ನವದೆಹಲಿ, ಫೆ. 24 : ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕೆ ತವರಿನಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಆಟಗಾರರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದು ಒಂದೆಡೆಯಾದರೆ, ಇಂಥ ಹೀನಾಯ ಪ್ರದರ್ಶನಕ್ಕೆ ಕಾರಣವೇನು? ಎಂಬುದನ್ನು ತನಿಖೆ ನಡೆಸಬೇಕು ಎಂದು ಲಾಹೋರ್ ಹೈ ಕೋರ್ಟ್ ಗೆ ದೂರು ಸಹ ದಾಖಲಾಗಿದೆ.
ಹೌದು.. ವಕೀಲ ರಿಜ್ವಾನ್ ಗುಲ್ ಎಂಬುವರು ಇಂಥ ಅರ್ಜಿ ಸಲ್ಲಿಸಿದ್ದು ಈ ಹೀನಾಯ ಪ್ರದರ್ಶನಕ್ಕೆ ಪ್ರಧಾನಿ ನವಾಜ್ ಷರೀಫ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಶಹಾರ್ ಖಾನ್ ಮತ್ತು ಪಿಸಿಬಿ ಸದಸ್ಯ ನಜಂ ಸೇತಿ ಕಾರಣ ಎಂದು ಆರೋಪಿಸಿದ್ದಾರೆ.[ವಿಶ್ವಕಪ್ : ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ]
'ಪಾಕಿಸ್ತಾನದ ಪ್ರಜೆಯಾಗಿ ಕಳಪೆ ಪ್ರದರ್ಶನಕ್ಕೆ ಕಾರಣ ಅರಿಯುವುದು ನನ್ನ ಹಕ್ಕು. ನಾಲ್ಕು ವರ್ಷಗಳಿಂದ ಜನರು ವಿಶ್ವಕಪ್ ಗಾಗಿ ಜಪ ಮಾಡುತ್ತಿದ್ದಾರೆ. ಆದರೆ ತಂಡ ನೀಡಿದ ಪ್ರದರ್ಶನ ನಿರಾಶಾದಾಯಕ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಹೀನಾಯವಾಗಿ ಸೋತಿರುವ ಪಾಕಿಸ್ತಾನ ವಿಶ್ವಕಪ್ ಅಭಿಯಾನದಿಂದ ಹೊರಬೀಳುವ ಲಕ್ಷಣಗಳು ಗೋಚರವಾಗುತ್ತಿದೆ. ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಕ್ತರ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ಅವರನ್ನು ಇತ್ತೀಚೆಗೆ 'ಸ್ವಾರ್ಥಿ' ಎಂದು ಟೀಕಿಸಿದ್ದರು.[ಡಿಆರ್ ಎಸ್ ವಿವಾದಕ್ಕೆ ಸಾಕ್ಷಿಯಾದ ಇಂಡೋ-ಪಾಕ್ ಕದನ]
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಜಂ ಸೇತಿ' ನನಗೆ ಅಭಿಮಾನಿಗಳ ನಿರಾಸೆಯ ಅರಿವಿದೆ. ಇದು ಆಟಗಾರರನ್ನು ಟೀಕೆ ಮಾಡಲು ಅಥವಾ ಸಮರ್ಥಿಸಿಕೊಳ್ಳಲು ಸೂಕ್ತ ಸಮಯವಲ್ಲ ಎಂದು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಪಾಕಿಸ್ತಾನದ ಕ್ರಿಕೆಟ್ ಜ್ವರಕ್ಕೆ ಔಷಧಿ ಇಲ್ಲದಂತಾಗಿದ್ದು, ತಂಡದ ಕಳಪೆ ಪ್ರದರ್ಶನ ಮುಂದಿನ ಪಂದ್ಯಗಳಲ್ಲೂ ಮುಂದುವರಿದರೆ ಪಾಕ್ ಕ್ರಿಕೆಟ್ ಆಡಳಿತ ಮಂಡಳಿ ಮತ್ತಷ್ಟು ವಿವಾದ ಮೈ ಮೇಲೆ ಎಳೆದುಕೊಳ್ಳುವುದು ಖಂಡಿತ.