1997-98: ಸಚಿನ್ ತೆಂಡೂಲ್ಕರ್
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಸಚಿನ್ ತೆಂಡೂಲ್ಕರ್ ಪಾತ್ರರಾಗಿದ್ದಾರೆ. 1997-98ರ ಅವಧಿಯಲ್ಲಿ ಸಚಿನ್ ತೆಂಡೂಲ್ಕರ್ ನೀಡಿದ ಅತ್ಯದ್ಬುತ ಪ್ರದರ್ಶನಕ್ಕೆ ಕೇಂದ್ರ ಸರಕಾರ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆ ಸಮಯಕ್ಕೆ ಸಚಿನ್ ತೆಂಡೂಲ್ಕರ್ 251 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 9940 ರನ್ ಗಳಿಸಿದ್ದರು ಹಾಗೂ 26 ಶತಕ ಮತ್ತು 54 ಅರ್ಧಶತಕಗಳನ್ನು ಸಚಿನ್ ಆ ಸಮಯಕ್ಕೆ ಸಿಡಿಸಿದ್ದರು.
2007-08: ಎಂಎಸ್ ಧೋನಿ
ಸಚಿನ್ ತೆಂಡೂಲ್ಕರ್ ನಂತರ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿಯನ್ನು ಪಡೆದಿರುವ ಎಂ ಎಸ್ ಧೋನಿಗೆ 2007-08ನೇ ಸಾಲಿನ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 2007ರಲ್ಲಿ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸುವುದರ ಮೂಲಕ ಧೋನಿ ನಾಯಕತ್ವದ ಟೀಮ್ ಇಂಡಿಯಾ ಟಿ ಟ್ವೆಂಟಿ ವಿಶ್ವಕಪ್ನ್ನು ತನ್ನದಾಗಿಸಿಕೊಂಡು ದಾಖಲೆ ಬರೆದಿತ್ತು.
2018: ವಿರಾಟ್ ಕೊಹ್ಲಿ
ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ನಂತರ ಖೇಲ್ ರತ್ನ ಪ್ರಶಸ್ತಿಯನ್ನು 2018ರಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ನೀಡಲಾಯಿತು. ಕ್ರಿಕೆಟ್ ಜಗತ್ತು ಕಂಡ ಅತ್ಯುನ್ನತ ಕ್ರಿಕೆಟಿಗರಲ್ಲಿ ಒಬ್ಬರು ಎಂದು ವಿರಾಟ್ ಕೊಹ್ಲಿಯವರನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅದೇ ಸಮಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತುಂಗ ಸ್ಥಾನವನ್ನು ತಲುಪಿತ್ತು.
2020: ರೋಹಿತ್ ಶರ್ಮಾ
ಇತ್ತೀಚಿಗೆ ಖೇಲ್ ರತ್ನ ಪ್ರಶಸ್ತಿ ಪಡೆದ ಆಟಗಾರ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. 2020ರಲ್ಲಿ ರೋಹಿತ್ ಶರ್ಮಾಗೆ ಕೇಂದ್ರ ಸರ್ಕಾರ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ರೋಹಿತ್ ಶರ್ಮಾ 2019ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದರು. ರೋಹಿತ್ ಶರ್ಮಾ 2019ರ ವಿಶ್ವಕಪ್ನ 9 ಇನ್ನಿಂಗ್ಸ್ ಪೈಕಿ 648 ರನ್ ಕಲೆಹಾಕಿದ್ದರು.