ಕೆಪಿಎಲ್ ಫೈನಲ್ ಪಂದ್ಯವೇ ಫಿಕ್ಸ್
2019ರ ಆಗಸ್ಟ್ 31ರಂದು ಮೈಸೂರಿನ ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ ಫೈನಲ್ ಪಂದ್ಯವೇ ಫಿಕ್ಸ್ ಆಗಿತ್ತು ಎಂದು ಸಿಸಿಬಿ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಈ ಎರಡು ತಂಡದ ಆಟಗಾರರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಕರ್ನಾಟಕದ ಪರ ರಣಜಿ ಆಡುತ್ತಿದ್ದ ಸಿಎಂ ಗೌತಮ್ ಅವರು ಗೋವಾ ತಂಡಕ್ಕೆ ವಲಸೆ ಹೋಗಿ ಆ ತಂಡದ ನಾಯಕರಾಗಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ಆರ್ ಸಿಬಿ ಪರ ಕೂಡಾ ಆಡಿದ್ದಾರೆ.
ಬುಕ್ಕಿ ಮನೋಜ್ ಕುಮಾರ್ ಜೊತೆ ಆಟಗಾರರ ಸಂಪರ್ಕ
ನಮ್ಮ ಶಿವಮೊಗ್ಗ ತಂಡದ ನಿಶಾಂತ್ ಬಂಧಿಸಿದ್ದ ಸಿಸಿಬಿ, ಆತ ಚಂದೀಗಢ ಮೂಲದ ಬುಕ್ಕಿ ಮನೋಜ್ ಕುಮಾರ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ನಿಶಾಂತ್, 2018ರ ಕೆಪಿಎಲ್ ಏಳನೇ ಆವೃತ್ತಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲಿಂಗ್ ಕೋಚ್ ವಿನುಪ್ರಸಾದ್ ನನ್ನು ಕೂಡಾ ಈ ಜಾಲದಲ್ಲಿ ಸಿಲುಕಿಸಿದ್ದ ಎಂದಿದ್ದಾರೆ. 2015ರಿಂದ ಕೆಪಿಎಲ್ನಲ್ಲಿ ಆಡುತ್ತಿರುವ ನಿಶಾಂತ್, ಹುಬ್ಬಳ್ಳಿ ಟೈಗರ್ಸ್, ಮಂಗಳೂರು ಹಾಗೂ ಶಿವಮೊಗ್ಗ ತಂಡದಲ್ಲಿ ಆಡಿದ್ದಾರೆ. 2018ರ ಕೆಪಿಎಲ್ ನಲ್ಲಿ ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆದ ಹುಬ್ಬಳ್ಳಿ ಟೈಗರ್ಸ್- ಬೆಂಗಳೂರು ಬ್ಲಾಸ್ಟರ್ಸ್ ನಡುವಿನ ಪಂದ್ಯ ಫಿಕ್ಸ್ ಮಾಡಿದ ಆರೋಪವಿದೆ.
ಬುಕ್ಕಿ ಸಯ್ಯಂ ವಿಚಾರಣೆಯಿಂದ ಮಾಹಿತಿ ಬಹಿರಂಗ
ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಶ್ಫಾಕ್ ಅಲಿ, ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್, ನಮ್ಮ ಶಿವಮೊಗ್ಗದ ನಿಶಾಂತ್ ಸಿಂಗ್ ಬೆಂಗಳೂರು ಬ್ಲಾಸ್ಟರ್ ಕೋಚ್ ವಿನು ಪ್ರಸಾದ್, ಬ್ಯಾಟ್ಸ್ ಮನ್ ವಿಶ್ವನಾಥ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ದುಬೈ ಮೂಲದ ಬುಕ್ಕಿಯನ್ನು ಸಂಪರ್ಕಿಸಿದ್ದ ಅಲಿ, ಕೆಪಿಎಲ್ ನಲ್ಲಿ ವ್ಯವಸ್ಥಿತವಾಗಿ ಮ್ಯಾಚ್ ಫಿಕ್ಸಿಂಗ್ ದಂಧೆ ನಡೆಸುತ್ತಿದ್ದ ಎಂಬ ಆರೋಪವಿದೆ. ಚಿತ್ರದಲ್ಲಿ ಬುಕ್ಕಿ ಸಯ್ಯಂ
100ಕ್ಕೂ ಅಧಿಕ ಆಟಗಾರರಿಗೆ ಸಮನ್ಸ್ ನೀಡಲಾಗಿದೆ
ಶಿವಮೊಗ್ಗ, ಬೆಳಗಾವಿ, ಬೆಂಗಳೂರು ಸೇರಿದಂತೆ ವಿವಿಧ ತಂಡಗಳ 34 ಕ್ರಿಕೆಟರ್ಸ್ ಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಕೆಪಿಎಲ್ ಜಾರಿಯಲ್ಲಿರುವಾಗಲೇ ಬೆಳಗಾವಿ ತಂಡದ ಮಾಲೀಕ ಅಲಿ ಅವರು ನಿಯಮ ಮೀರಿ ಬುಕ್ಕಿಗಳ ಜೊತೆ ಸಂಪರ್ಕ ಸಾಧಿಸಿದ್ದರು ಎಂಬ ಆರೋಪವಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದರು. ಇದಾದ ಬಳಿಕ ಆಟಗಾರರನ್ನು ಹನಿಟ್ರ್ಯಾಪ್ ಮೂಲಕ ಮ್ಯಾಚ್ ಫಿಕ್ಸಿಂಗ್ ಬಲೆಗೆ ಬೀಳಿಸಿಕೊಳ್ಳಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಕಳೆದ ಸೀಸನ್ ನ 100ಕ್ಕೂ ಅಧಿಕ ಆಟಗಾರರಿಗೆ ಸಮನ್ಸ್ ನೀಡಲಾಗಿದೆ.