ಕಳೆದ ಹಲವು ಸರಣಿಗಳಲ್ಲಿ ಆಡುವ ಬಳಗದಲ್ಲಿ ಅವಕಾಶವನ್ನು ಪಡೆಯದೆ ಬೆಂಚ್ ಕಾದಿದ್ದ ಟೀಮ್ ಇಂಡಿಯಾದ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ ಸಿಕ್ಕ ಅವಕಾಶದಲ್ಲಿಯೂ ಮಿಂಚುವಲ್ಲಿ ವಿಫಲರಾಗಿದ್ದಾರೆ. ಈಗ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಕುಲ್ದೀಪ್ ಯಾದವ್ ಆಯ್ಕೆಯಾಗಿದ್ದು ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ತಾನು ಉತ್ತಮ ಪ್ರದರ್ಶನವನ್ನು ನೀಡಿದರೆ ಹಾಗೂ ಐಪಿಎಲ್ನಲ್ಲಿ ಅದ್ಭುತವಾಗು ಆಡಿದರೆ ತಾನು ಮುಂಬರುವ ಟಿ20 ವಿಶ್ವಕಪ್ನಲ್ಲಿ ತಂಡವನ್ನು ಸ್ಥಾನ ಸಂಪಾದಿಸಲಿದ್ದೇನೆ ಎಂದು ಕುಲ್ದೀಪ್ ಯಾದವ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
WTC ಫೈನಲ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳದ 5 ಪ್ರಮುಖ ಆಟಗಾರರಿವರು!
ಕುಲ್ದೀಪ್ ಯಾದವ್ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಯಾವುದೇ ವಿಕೆಟ್ ಪಡೆಯುವಲ್ಲಿ ಅವರು ಯಶಸ್ವಿಯಾಗಿರಲಿಲ್ಲ. ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿರುವ ಕುಲ್ದೀಪ್ ಯಾದವ್ ಮೊದಲಾರ್ಧದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಇನ್ನು ತನಗೆ ನಿರೀಕ್ಷಿತ ಪ್ರಮಾಣದಲ್ಲಿ ಅವಕಾಶ ದೊರೆಯದ ಬಗ್ಗೆ ಎಎನ್ಐ ಜೊತೆಗೆ ಮಾತನಾಡುತ್ತಾ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಕುಲ್ದೀಪ್. "ನಿಜ ಹೇಳಬೇಕೆಂದರೆ ಹತಾಶೆ ಸರಿಯಾದ ಪದವಲ್ಲ. ನೀವು ಆಟವನ್ನು ಆಡಬೇಕು ಉತ್ತಮ ಪ್ರದರ್ಶನ ನೀಡಬೇಕು ಎಂದು ಬಯಸುವಾಗ ಅವಕಾಶ ದೊರೆಯದಿದ್ದರೆ ಆಟಗಾರನಾಗಿ ಬೇಸರವಾಗುತ್ತದೆ. ವೈಯಕ್ತಿಕವಾಗಿ ನೀವು ಈ ರೀತಿಯಾಗಿ ಯೋಚನೆ ಮಾಡಬಹುದು. ಆದರೆ ಕ್ರಿಕೆಟ್ ಎಂಬುದು ತಂಡದ ಆಟ. ತಂಡದ ಅಗತ್ಯಕ್ಕೆ ತಕ್ಕದಾಗಿ ನೀವು ಆಡಬೇಕಾಗುತ್ತದೆ" ಎಂದು ಕುಲ್ದೀಪ್ ಯಾದವ್ ಹೇಳಿದ್ದಾರೆ.
"ಕಳೆದ ವರ್ಷದಿಂದೀಚೆಗೆ ನಾನು ಹೆಚ್ಚಿನ ಪಂದ್ಯಗಳಲ್ಲಿ ಆಡಿಲ್ಲ. ಹೆಚ್ಚಿನ ಅವಕಾಶಗಳು ನನಗೆ ದೊರೆಯಲಿಲ್ಲ. ಸಾಮಾನ್ಯವಾಗಿ ನೀವು ನಿರಂತರವಾಗಿ ಆಡುತ್ತಿಲ್ಲದಿದ್ದರೆ ರಣತಂತ್ರಗಳನ್ನು ಕಳೆದುಕೊಳ್ಳುತ್ತೀರಿ. ಸತತವಾಗಿ ಆಡುತ್ತಿದ್ದರೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ" ಎಂದು ಕುಲ್ದೀಪ್ ಯಾದವ್ ಹೇಳಿಕೆ ನೀಡಿದ್ದಾರೆ.