ಮಹಾರಾಜಾ ಟಿ20 ಟೂರ್ನಿಯ ಪ್ರಪ್ರಥಮ ಆವೃತ್ತಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮನೀಶ್ ಪಾಂಡೆ ನೇತೃತ್ವದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಎದುರಾಳಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿದ್ದು ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಹೈಸ್ಕೋರಿಂಗ್ ಪಂದ್ಯದಲ್ಲಿ ಎರಡು ತಂಡಗಳು ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದವು. ಅಂತಿಮವಾಗಿ ಮನೀಶ್ ಪಾಂಡೆ ನೇತೃತ್ವದ ಗುಲ್ಬರ್ಗಾ ಮೇಲುಗೈ ಸಾಧಿಸಿದ್ದು 11 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಮಹಾರಾಜಾ ಟ್ರೋಫಿಯ ಚೊಚ್ಚಲ ಆವೃತ್ತಿಯ ಚಾಂಪಿಯನ್ ಎನಿಸಿದೆ. ಅಮೋಘ ಪ್ರದರ್ಶನ ನಿಡಿದ ಹೊರತಾಗಿಯೂ ಮಯಾಂಕ್ ಅಗರ್ವಾಲ್ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಸೋಲು ಅನುಭವಿಸಿದ್ದು ರನ್ನರ್ ಅಪ್ ಎನಿಸಿಕೊಂಡಿದೆ.
ಮನೀಷ್ ಆರ್ಭಟ, ಬೃಹತ್ ಮೊತ್ತದ ಗುರಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಗುಲ್ಬರ್ಗಾ ಮಿಸ್ಟಿಕ್ಸ್ ರನ್ ಮಳೆಯನ್ನೇ ಹರಿಸಿತು. ಕಣಕ್ಕಿಳಿದ ಎಲ್ಲಾ ಆಟಗಾರರು ಕೂಡ ಸ್ಪೋಟಕ ಪ್ರದರ್ಶನ ನೀಡಿದ್ದು ಬೆಂಗಳೂರು ತಂಡದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿತು. ನಾಯಕ ಮನೀಶ್ ಪಾಂಡೆಯ ಸ್ಪೋಟಕ ಪ್ರದರ್ಶನ ದೇವದತ್ ಪಡಿಕ್ಕಲ್ ಅವರ ಭರ್ಜರಿ ಅರ್ಧ ಶತಕ ಹಾಗೂ ಆರಂಭಿಕ ಜೋಡಿ ಜೆಸ್ವತ್ ಆಚಾರ್ಯ ಮತ್ತು ರೋಹನ್ ಪಾಟೀಲ್ ಅವರ ಅಮೋಘ ಪ್ರದರ್ಶನದಿಂದಾಗಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ನಿಗದಿತ 20 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 220 ರನ್ಗಳನ್ನು ಗಳಿಸಿದೆ. ಈ ಮೂಲಕ ದೊಡ್ಡ ಸವಾಲನ್ನು ಬೆಂಗಳೂರು ಬ್ಲಾಸ್ಟರ್ಸ್ ಮುಂದಿಟ್ಟಿತು.
ಆರಂಭದಲ್ಲೇ ಎಡವಿದ ಬೆಂಗಳೂರು: ಗುಲ್ಬರ್ಗ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಆರಂಭದಲ್ಲಿಯೇ ಆಘಾತಕ್ಕೆ ಒಳಗಾಯಿತು. ತಂಡದ ಮೊತ್ತ 20 ಆಗುವಷ್ಟರಲ್ಲಿ ನಾಯಕ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡ ಬೆಂಗಳೂರು ನಂತರ ಒಂದಾದ ನಂತರ ಮತ್ತೊಂದರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. ತಂಡದ ಮೊತ್ತ 63 ಆಗುವಷ್ಟರಲ್ಲಿ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆದರೆ ಆರಂಭಿಕನಾಗಿ ಕಣಕ್ಕಿಳಿದ ಎಲ್ಆರ್ ಚೇತನ್ ಇನ್ನೂ ಕ್ರಿಸ್ನಲ್ಲಿದ್ದರು. ನಂತರ ಕ್ರಾಂತಿ ಕುಮಾರ್ ಜೊತೆಗೂಡಿ ಅದ್ಭುತ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ಭರ್ಜರಿ ಹೋರಾಟಕ್ಕೆ ಚಾಲನೆ ನೀಡಿದರು
ಎದೆಗುಂದದ ಚೇತನ್, ಕ್ರಾಂತಿ ಕುಮಾರ್: ತಂಡದ ಮುಂದೆ ಬೃಹತ್ ಗುರಿಯಿದ್ದರೂ ಚೇತನ್ ಹಾಗೂ ಕ್ರಾಂತಿ ಕುಮಾರ್ ಅವರ ಹೋರಾಟ ಹೊಸ ಭರವಸೆಯನ್ನು ಹಿಟ್ಟುಹಾಕಿತ್ತು. ಹೀನಾಯ ಸೋಲಿನ ಭೀತಿಯಿಂದ ಹೊರಬಂದ ಬ್ಲಾಸ್ಟರ್ಸ್ ತಂಡಕ್ಕೆ ಗೆಲುವಿನ ಅವಕಾಶವೂ ತೆರೆಯಿತು. ಈ ಹಂತದಲ್ಲಿ ಸ್ಪೋಟಕವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಚೇತನ್ 91 ರನ್ಗಳಿಸಿ ಶತಕದಂಚಿನಲ್ಲಿ ಎಡವಿದರು. ತಂಡದ ಮೊತ್ತ 161 ರನ್ಗಳಿಗೆ ವಿಕೆಟ್. ಕ್ರಾಂತಿ ಕುಮಾರ್ ತಮ್ಮ ಹೋರಾಟವನ್ನು ಮುಂದುವರಿಸಿದರಾದರೂ ಬಳಿಕ 47 ರನ್ಗಳಿಸಿ ಅವರು ಕೂಡ ಔಟಾಗಿ ಫೆವಿಲಿಯನ್ಗೆ ಸೇರಿದರು. ಅಂತಿಮ ಹಂತದಲ್ಲಿ ರೋನಿತ್ ಮೋರೆ ಸಣ್ಣ ಹೋರಾಟವನ್ನು ನಡೆಸಿದರಾದರೂ ಅದು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಕಡೆಗೆ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 209 ರನ್ಗಳಿಸಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ 11 ರನ್ಗಳ ಅಂತರದಿಂದ ಸೋಲು ಅನುಭವಿಸಿದೆ.
ಆಡುವ ಬಳಗ ಹೀಗಿದೆ: ಬೆಂಗಳೂರು ಬ್ಲಾಸ್ಟರ್ಸ್ : ಮಯಾಂಕ್ ಅಗರ್ವಾಲ್ (ನಾಯಕ), ಎಲ್ ಆರ್ ಚೇತನ್, ಅನಿರುದ್ಧ ಜೋಶಿ, ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್), ಜಗದೀಶ ಸುಚಿತ್, ಕುಶ್ ಮರಾಠೆ, ಕ್ರಾಂತಿ ಕುಮಾರ್, ರಿಷಿ ಬೋಪಣ್ಣ, ರೋನಿತ್ ಮೋರೆ, ಪ್ರದೀಪ್ ಟಿ, ಸಂತೋಕ್ ಸಿಂಗ್
ಬೆಂಚ್: ಅನೀಶ್ ಕೆವಿ, ಕುಮಾರ್ ಎಲ್ ಆರ್, ಪಾರಸ್ ಗುರ್ಬಕ್ಸ್ ಆರ್ಯ, ಲೋಚನ್ ಗೌಡ, ಸೀನ್ ಇಶಾನ್ ಜೋಸೆಫ್, ತನಯ್ ವಾಲ್ಮಿಕ್, ಸೂರಜ್ ಅಹುಜಾ
ಗುಲ್ಬರ್ಗಾ ಮಿಸ್ಟಿಕ್ಸ್: ಜೆಸ್ವತ್ ಆಚಾರ್ಯ, ರೋಹನ್ ಪಾಟೀಲ್, ದೇವದತ್ತ್ ಪಡಿಕ್ಕಲ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಮನೀಶ್ ಪಾಂಡೆ (ನಾಯಕ), ಮನೋಜ್ ಭಾಂಡಗೆ, ರಿತೇಶ್ ಭಟ್ಕಳ್, ಪ್ರಣವ್ ಭಾಟಿಯಾ, ಕುಶಾಲ್ ವಾಧ್ವಾನಿ, ವಿಧ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ
ಬೆಂಚ್: ಧನುಷ್ ಗೌಡ, ಅಜಯ್ ಗೌಡ, ಬೆಂಗಳೂರು ಮೋಹಿತ್, ಶ್ರೀಶ ಆಚಾರ್, ಕೃತಿಕ್ ಕೃಷ್ಣ, ಮೊಹಮ್ಮದ್ ಅಕಿಬ್ ಜವಾದ್, ಆರೋನ್ ಕ್ರಿಸ್ಟಿ, ಕೋದಂಡ ಅಜಿತ್ ಕಾರ್ತಿಕ್