ಮುಂಬೈ: ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ಸಾಗಿರುವ ಟೀಮ್ ಇಂಡಿಯಾದ ಆಟಗಾರರಾದ ಟೆಸ್ಟ್ ತಂಡದ ನಾಯಕ ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಪೃಥ್ವಿ ಶಾ, ಶಾರ್ದೂಲ್ ಠಾಕೂರ್ ಮತ್ತು ಮುಖ್ಯ ಕೋಚ್ ರವಿ ಶಾಸ್ತ್ರಿಗೆ ಮಹಾರಾಷ್ಟ್ರ ಸರ್ಕಾರ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ನಿಂದ ವಿನಾಯಿತಿ ನೀಡಿದೆ.
ಆಸ್ಟ್ರೇಲಿಯಾದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಐತಿಹಾಸಿಕ ಜಯ ದಾಖಲಿಸಿರುವ ಭಾರತದ ತಂಡದ ರಹಾನೆ, ರೋಹಿತ್, ಪೃಥ್ವಿ, ಠಾಕೂರ್ ಮತ್ತು ರವಿ ಶಾಸ್ತ್ರಿ 21ರ ಜನವರಿಯಂದು ಮುಂಬೈಗೆ ತಲುಪಿದ್ದರು. ಹೀಗಾಗಿ ಬಿಸಿಸಿಐ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ತಂಡದ ಸದಸ್ಯರಿಗೆ 14 ದಿನಗಳ ಕ್ವಾರಂಟೈನ್ ವಿಧಿಸದಂತೆ ಮನವಿ ಮಾಡಿಕೊಂಡಿತ್ತು.
ಟೀಮ್ ಇಂಡಿಯಾದ ಸದಸ್ಯರಿಗೆ ಕಡ್ಡಾಯ ಕ್ವಾರಂಟೈನ್ನಿಂದ ವಿನಾಯಿತಿ ನೀಡುವಂತೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರೂ ಆದ ರಾಜ್ಯಸಭಾ ಸದಸ್ಯ ಶರದ್ ಪವಾರ್ ಅವರಲ್ಲಿ ಎಂಸಿಎ ಮತ್ತು ಬಿಸಿಸಿಐ ವಿನಂತಿಸಿಕೊಂಡಿದ್ದರಿಂದ ಆಟಗಾರರಿಗೆ ಕ್ವಾರಂಟೈನ್ನಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಭಾರತ vs ಇಂಗ್ಲೆಂಡ್: ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟ
'ಈ ಆಟಗಾರರಿಗೆ ಸಾಂಸ್ಥಿಕ ಐಸೊಲೇಶನ್ನಿಂದ ವಿನಾಯಿತಿ ನೀಡುವಂತೆ ನಾವು ಮಿಸ್ಟರ್ ಪವಾರ್ ಅವರಲ್ಲಿ ವಿನಂತಿಸಿಕೊಂಡಿದ್ದೇವೆ. ಈ ಆಟಗಾರರು ಕಳೆದ ಆಗಸ್ಟ್ನಿಂದಲೂ ಕ್ವಾರಂಟೈನ್ನಲ್ಲಿದ್ದರು ಮತ್ತು ಆಗಾಗ ಕೋವಿಡ್ ಪರೀಕ್ಷೆಗಳಿಗೆ ಒಳಗಾಗಿದ್ದರು. ಹೀಗಾಗಿ ಬುಧವಾರ ಮಧ್ಯರಾತ್ರಿ ಹೊತ್ತಿಗೆ ಕ್ವಾರಂಟೈನ್ನಿಂದ ವಿನಾಯಿತಿ ದೊರೆತಿದೆ,' ಎಂದು ಎಂಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.