ಮೊದಲು ಬ್ಯಾಟಿಂಗ್ ನಡೆಸಿ ಅಬ್ಬರಿಸಿದ ವರ್ಲ್ಡ್ ಜಿಯಂಟ್ಸ್
ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜಿಯಂಟ್ಸ್ ನಡುವಿನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಮಹಾರಾಜಾಸ್ ಬೌಲಿಂಗ್ ಆಯ್ದುಕೊಂಡು ಎದುರಾಳಿ ವರ್ಲ್ಡ್ ಜಿಯಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ವರ್ಲ್ಡ್ ಜಿಯಂಟ್ಸ್ ಪರ ಫಿಲ್ ಮಸ್ಟರ್ಡ್ 57, ಹರ್ಷಲ್ ಗಿಬ್ಸ್ 89 ಮತ್ತು ಕೆವಿನ್ ಒಬ್ರಿಯನ್ 34 ರನ್ ಗಳಿಸಿ ಮಿಂಚಿದರು. ಹೀಗೆ ತಂಡದ ಆಟಗಾರರ ಉತ್ತಮ ಬ್ಯಾಟಿಂಗ್ ನೆರವಿನಿಂದ ವರ್ಲ್ಡ್ ಜಿಯಂಟ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಕಲೆ ಹಾಕಿತು ಹಾಗೂ ಎದುರಾಳಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ 229 ರನ್ಗಳ ಬೃಹತ್ ಗುರಿಯನ್ನು ನೀಡಿತು.
ಬೃಹತ್ ಮೊತ್ತವನ್ನು ಬೆನ್ನತ್ತಿ ಅಂತಿಮ ಹಂತದಲ್ಲಿ ಎಡವಿದ ಇಂಡಿಯಾ ಮಹಾರಾಜಾಸ್
ಇನ್ನು 229 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಇಂಡಿಯಾ ಮಹಾರಾಜಾಸ್ ತಂಡದ ಪರ ಆರಂಭಿಕ ಆಟಗಾರ ನಮನ್ ಓಜಾ 51 ಎಸೆತಗಳಿಗೆ 95 ರನ್ ಚಚ್ಚಿ ಮಿಂಚಿದರು. ಇನ್ನುಳಿದಂತೆ ವಾಸಿಂ ಜಾಫರ್, ಬದ್ರಿನಾಥ್ ಮತ್ತು ಸ್ಟುವರ್ಟ್ ಬಿನ್ನಿ ಎರಡಂಕಿ ಮುಟ್ಟುವಲ್ಲಿ ವಿಫಲವಾಗಿ ಔಟ್ ಆದರು. ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯೂಸುಫ್ ಪಠಾಣ್ 22 ಎಸೆತಗಳಿಗೆ 45 ರನ್ ಬಾರಿಸಿ ಅಬ್ಬರಿಸಿದರೆ, ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇರ್ಫಾನ್ ಪಠಾಣ್ ಅಂತಿಮ ಓವರ್ ತನಕ ಹೋರಾಟ ನಡೆಸಿ 21 ಎಸೆತಗಳಲ್ಲಿ 56 ರನ್ ಬಾರಿಸಿದರು. ಆದರೆ ಅಂತಿಮ ಓವರ್ನ ಮೊದಲನೇ ಎಸೆತದಲ್ಲಿ ಇರ್ಫಾನ್ ಪಠಾಣ್ ಔಟ್ ಆಗಿ ಇಂಡಿಯಾ ಮಹಾರಾಜಾಸ್ ತಂಡ ಗೆಲುವಿನ ಸನಿಹಕ್ಕೆ ಬಂದು ಸೋಲುಂಡಿದೆ. ಕೊನೆಗೆ ಇಂಡಿಯಾ ಮಹಾರಾಜಾಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ಈ ಮೂಲಕ ವರ್ಲ್ಡ್ ಜಿಯಂಟ್ಸ್ ತಂಡ ಈ ರೋಚಕ ಹಣಾಹಣಿಯಲ್ಲಿ 5 ರನ್ಗಳ ಗೆಲುವನ್ನು ಸಾಧಿಸಿತು. ಈ ಮೂಲಕ ಸೋತ ಇಂಡಿಯಾ ಮಹಾರಾಜಾಸ್ ಫೈನಲ್ ಪ್ರವೇಶಿಸಲು ಇದ್ದ ಅಂತಿಮ ಅವಕಾಶವನ್ನು ಕಳೆದುಕೊಂಡು ಲೀಗ್ ಹಂತದಿಂದಲೇ ಟೂರ್ನಿಯಿಂದ ಹೊರಬಿದ್ದಿತು.
ಇಂಡಿಯಾ ಮಹಾರಾಜಾಸ್ ಫೈನಲ್ ಕನಸಿಗೆ ತಣ್ಣೀರು ಎರಚಿದ ಬ್ರೆಟ್ ಲೀ
ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಬ್ಬರಿಸಿದ ಇರ್ಫಾನ್ ಪಠಾಣ್ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಗೆಲ್ಲಲು 12 ಎಸೆತಗಳಿಗೆ 22 ರನ್ ಬೇಕಿದ್ದಾಗ 19ನೇ ಓವರ್ನಲ್ಲಿ ಆಲ್ಬಿ ಮಾರ್ಕೆಲ್ಗೆ 2 ಅಬ್ಬರದ ಸಿಕ್ಸ್ ಬಾರಿಸಿದರು. ಈ ಮೂಲಕ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಕೊನೆಯ 6 ಎಸೆತಗಳಲ್ಲಿ ಗೆಲ್ಲಲು ಕೇವಲ 8 ರನ್ಗಳ ಅಗತ್ಯತೆ ಇತ್ತು. 19ನೇ ಓವರ್ನ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡಿದ್ದ ಇರ್ಫಾನ್ ಪಠಾಣ್ ಕ್ರೀಸ್ ಕಾಯ್ದುಕೊಂಡಿದ್ದರು. ಈ ಸಂದರ್ಭದಲ್ಲಿ ಅಂತಿಮ ಓವರ್ ಬೌಲಿಂಗ್ ಮಾಡಲು ಬ್ರೆಟ್ ಲೀ ಕಣಕ್ಕಿಳಿದು ಮೊದಲನೇ ಎಸೆತವನ್ನು ವೈಡ್ ಹಾಕಿದರು. ನಂತರ ಆ ಓವರ್ನ ಮೊದಲ ಎಸೆತದಲ್ಲಿಯೇ ದೊಡ್ಡ ಹೊಡೆತಕ್ಕೆ ಕೈಹಾಕಿದ ಇರ್ಫಾನ್ ಪಠಾಣ್ ಆಲ್ಬಿ ಮಾರ್ಕೆಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ಎರಡನೇ ಎಸೆತಕ್ಕೆ ರಜತ್ ಭಾಟಿಯಾ 1 ತೆಗೆದುಕೊಂಡರೆ ಮೂರನೇ ಹಾಗೂ ನಾಲ್ಕನೇ ಎಸೆತಗಳಲ್ಲಿ ಆವಿಷ್ಕಾರ್ ಸಾಳ್ವಿ ಯಾವುದೇ ರನ್ ಗಳಿಸದೇ ಐದನೇ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಈ ಸಂದರ್ಭದಲ್ಲಿ ಪಂದ್ಯದ ಅಂತಿಮ ಎಸೆತಕ್ಕೆ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಗೆಲ್ಲಲು 6 ರನ್ಗಳ ಅಗತ್ಯತೆ ಇತ್ತು. ಆದರೆ ಅಂತಿಮ ಎಸೆತವನ್ನು ಎದುರಿಸಿದ ಅಮಿತ್ ಭಂಡಾರಿ ಯಾವುದೇ ರನ್ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಈ ಮೂಲಕ ಕೊನೆಯ ಓವರ್ನಲ್ಲಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಗೆಲ್ಲಲು 8 ರನ್ ಬೇಕಿದ್ದಾಗ ಕೇವಲ 2 ರನ್ ನೀಡಿದ ಬ್ರೆಟ್ ಲೀ ಇರ್ಫಾನ್ ಪಠಾಣ್ ಅವರ ಪ್ರಮುಖ ವಿಕೆಟ್ನ್ನೂ ಕೂಡ ಪಡೆದು ಇಂಡಿಯಾ ಮಹಾರಾಜಾಸ್ ಫೈನಲ್ ಪ್ರವೇಶದ ಕನಸಿಗೆ ತಣ್ಣೀರು ಎರಚಿದರು.