ಬೆಂಗಳೂರು, ಸೆ. 24: ಇತ್ತೀಚೆಗೆ ಮುಕ್ತಾಯವಾದ ಕರ್ನಾಟಕ ಪ್ರೀಮಿಯರ್ ಲೀಗ್ನ (ಕೆಪಿಎಲ್)ಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ವಿಚಾರಣೆ ಎದುರಿಸಿದ್ದ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಷ್ಫಕ್ ಥಾರಾರನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದು ಸೆಂಟ್ರಲ್ ಕ್ರೈಂ ಬ್ರ್ಯಾಂಚ್ (ಸಿಸಿಬಿ) ಪೊಲೀಸರು ಮಂಗಳವಾರದಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಯೋಜನೆಯ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಲು ಅಂತಾರಾಷ್ಟ್ರೀಯ ಮಟ್ಟದ ಬುಕ್ಕಿಗಳು ಯತ್ನಿಸಿದ್ದಾರೆ. ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಲಿ ಅವರು ದುಬೈ ಮೂಲದ ಬುಕ್ಕಿ ಜತೆ 11 ಲಕ್ಷ ರೂ. ಬೆಟ್ಟಿಂಗ್ ಆಡಿರುವುದು ಖಚಿತವಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
TNPLನಲ್ಲಿ ಮ್ಯಾಚ್ ಫಿಕ್ಸಿಂಗ್ ಸುಳಿವು, ಬಿಸಿಸಿಐ ತನಿಖೆ ಆರಂಭ
"ಕೆಪಿಎಲ್ ನಲ್ಲಿ ಭ್ರಷ್ಟಾಚಾರ, ಮ್ಯಾಚ್ ಫಿಕ್ಸಿಂಗ್ ಕುರಿತಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ವಿವರಣೆ ಕೇಳಿ ಕೆಎಸ್ ಸಿಎಗೆ ಪತ್ರ ಬರೆಯಲಾಗಿದೆ.
ಇದಲ್ಲದೆ, ಮ್ಯಾಚ್ ಫಿಕ್ಸಿಂಗ್ ಬಗ್ಗೆ ವಿಚಾರಣೆ ತೀವ್ರಗೊಳಿಸಲಾಗಿದ್ದು, ಶಿವಮೊಗ್ಗ, ಬೆಳಗಾವಿ, ಬೆಂಗಳೂರು ಸೇರಿದಂತೆ ವಿವಿಧ ತಂಡಗಳ 34 ಕ್ರಿಕೆಟರ್ಸ್ ಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಕೆಪಿಎಲ್ ಜಾರಿಯಲ್ಲಿರುವಾಗಲೇ ಬೆಳಗಾವಿ ತಂಡದ ಮಾಲೀಕ ಅಲಿ ಅವರು ನಿಯಮ ಮೀರಿ ಬುಕ್ಕಿಗಳ ಜೊತೆ ಸಂಪರ್ಕ ಸಾಧಿಸಿದ್ದರು ಎಂಬ ಆರೋಪವಿದೆ. ಶುಕ್ರವಾರದಂದು
ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ನಡೆಸಿದ ಅನುಮಾನದಲ್ಲಿ ಅಲಿ ಅಷ್ಫಕ್ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಮೂರು ದಿನಗಳಿಂದ ವಿಚಾರಣೆ ನಡೆಸಿದ್ದರು. ಅವರನ್ನು ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದರು. ಇವರು ಸಂಪರ್ಕ ಹೊಂದಿದ್ದ ವಿದೇಶಿ ಬುಕಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.