ಅನೇಕ ಪ್ರತಿಭಾವಂತ ಕ್ರಿಕೆಟಿಗರು ವಿಶ್ವಕಪ್ ಗೆದ್ದಿಲ್ಲ ಎಂದ ರವಿಶಾಸ್ತ್ರಿ
ವಿಶ್ವಕಪ್ ಟ್ರೋಫಿಯನ್ನು ಗೆಲ್ಲದೇ ಇದ್ದರೆ ಆ ಆಟಗಾರ ಉತ್ತಮ ಆಟಗಾರ ಅಲ್ಲವೇ ಅಲ್ಲ ಎಂದು ವಾದಿಸುವವರಿಗೆ ಚಾಟಿ ಬೀಸಿರುವ ರವಿಶಾಸ್ತ್ರಿ "ವಿಶ್ವ ಕ್ರಿಕೆಟ್ ಕಂಡ ಪ್ರತಿಭಾವಂತ ಆಟಗಾರರಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಮತ್ತು ರೋಹಿತ್ ಶರ್ಮಾ ಇದುವರೆಗೂ ಯಾವುದೇ ವಿಶ್ವಕಪ್ ಗೆದ್ದಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಕೆಟ್ಟ ಆಟಗಾರರಲ್ಲ, ನಾವು ವಿಶ್ವಕಪ್ ಗೆದ್ದಿರುವ ಇಬ್ಬರು ನಾಯಕರನ್ನು ( ಕಪಿಲ್ ದೇವ್ ಮತ್ತು ಎಂ ಎಸ್ ಧೋನಿ ) ಮಾತ್ರ ಹೊಂದಿದ್ದೇವೆ" ಎಂದು ಹೇಳಿಕೆ ನೀಡಿದ್ದಾರೆ.
ಆದರೆ ರೋಹಿತ್ ಕಪ್ ಗೆದ್ದಿದ್ದಾರೆ
ಮೇಲ್ಕಂಡ ಹೇಳಿಕೆಯಲ್ಲಿ ಪ್ರತಿಭಾವಂತ ಆಟಗಾರರು ಕಪ್ ಗೆದ್ದಿಲ್ಲ ಎಂದು ಹೇಳಿರುವ ರವಿಶಾಸ್ತ್ರಿ ಆ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರ ಹೆಸರನ್ನು ಕೂಡ ಸೇರಿಸಿಬಿಟ್ಟಿದ್ದಾರೆ. ಆದರೆ ರೋಹಿತ್ ಶರ್ಮಾ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು ಎಂಬುದು ಸತ್ಯಾಂಶ. ಹೌದು, ಟಿ ಟ್ವೆಂಟಿ ವಿಶ್ವಕಪ್ 2007ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಕೂಡ ಭಾಗವಹಿಸಿದ್ದರು.
ವಿಶ್ವಕಪ್ ಗೆಲ್ಲಲು ಸಚಿನ್ ತೆಂಡೂಲ್ಕರ್ 6 ಬಾರಿ ಆಡಬೇಕಾಯಿತು
ಅನೇಕ ದಿಗ್ಗಜ ಕ್ರಿಕೆಟಿಗರೇ ವಿಶ್ವಕಪ್ ಟ್ರೋಫಿ ಗೆದ್ದಿಲ್ಲ ಎಂದು ಟೀಕಾಕಾರರಿಗೆ ಟಾಂಗ್ ನೀಡಿರುವ ರವಿಶಾಸ್ತ್ರಿ ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರು ವಿಶ್ವಕಪ್ ಟ್ರೋಫಿಯನ್ನು ಗೆಲ್ಲಲು 6 ವಿಶ್ವಕಪ್ ಟೂರ್ನಿಗಳನ್ನು ಆಡಬೇಕಾಯಿತು ಎಂದಿದ್ದಾರೆ. ಹೌದು, 5 ಬಾರಿ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿ ಸಚಿನ್ ತೆಂಡೂಲ್ಕರ್ ಅಷ್ಟೂ ಬಾರಿ ಕೂಡ ಕಪ್ ಗೆಲ್ಲಲಾಗದೆ ನಿರಾಸೆಗೆ ಒಳಗಾಗಿದ್ದರು. ಆದರೆ ಆರನೇ ಬಾರಿಗೆ ಸಚಿನ್ ತೆಂಡೂಲ್ಕರ್ ವಿಶ್ವಕಪ್ ಗೆದ್ದರು.
ಆಟಗಾರನನ್ನು ವಿಶ್ವಕಪ್ ಟ್ರೋಫಿಗಳಿಂದ ಅಳೆಯಬಾರದು
ಇನ್ನೂ ಮುಂದುವರಿದು ಮಾತನಾಡಿರುವ ರವಿಶಾಸ್ತ್ರಿ ಓರ್ವ ಆಟಗಾರನನ್ನು ಯಾವುದೇ ಕಾರಣಕ್ಕೂ ವಿಶ್ವಕಪ್ ಟ್ರೋಫಿ ಗೆದ್ದ ಆಧಾರದ ಮೇಲೆ ಅಳೆಯಬಾರದು ಎಂದಿದ್ದಾರೆ. ಓರ್ವ ಆಟಗಾರನನ್ನು ಉತ್ತಮ ಆಟಗಾರ ಎಂದು ಪರಿಗಣಿಸಲು ಆತನ ಪ್ರದರ್ಶನ ಮುಖ್ಯವೇ ಹೊರತು ಕಪ್ ಅಲ್ಲ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.