ಮೈಸೂರು ವಾರಿಯರ್ಸ್ ಇನ್ನಿಂಗ್ಸ್
ಮೈಸೂರು ವಾರಿಯರ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ನಿಹಾಲ್ ಉಳ್ಳಾಲ್ 14 ರನ್ ಕಲೆಹಾಕಿದರೆ, ನಾಯಕ ಕರುಣ್ ನಾಯರ್ 42 ರನ್ ಬಾರಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪವನ್ ದೇಶಪಾಂಡೆ 38 ರನ್, ಶ್ರೇಯಸ್ ಗೋಪಾಲ್ 10 ರನ್, ಶಿವರಾಜ್ ಎಸ್ 16 ರನ್, ನಾಗ ಭರತ್ ಅಜೇಯ 27 ರನ್ ಮತ್ತು ಭರತ್ ಧೂರಿ ಅಜೇಯ 3 ರನ್ ಬಾರಿಸಿದರು.
ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ಪರ ವಿದ್ವತ್ ಕಾವೇರಪ್ಪ ಹಾಗೂ ಕುಶಾಲ್ ವಧ್ವಾನಿ ತಲಾ 2 ವಿಕೆಟ್ ಪಡೆದರೆ, ಪ್ರಣವ್ ಭಾಟಿಯಾ 1 ವಿಕೆಟ್ ಪಡೆದರು.
ಗುಲ್ಬರ್ಗಾ ಮಿಸ್ಟಿಕ್ಸ್ ಇನ್ನಿಂಗ್ಸ್
ಮೈಸೂರು ವಾರಿಯರ್ಸ್ ನೀಡಿದ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗ ಮಿಸ್ಟಿಕ್ಸ್ ಪರ ಆರಂಭಿಕ ಆಟಗಾರರಾಗಿ ಜಸ್ವಂತ್ ಆಚಾರ್ಯ ಹಾಗೂ ರೋಹನ್ ಪಾಟೀಲ್ ಕಣಕ್ಕಿಳಿದರು. ಈ ಇಬ್ಬರೂ ಸಹ ಉತ್ತಮ ಆರಂಭ ಕಟ್ಟಿ ಕೊಡುವಲ್ಲಿ ವಿಫಲರಾದರು. ಜಸ್ವಂತ್ ಆಚಾರ್ಯ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರೆ, ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ರೋಹನ್ ಪಾಟೀಲ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಗುಲ್ಬರ್ಗಾ ಮಿಸ್ಟಿಕ್ಸ್ 4 ಎಸೆತಗಳಲ್ಲಿ 4 ರನ್ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 64 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್ ಸೇರಿದಂತೆ ಅಜೇಯ 96 ರನ್ ಚಚ್ಚಿ ಮ್ಯಾಚ್ ವಿನ್ನರ್ ಆಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನುಳಿದಂತೆ ಕೃಷ್ಣನ್ ಶ್ರೀಜಿತ್ 9, ನಾಯಕ ಮನೀಷ್ ಪಾಂಡೆ 10 ಹಾಗೂ ಮನೋಜ್ ಭಂಡಾಗೆ 23 ಎಸೆತಗಳಲ್ಲಿ ಅಜೇಯ 35 ರನ್ ಕಲೆ ಹಾಕಿದರು.
ಮೈಸೂರು ವಾರಿಯರ್ಸ್ ಪರ ಪವನ್ ದೇಶಪಾಂಡೆ 2 ವಿಕೆಟ್ ಪಡೆದರೆ, ವಿದ್ಯಾಧರ್ ಪಾಟೀಲ್ ಮತ್ತು ಮೋನಿಶ್ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.
ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಜತೆ ಗುಲ್ಬರ್ಗ ಮಿಸ್ಟಿಕ್ಸ್ ಕಾದಾಟ
ಸದ್ಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಜಯ ಸಾಧಿಸಿರುವ ಗುಲ್ಬರ್ಗ ಮಿಸ್ಟಿಕ್ಸ್ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದ್ದು, ಆಗಸ್ಟ್26ರ ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಟ್ರೋಫಿಗಾಗಿ ಸೆಣಸಾಟ ನಡೆಸಲಿದೆ.