ಗಂಭೀರ್ ಹೇಳಿಕೆಗೆ ಗವಾಸ್ಕರ್ ತಿರುಗೇಟು
ಕಾರ್ತಿಕ್ ಪ್ರದರ್ಶನವನ್ನು ಕೊಂಡಾಡಿ ಮಾತನಾಡಿದ ಸುನಿಲ್ ಗವಾಸ್ಕರ್ "ದಿನೇಶ್ ಕಾರ್ತಿಕ್ಗೆ ಆಡುವ ಬಳಗದಲ್ಲಿ ಸ್ಥಾನ ಸಿಗುವುದಿಲ್ಲ ಎಂದ ಮೇಲೆ ಆತನನ್ನು ಏಕೆ ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಯನ್ನು ಕೆಲವರು ಹಾಕುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಆತನಿಗೆ ಆಡುವ ಅವಕಾಶ ಸಿಗುವುದಿಲ್ಲ ಎಂದು ಹೇಗೆ ಹೇಳುತ್ತೀರಾ? ತಂಡಕ್ಕೆ ಮುಖ್ಯವಾಗಿ ಬೇಕಾಗಿರುವ ಆಟಗಾರ ಆತನೇ ಆಗಿರಬಹುದು. ಆಟಗಾರನ ಫಾರ್ಮ್ ಕಡೆ ನೋಡಿ, ಖ್ಯಾತಿ ಮತ್ತು ಹೆಸರಿನ ಕಡೆ ಅಲ್ಲ" ಎಂದು ಹೇಳಿಕೆ ನೀಡಿದ್ದು, ದಿನೇಶ್ ಕಾರ್ತಿಕ್ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡುವುದರಲ್ಲಿ ಅರ್ಥವಿಲ್ಲ ಎಂದಿದ್ದ ಗೌತಮ್ ಗಂಭೀರ್ ಅವರ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ಗಂಭೀರ್ ನೀಡಿದ್ದ ಹೇಳಿಕೆ ಇದು
ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿ ಆರಂಭವಾದ ನಂತರ ಮಾತನಾಡಿದ್ದ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ತಂಡಕ್ಕೆ ಆಗಮಿಸಿದ ನಂತರ ದಿನೇಶ್ ಕಾರ್ತಿಕ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗುವುದಿಲ್ಲ, ಹೀಗಾಗಿ ಅವರನ್ನು ಟಿ ಟ್ವೆಂಟಿ ವಿಶ್ವಕಪ್ಗೆ ಆಯ್ಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು.
ಆತನ ವಯಸ್ಸಿನ ಕಡೆ ನೋಡಬೇಡಿ
ಇನ್ನೂ ಮುಂದುವರಿದು ಮಾತನಾಡಿರುವ ಸುನಿಲ್ ಗವಾಸ್ಕರ್ "ದಿನೇಶ್ ಕಾರ್ತಿಕ್ ಪ್ರತಿ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಬೇಕು ಎಂಬುದನ್ನು ಹೇಗೆ ನಿರೀಕ್ಷಿಸುತ್ತೀರಿ. ಆತನಿಗೆ ಹೆಚ್ಚು ಅವಕಾಶಗಳು ದೊರೆತಿಲ್ಲ, ಆರನೇ ಅಥವಾ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಆತ 20 ಎಸೆತಗಳಲ್ಲಿ 40 ರನ್ ಬಾರಿಸಬಲ್ಲ ಸಾಮರ್ಥ್ಯವಿರುವಂತಹ ಆಟಗಾರನಾಗಿದ್ದಾನೆ. ಆತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಅರ್ಗನಾಗಿರುವ ಆಟಗಾರ. ಆತನ ವಯಸ್ಸನ್ನು ನೋಡಬೇಡಿ ಪ್ರದರ್ಶನವನ್ನು ನೋಡಿ" ಎಂದು ಹೇಳಿದ್ದಾರೆ.