾರರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಕರ್ನಾಟಕದ ಪರ ರಣಜಿ ಆಡುತ್ತಿದ್ದ ಸಿಎಂ ಗೌತಮ್ ಅವರು ಗೋವಾ ತಂಡಕ್ಕೆ ವಲಸೆ ಹೋಗಿ ಆ ತಂಡದ ನಾಯಕರಾಗಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ಆರ್ ಸಿಬಿ ಪರ ಕೂಡಾ ಆಡಿದ್ದಾರೆ.
ಕೆಪಿಎಲ್ : ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಲಿ ಬಂಧನ, 24 ಕ್ರಿಕೆಟರ್ಸ್ ಗೆ ಸಮನ್ಸ್
ಇದಕ್ಕೂ ಮುನ್ನ ನಮ್ಮ ಶಿವಮೊಗ್ಗ ತಂಡದ ನಿಶಾಂತ್ ಬಂಧಿಸಿದ್ದ ಸಿಸಿಬಿ, ಆತ ಚಂದೀಗಢ ಮೂಲದ ಬುಕ್ಕಿ ಮನೋಜ್ ಕುಮಾರ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ನಿಶಾಂತ್, 2018ರ ಕೆಪಿಎಲ್ ಏಳನೇ ಆವೃತ್ತಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲಿಂಗ್ ಕೋಚ್ ವಿನುಪ್ರಸಾದ್ ನನ್ನು ಕೂಡಾ ಈ ಜಾಲದಲ್ಲಿ ಸಿಲುಕಿಸಿದ್ದ ಎಂದಿದ್ದಾರೆ.
2015ರಿಂದ ಕೆಪಿಎಲ್ನಲ್ಲಿ ಆಡುತ್ತಿರುವ ನಿಶಾಂತ್, ಹುಬ್ಬಳ್ಳಿ ಟೈಗರ್ಸ್, ಮಂಗಳೂರು ಹಾಗೂ ಶಿವಮೊಗ್ಗ ತಂಡದಲ್ಲಿ ಆಡಿದ್ದಾರೆ. 2018ರ ಕೆಪಿಎಲ್ ನಲ್ಲಿ ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆದ ಹುಬ್ಬಳ್ಳಿ ಟೈಗರ್ಸ್- ಬೆಂಗಳೂರು ಬ್ಲಾಸ್ಟರ್ಸ್ ನಡುವಿನ ಪಂದ್ಯ ಫಿಕ್ಸ್ ಮಾಡಿದ ಆರೋಪವಿದೆ.
ಶಿವಮೊಗ್ಗ, ಬೆಳಗಾವಿ, ಬೆಂಗಳೂರು ಸೇರಿದಂತೆ ವಿವಿಧ ತಂಡಗಳ 34 ಕ್ರಿಕೆಟರ್ಸ್ ಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಕೆಪಿಎಲ್ ಜಾರಿಯಲ್ಲಿರುವಾಗಲೇ ಬೆಳಗಾವಿ ತಂಡದ ಮಾಲೀಕ ಅಲಿ ಅವರು ನಿಯಮ ಮೀರಿ ಬುಕ್ಕಿಗಳ ಜೊತೆ ಸಂಪರ್ಕ ಸಾಧಿಸಿದ್ದರು ಎಂಬ ಆರೋಪವಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದರು.
ಈ ಪಂದ್ಯ ನಡೆಯುವ ವಾರಕ್ಕೂ ಮುಂಚೆ ಮೈಸೂರಿನ ಹೋಟೆಲ್ವೊಂದರಲ್ಲಿ ಬುಕ್ಕಿ ಮನೋಜ್ನನ್ನು ಸಂರ್ಪಸಿದ್ದ ನಿಧಾನಗತಿಯಲ್ಲಿ ಆಡುವುದಕ್ಕಾಗಿ 5 ಲಕ್ಷ ರು ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಶ್ಫಾಕ್ ಅಲಿ, ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್, ನಮ್ಮ ಶಿವಮೊಗ್ಗದ ನಿಶಾಂತ್ ಸಿಂಗ್ ಬೆಂಗಳೂರು ಬ್ಲಾಸ್ಟರ್ ಕೋಚ್ ವಿನು ಪ್ರಸಾದ್, ಬ್ಯಾಟ್ಸ್ ಮನ್ ವಿಶ್ವನಾಥ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ದುಬೈ ಮೂಲದ ಬುಕ್ಕಿಯನ್ನು ಸಂಪರ್ಕಿಸಿದ್ದ ಅಲಿ, ಕೆಪಿಎಲ್ ನಲ್ಲಿ ವ್ಯವಸ್ಥಿತವಾಗಿ ಮ್ಯಾಚ್ ಫಿಕ್ಸಿಂಗ್ ದಂಧೆ ನಡೆಸುತ್ತಿದ್ದ ಎಂಬ ಆರೋಪವಿದೆ.