ಸಂಜು ಸ್ಯಾಮ್ಸನ್ ಪ್ರದರ್ಶನದ ಬಗ್ಗೆ ದ್ರಾವಿಡ್ ಮಾತು
ಶ್ರೀಲಂಕಾ ಪ್ರವಾಸದಲ್ಲಿ ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಸಂಜು ಸ್ಯಾಮ್ಸನ್ ಪ್ರದರ್ಶನದ ಬಗ್ಗೆ ಮಾತನಾಡಿದರು. "ಬ್ಯಾಟಿಂಗ್ ನಡೆಸಲು ಇದು ಸುಲಭವಾದ ಪಿಚ್ ಆಗಿರಲಿಲ್ಲ. ಏಕದಿನ ಸರಣಿಯಲ್ಲಿ ಆತನಿಗೆ ಒಂದು ಪಂದ್ಯದಲ್ಲಿ ಆಡುವ ಅವಕಾಶ ದೊರೆತಿತ್ತು. ಆತ ಅಲ್ಲಿ 46 ರನ್ಗಳಿಸಿದ್ದಾನೆ. ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ. ಆದರೆ ಅಂತಿಮ ಎರಡು ಪಂದ್ಯಗಳಲ್ಲಿ ಪಿಚ್ ತುಂಬಾ ಸವಾಲಾಗಿತ್ತು" ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಸಂಜು ಸ್ಯಾಮ್ಸನ್ಗೆ ನಿರಾಸೆಯಾಗಲಿದೆ
"ನಿಜ, ಸರಣಿ ಅಂತ್ಯವಾಗಿದ್ದು ಈಗ ಹಿಂದಿರುಗಿ ನೋಡಿದರೆ ಸಂಜು ಸ್ಯಾಮ್ಸನ್ಗೆ ಸ್ವಲ್ಪ ನಿರಾಸೆಯಾಗಬಹುದು. ಸಂಜು ಸ್ಯಾಮ್ಸನ್ ಮಾತ್ರವಲ್ಲ ತಂಡದಲ್ಲಿರುವ ಯುವ ಆಟಗಾರರು ಅತ್ಯಂತ ಪ್ರತಿಭಾವಂತರಾಗಿದ್ದಾರೆ. ಅವರೊಂದಿಗೆ ನಾವು ತಾಳ್ಮೆಯಿಂದ ವ್ಯವಹರಿಸಬೇಕಿದೆ" ಎಂದು ರಾಹುಲ್ ದ್ರಾವಿಡ್ ಸಂಜು ಸ್ಯಾಮ್ಸನ್ ಹಾಗೂ ಟೀಮ್ ಇಂಡಿಯಾದ ಯುವ ಆಟಗಾರರ ಬೆಂಬಲಕ್ಕೆ ನಿಂತು ಮಾತನಾಡಿದರು.
ಟಿ20 ಸರಣಿಯಲ್ಲಿ ಸಂಜು ಕಳಪೆ
ಏಕದಿನ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಆಡಿದ ಒಂದು ಪಂದ್ಯದಲ್ಲಿ 46 ರನ್ಗಳಿಸಿದರು. ಆದರೆ ಟಿ20 ಸರಣಿಯಲ್ಲಿ ಕಳಪೆ ಆಟವನ್ನು ಪ್ರದರ್ಶಿಸಿದ್ದಾರೆ. ಮೂರು ಟಿ20 ಪಂದ್ಯಗಳಲ್ಲಿ ಸಂಜು ಗಳಿಸಿದ್ದು ಕೇವಲ 34 ರನ್ಗಳನ್ನು ಮಾತ್ರ. ಟಿ20 ಮಾದರಿಯಲ್ಲಿ ಸಾಕಷ್ಟು ಅವಕಾಶಗಳು ಸಂಜು ಸ್ಯಾಮ್ಸನ್ ಪಾಲಿಗೆ ದೊರೆತಿದ್ದರೂ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಸಂಜು ವಿಫಲರಾಗಿದ್ದಾರೆ. ಹೀಗಾಗಿ ಸಂಜು ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಭಾರತೀಯ ತಂಡದಲ್ಲಿದ್ದ ಪ್ರಮುಖ ಆಟಗಾರರು ಕೊರೊನಾವೈರಸ್ನ ಕಾರಣದಿಂದಾಗಿ ಐಸೋಲೇಶನ್ಗೆ ಒಳಗಾಗಿದ್ದ ಸಂದರ್ಭದಲ್ಲಿ ಜವಾಬ್ಧಾರಿಯುತ ಪ್ರದರ್ಶನ ನೀಡಬೇಕಾಗಿದ್ದ ಸಂಜು ಸ್ಯಾಮ್ಸನ್ ಅದರಲ್ಲಿ ವಿಫಲವಾಗಿದ್ದಾರೆ.
ನಾನು ನಿರಾಶನಾಗಿಲ್ಲ ಎಂದ ದ್ರಾವಿಡ್
ಇನ್ನು ಇದೇ ಸಂದರ್ಭದಲ್ಲಿ ಭಾರತೀಯ ತಂಡದ ಯುವ ಆಟಗಾರರ ಪ್ರದರ್ಶನದಿಂದಾಗಿ ನಿರಾಸೆಯಾಯಿತಾ ಎಂಬ ಪ್ರಶ್ನೆಯೂ ರಾಹುಲ್ ದ್ರಾವಿಡ್ಗೆ ಎದುರಾಗಿತ್ತು. ಇದಕ್ಕೆ ರಾಹುಲ್ ದ್ರಾವಿಡ್ "ಅವರಿನ್ನೂ ಯುವ ಆಟಗಾರರಾಗಿರುವ ಕಾರಣ ನಾನು ಅವರ ಪ್ರದರ್ಶನದಿಂದಾಗಿ ನಿರಾಶನಾಗಲಿಲ್ಲ. ಅವರು ಈ ರೀತಿಯ ಪರಿಸ್ಥಿತಿಗಳಲ್ಲಿ ಮತ್ತು ಇಷ್ಟು ಉತ್ಕಷ್ಟ ಬೌಲಿಂಗ್ ದಾಳಿಯನ್ನು ಎದುರಿಸಿದಾಗಲೇ ಪಾಠವನ್ನು ಕಲಿಯುತ್ತಾರೆ ಹಾಗೂ ಮತ್ತಷ್ಟು ಉತ್ತಮವಾಗುತ್ತಾರೆ. ಶ್ರೀಲಂಕಾ ತಂಡದ ಬೌಲಿಂಗ್ ದಾಳಿ ಅಂತಾರಾಷ್ಟ್ರೀಯ ಮಟ್ಟದ ಬೌಲಿಂಗ್ ದಾಳಿಯಾಗಿದೆ" ಎಂದು ಭಾರತ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿರುವ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ.