ಸದ್ಯ ನಡೆಯುತ್ತಿರುವ ಮಹಾರಾಜಾ ಟಿ ಟ್ವೆಂಟಿ ಲೀಗ್ ಟೂರ್ನಿಯ ಲೀಗ್ ಹಂತದ 23ನೇ ಪಂದ್ಯ ಇಂದು ( ಆಗಸ್ಟ್ 19 ) ಹುಬ್ಬಳ್ಳಿ ಟೈಗರ್ಸ್ ಮತ್ತು ಶಿವಮೊಗ್ಗ ಸ್ಟ್ರೈಕರ್ಸ್ ತಂಡಗಳ ನಡುವೆ ನಡೆಯಿತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ಲವ್ನಿಥ್ ಸಿಸೋಡಿಯಾ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ಗಳ ಭರ್ಜರಿ ಜಯವನ್ನು ಸಾಧಿಸಿದೆ.
ಅತ್ತ ಈ ಪಂದ್ಯದಲ್ಲಿಯೂ ಸೋಲುಂಡ ಶಿವಮೊಗ್ಗ ಸ್ಟ್ರೈಕರ್ಸ್ ಟೂರ್ನಿಯಲ್ಲಿನ ತನ್ನ ಏಳನೇ ಸೋಲನ್ನು ಅನುಭವಿಸಿ ಸೆಮಿಫೈನಲ್ ಅರ್ಹತೆ ಕಳೆದುಕೊಂಡು ಟೂರ್ನಿಯಿಂದ ಹೊರಬಿದ್ದಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ಲವ್ನಿಥ್ ಸಿಸೋಡಿಯಾ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಶಿವಮೊಗ್ಗ ಸ್ಟ್ರೈಕರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಸ್ಟ್ರೈಕರ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿ ಎದುರಾಳಿ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಗೆಲ್ಲಲು 147 ರನ್ಗಳ ಗುರಿಯನ್ನು ನೀಡಿತು.
Asia Cup 2022: ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಮತ್ತು ಅತಿಕಡಿಮೆ ಮೊತ್ತ ಗಳಿಸಿರುವ ತಂಡಗಳಿವು
ಅತ್ತ ಈ ಗುರಿಯನ್ನು ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ನಾಯಕ ಲವ್ನಿಥ್ ಸಿಸೋಡಿಯಾ ಹಾಗೂ ಬಿಯು ಶಿವಕುಮಾರ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 17.2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 149 ರನ್ ಕಲೆಹಾಕಿ ಗೆಲುವಿನ ನಗೆ ಬೀರಿತು.
ಶಿವಮೊಗ್ಗ ಸ್ಟ್ರೈಕರ್ಸ್ ಇನ್ನಿಂಗ್ಸ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಸ್ಟ್ರೈಕರ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಶರತ್ ಬಿಆರ್ ಹಾಗೂ ಸ್ಟಾಲಿನ್ ಹೂವರ್ 78 ರನ್ ಜತೆಯಾಟವಾಡಿ ಉತ್ತಮ ಆರಂಭವನ್ನೇ ಕಟ್ಟಿಕೊಟ್ಟರು. ಶರತ್ ಬಿಆರ್ 36 ರನ್ ಕಲೆಹಾಕಿದರೆ, ಸ್ಟಾಲಿನ್ ಹೂವರ್ 38 ರನ್ ಬಾರಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೃಷ್ಣಮೂರ್ತಿ ಸಿದ್ಧಾರ್ಥ್ 23 ರನ್ ಬಾರಿಸಿದರೆ, ಡೆಸ್ಮಾಂಡ್ ಆ್ಯಂಟನಿ 7 ರನ್ ಕಲೆ ಹಾಕಿದರು ಹಾಗೂ ತಂಡದ ನಾಯಕ ಕೃಷ್ಣಪ್ಪ ಗೌತಮ್ ಗೋಲ್ಡನ್ ಡಕ್ ಔಟ್ ಆಗಿ ಮತ್ತೊಮ್ಮೆ ನೆಲಕಚ್ಚಿದರು. ಚೈತನ್ಯ ಎಸ್ ಅಜೇಯ 32 ರನ್ ಮತ್ತು ಅವಿನಾಶ್ ಡಿ ಅಜೇಯ 1 ರನ್ ಕಲೆ ಹಾಕಿದರು.
ಹುಬ್ಬಳ್ಳಿ ಟೈಗರ್ಸ್ ತಂಡದ ಪರ ವಿ ಕೌಶಿಕ್ 2 ವಿಕೆಟ್ ಪಡೆದರೆ, ನವೀನ್ ಎಂ ಜಿ, ಆನಂದ್ ದೊಡ್ಡಮನಿ ಮತ್ತು ಬಿಯು ಶಿವಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.
IND vs NZ: ಭಾರತ ಪ್ರವಾಸಕ್ಕೆ ಬಲಿಷ್ಠ ನ್ಯೂಜಿಲೆಂಡ್ 'ಎ' ತಂಡ ಪ್ರಕಟ; ಭಾರತೀಯನಿಗೆ ಸ್ಥಾನ!
ಹುಬ್ಬಳ್ಳಿ ಟೈಗರ್ಸ್ ಇನ್ನಿಂಗ್ಸ್:
ಶಿವಮೊಗ್ಗ ಸ್ಟ್ರೈಕರ್ಸ್ ನೀಡಿದ ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಲವ್ನಿಥ್ ಸಿಸೋಡಿಯಾ ಹಾಗೂ ಬಿಯು ಶಿವಕುಮಾರ್ 107 ರನ್ಗಳ ಜತೆಯಾಟವಾಡುವ ಮೂಲಕ ತಂಡವನ್ನು ಬಹುತೇಕ ಗೆಲುವಿನ ದಡ ಸೇರಿಸಿದರು. ಲವನೀತ್ ಸಿಸೋಡಿಯಾ 38 ಎಸೆತಗಳಲ್ಲಿ 62 ರನ್ ಚಚ್ಚಿ ಅಬ್ಬರಿಸಿದರೆ, ಬಿಯು ಶಿವಕುಮಾರ್ ಅಜೇಯ 61 ರನ್ ಕಲೆ ಹಾಕಿದರು. ಇನ್ನುಳಿದಂತೆ ಅಭಿಮನ್ಯು ಮಿಥುನ್ 1 ರನ್ ಹಾಗೂ ಲಿಯಾನ್ ಖಾನ್ ಅಜೇಯ 19 ರನ್ ಕಲೆ ಹಾಕಿದರು.
ಶಿವಮೊಗ್ಗ ಸ್ಟ್ರೈಕರ್ಸ್ ತಂಡದ ಪರ ಕೃಷ್ಣಪ್ಪ ಗೌತಮ್ ಹಾಗೂ ಶ್ರೇಯಸ್ ಬಿ ಎಂ ತಲಾ ಒಂದೊಂದು ವಿಕೆಟ್ ಪಡೆದರು.
ಶಿವಮೊಗ್ಗ ಸ್ಟ್ರೈಕರ್ಸ್ ಆಡುವ ಬಳಗ: ಶರತ್ ಬಿಆರ್ (ವಿಕೆಟ್ ಕೀಪರ್), ಸ್ಟಾಲಿನ್ ಹೂವರ್, ಡೆಸ್ಮಂಡ್ ಆಂಟೋನಿ, ಕೃಷ್ಣಮೂರ್ತಿ ಸಿದ್ಧಾರ್ಥ್, ಅವಿನಾಶ್ ಡಿ, ಕೃಷ್ಣಪ್ಪ ಗೌತಮ್ (ನಾಯಕ), ರಾಜವೀರ್ ವಾಧ್ವಾ, ಶ್ರೇಯಸ್ ಬಿಎಂ, ಕೆಸಿ ಕಾರಿಯಪ್ಪ, ಉತ್ತಮ್ ಅಯ್ಯಪ್ಪ, ಚೈತನ್ಯ ಎಸ್
ಹುಬ್ಬಳ್ಳಿ ಟೈಗರ್ಸ್ ಆಡುವ ಬಳಗ: ಲುವ್ನಿತ್ ಸಿಸೋಡಿಯಾ (ನಾಯಕ ಮತ್ತು ವಿಕೆಟ್ ಕೀಪರ್), ಲಿಯಾನ್ ಖಾನ್, ಶ್ರೀನಿವಾಸ್ ಶರತ್, ನವೀನ್ MG, ತುಷಾರ್ ಸಿಂಗ್, BU ಶಿವಕುಮಾರ್, ಸ್ವಪ್ನಿಲ್ ಯೆಲವೆ, ಅಭಿಮನ್ಯು ಮಿಥುನ್, ವಾಸುಕಿ ಕೌಶಿಕ್, ಆನಂದ್ ದೊಡ್ಡಮನಿ, ಶರಣ್ ಗೌಡ್