ಭಾರೀ ನಿರೀಕ್ಷೆ ಮೂಡಿಸಿದ್ದ ಲೆಜೆಂಡ್ಸ್ ಲೀಗ್ ಕ್ರಿಕೆಟ್ನ ಎರಡನೇ ಆವೃತ್ತಿ ಇಂದಿನಿಂದ (ಶನಿವಾರ, ಸೆ. 17) ಆರಂಭವಾಗಿದೆ. ಈ ಬಾರಿ ನಾಲ್ಕು ತಂಡಗಳು ಈ ಟೂರ್ನಿಯಲ್ಲಿ ಸೆಣೆಸಾಟವನ್ನು ನಡೆಸಲಿವೆ. ಇನ್ನು ಮೊದಲ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಭರ್ಜರಿ ಗೆಲುವು ಸಾಧಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡ ಇಂಡಿಯಾ ಕ್ಯಾಪಿಟಲ್ಸ್ ವಿರುದ್ಧ 3 ವಿಕೆಟ್ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ನ ಮೊದಲ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ನಾಯಕತ್ವದ ಗುಜರಾತ್ ಜೈಂಟ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಗೌತಮ್ ಗಂಭೀರ್ ಅನುಪಸ್ಥಿತಿಯಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಮುನ್ನಡೆಸಿದ ಜಾಕ್ವೆಸ್ ಕಾಲಿಸ್ ನಾಯಕತ್ವದ ಇಂಡಿಯಾ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತ್ತು.
ಇನ್ನು 180 ರನ್ಗಳ ಸವಾಲಿನ ಮೊತ್ತ ಬೆನ್ನತ್ತಿದ ಗುಜರಾತ್ ಜೈಂಟ್ಸ್ ತಂಡ ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿ ಸುಲಭವಾಗಿ ಗೆದ್ದು ಬೀಗಿತು. ಇದರಲ್ಲಿ ಕೆವಿನ್ ಓ'ಬ್ರಿಯನ್ ಅವರ ಭರ್ಜರಿ ಶತಕ(106) ತಂಡದ ಗೆಲುವಿಗೆ ಉಪಯುಕ್ತ ಕೊಡುಗೆ ನೀಡಿತು.
180 ರನ್ಗಳ ಸವಾಲಿನ ಮೊತ್ತ ಬೆನ್ನತ್ತಿದ ಗುಜರಾತ್ ಜೈಂಟ್ಸ್ ತಂಡ ಆರಂಭದಲ್ಲಿಯೇ ನಾಯಕ ವೀರೇಂದ್ರ ಸೆಹ್ವಾಗ್ ಅವರ ವಿಕೆಟ್ ಕಳೆದುಕೊಂಡಿತು ಮತ್ತು ಅವರು ಕೇವಲ 6 ರನ್ ಗಳಿಸಿ ಮಿಚೆಲ್ ಜಾನ್ಸನ್ ಎಸೆದ ನಾಲ್ಕನೇ ಓವರ್ನಲ್ಲಿ ಔಟಾದರು. ಆದರೆ ಶತಕವೀರ ಕೆವಿನ್ ಓ'ಬ್ರಿಯನ್ ಏಕಾಂಗಿಯಾಗಿ ಪಂದ್ಯವನ್ನು ಗೆಲುವಿನ ಗಡಿಗೆ ತಂದು ನಿಲ್ಲಿಸಿದರು.
ಇನ್ನುಳಿದಂತೆ ಪಾರ್ಥಿವ್ ಪಟೇಲ್(24) ಮತ್ತು ಯಶ್ಪಾಲ್ ಸಿಂಗ್ (21) ರನ್ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು. ಕೊನೆಯಲ್ಲಿ ವಿಕೆಟ್ ಕಳೆದುಕೊಂಡರೂ, ವೈಡ್ ರೂಪದಲ್ಲಿ ಬಂದ ಒಂದು ರನ್ ಗುಜರಾತ್ ಜೈಂಟ್ಸ್ ತಂಡವನ್ನು ಗೆಲುವಿನ ಗಡಿ ದಾಟಿಸಿತು.
ಇನ್ನು ಬೌಲಿಂಗ್ನಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಪರ ಪ್ರವೀಣ್ ತಾಂಬೆ 3.4 ಓವರ್ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದರು. ಲಿಯಾಮ್ ಪ್ಲಂಕೆಟ್ 3 ಓವರ್ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಇನ್ನುಳಿದಂತೆ ಮಿಚೆಲ್ ಜಾನ್ಸನ್ ಮತ್ತು ಆಶ್ಲೆ ನರ್ಸ್ ತಲಾ ಒಂದು ವಿಕೆಟ್ ಪಡೆದರು.
ಇದೇ ವೇಳೆ ಬ್ಯಾಟಿಂಗ್ನಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಪರ ಆಶ್ಲೇ ನರ್ಸ್ ಕೇವಲ 41 ಎಸೆತಗಳಲ್ಲಿ ಅಜೇಯ 103 ರನ್ ಗಳಿಸಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ನ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಇಂಡಿಯಾ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ ಏಳು ವಿಕೆಟ್ಗೆ 179 ರನ್ ಗಳಿಸಲು ಸಹಾಯ ಮಾಡಿದರು.
ಇಂಡಿಯಾ ಕ್ಯಾಪಿಟಲ್ಸ್ 6 ವಿಕೆಟ್ಗೆ 74 ರನ್ಗೆ ತತ್ತರಿಸಿತ್ತು. ದಿನೇಶ್ ರಾಮ್ದಿನ್ 31 ರನ್ ಗಳಿಸಿದರು. ಆದಾಗ್ಯೂ, ನರ್ಸ್ ಮತ್ತು ಲಿಯಾಮ್ ಪ್ಲಂಕೆಟ್ ಏಳನೇ ವಿಕೆಟ್ಗೆ 64 ರನ್ ಸೇರಿಸಿದರು. ಗುಜರಾತ್ ಜೈಂಟ್ಸ್ ಪರ ತಿಸರಾ ಪೆರೆರಾ, ಕೆಪಿ ಅಪಣ್ಣ ಮತ್ತು ರಾಯದ್ ಎಂರಿಟ್ ತಲಾ ಎರಡು ವಿಕೆಟ್ ಪಡೆದರು.