ಮಂಗಳೂರು, ಮೇ.26: ಮಾಜಿ ಕ್ರಿಕೆಟರ್, 'ಮೈಸೂರು ಎಕ್ಸ್ ಪ್ರೆಸ್' ಎಂದೇ ಖ್ಯಾತಿ ಗಳಿಸಿರುವ ಜಾವಗಲ್ ಶ್ರೀನಾಥ್ ಅವರನ್ನು ಈ ಸಾಲಿನ ರಾಜ್ಯ ಮಟ್ಟದ ಪ್ರತಿಷ್ಠಿತ ರೋಟರಿ ವಂದನಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿನ ಜೀವಮಾನ ಸಾಧನೆಗಾಗಿ ಜಾವಗಲ್ ಶ್ರೀನಾಥ್ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
ದೇಶ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ಮೇ 29ರಂದು ರಾತ್ರಿ ನಗರದ ಹೋಟೆಲ್ ದೀಪಾ ಕಂಫರ್ಟ್ಸ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಜಾವಗಲ್ ಶ್ರೀನಾಥ್ ಅವರು ಭಾರತ ಪರ 67 ಟೆಸ್ಟ್ ಪಂದ್ಯವಾಡಿದ್ದು 236 ವಿಕೆಟ್ ಪಡೆದಿದ್ದಾರೆ. 229 ಏಕದಿನ ಕ್ರಿಕೆಟ್ ಪಂದ್ಯದಲ್ಲಿ 315 ವಿಕೆಟ್ ಉರುಳಿಸಿದ್ದಾರೆ. 4 ವಿಶ್ವಕಪ್ ಟೂರ್ನಿಯಲ್ಲಿ 44 ವಿಕೆಟ್ ಅಲ್ಲದೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 500ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ.