ಪರದಾಡಿದ ಪ್ರಮುಖ ಆಟಗಾರರು
ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಕೆಲ ಪ್ರಮುಖ ಆಟಗಾರರು ರನ್ಗಳಿಸಲು ಪರದಾಡಿದ್ದಾರೆ. ಸ್ವತಃ ನಾಯಕ ವಿರಾಟ್ ಕೊಹ್ಲಿ ಕೂಡ ಆರಂಭಿಕ ಮೂರು ಪಂದ್ಯಗಳಲ್ಲಿ ನಿಡಿದ ಪ್ರದರ್ಶನ ಆಘಾತಕಾರಿಯಾಗಿತ್ತು. ಚೇತೇಶ್ವರ್ ಪೂಜಾರ ಕೂಡ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಎದುರಿಸಲು ವಿಫಲವಾಗಿದ್ದರು. ಟೀಮ್ ಇಂಡಿಯಾದ ಉಪ ನಾಯಕ ಅಜಿಂಕ್ಯಾ ರಹಾನೆಯಂತೂ ಸರಣಿಯ ಕೊನೆಯ ಹಂತಕ್ಕೆ ಬಂದಿದ್ದರೂ ಲಯವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಒಂದು ಇನ್ನಿಂಗ್ಸ್ನಲ್ಲಿ ಮಾತ್ರವೇ ಅರ್ಧ ಶತಕ ದಾಖಲಿಸಿದ್ದು ರಹಾನೆ ಅತ್ಯುತ್ತಮ ಪ್ರದರ್ಶನವಾಗಿದೆ.
ಸರಣಿಯುದ್ದಕ್ಕೂ ಮಿಂಚಿದ ರೋಹಿತ್ ಶರ್ಮಾ
ಆದರೆ ಈ ಸರಣಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ್ದು ಟೀಮ್ ಇಂಡಿಯಾದ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ. ಅದರಲ್ಲೂ ರೋಹಿತ್ ಶರ್ಮಾ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಅದ್ಭುತವಾಗಿ ಎದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಓವಲ್ ಮೈದಾನದಲ್ಲಿ ಭರ್ಜರಿ ಶತಕವನ್ನು ಕೂಡ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಒಟ್ಟಾರೆ ಈ ಸರಣಿಯ್ಲಲಿ ರೋಹಿತ್ ಶರ್ಮಾ ಆಡಿದ 8 ಇನ್ನಿಂಗ್ಸ್ಗಳಲ್ಲಿ 369 ರನ್ಗಳಿಸಿದ್ದಾರೆ. ಈ ಮೂಲಕ ಭಾರತ ಇಂಗ್ಲೆಂಡ್ ನೆಲದಲ್ಲಿ ಮೇಲುಗೈ ಸಾಧಿಸಲು ರೋಹಿತ್ ಶರ್ಮಾ ಪ್ರಮುಖ ಪಾತ್ರವಹಿಸಿದ್ದಾರೆ.
ಮಾರ್ಕ್ವುಡ್ಗೆ ಸವಾಲಾದ ದಾಂಡಿಗ ಕೂಡ ರೋಹಿತ್ ಶರ್ಮಾ
ಇಂಗ್ಲೆಂಡ್ ತಮಡದ ವೇಗಿ ಮಾರ್ಜ್ವುಡ್ ಕೂಡ ಟೀಮ್ ಇಂಡಿಯಾದ ಅತ್ಯಂತ ಕಠಿಣ ಬ್ಯಾಟ್ಸ್ಮನ್ ಎಂದು ಹೆಸರಿಸಿದ್ದು ರೋಹಿತ್ ಶರ್ಮಾ ಹೆಸರನ್ನೇ. ಯಾವುದೇ ಪರಿಸ್ಥೊತಿಯಲ್ಲಾದರೂ ರೋಹಿತ್ ಶರ್ಮಾಗೆ ಬೌಲಿಂಗ್ ಮಾಡುವುದು ಬಹಳ ಕಠಿಣ ಎಂದಿದ್ದಾರೆ ಮಾರ್ಕ್ವುಡ್. "ರೋಹಿತ್ ಶರ್ಮಾ ಓರ್ವ ಅದ್ಭುತವಾದ ಬ್ಯಾಟ್ಸ್ಮನ್. ಯಾವುದೇ ಪರಿಸ್ಥಿತಿಯಲ್ಲಾದರೂ ಆತನಿಗೆ ಬೌಲಿಂಗ್ ನಡೆಸುವುದು ಬಹಳ ಕಠಿಣ" ಎಂದಿದ್ದಾರೆ ಮಾರ್ಕ್ವುಡ್. ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮತ್ತೋರ್ವ ಆರಂಭಿಕ ಆಟಗಾರ ಕೆಎಲ್ ರಾಹುಲ್ ಬಗ್ಗೆ ಮಾತನಾಡಿದ ಮಾರ್ಕ್ವುಡ್ "ರಾಹುಲ್ ಆಟ ಕೂಡ ತನಗೆ ಮೆಚ್ಚುಗೆಯಾಯಿತು. ಆತ ಬಹಳ ತಾಳ್ಮೆಯಿಂದ ಆಡಬಲ್ಲ ಆಟಗಾರ. ಆತ ಒಮ್ಮೆ ಲಯವನ್ನು ಕಂಡುಕೊಂಡರೆ ಬಹಳ ಸುಂದರವಾಗಿ ಆಡುತ್ತಾರೆ. ಭಾರತದ ಆರಂಭಿಕರಿಬ್ಬರ ವಿಕೆಟ್ ನಮಗೆ ಬಹಳ ದೊಡ್ಡ ವಿಕೆಟ್ ಆಗಿದೆ" ಎಂದು ಮಾರ್ಕ್ವುಡ್ ವಿವರಿಸಿದ್ದಾರೆ.
ಪ್ರತಿ ಆಟಗಾರನಿಗೂ ನಮ್ಮಲ್ಲಿ ಯೋಜನೆಗಳಿವೆ
ಇನ್ನು ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ವೇಗದ ಬೌಲರ್ ಭಾರತ ತಂಡದ ವಿರುದ್ಧ ಬೌಲಿಂಗ್ ರಣತಂತ್ರದ ಬಗ್ಗೆ ಸುಳಿವು ನೀಡಿದರು. ಇಂಗ್ಲೆಂಡ್ ತಂಡ ಟೀಮ್ ಇಂಡಿಯಾದ ಪ್ರತಿ ಆಟಗಾರನ ವಿರುದ್ಧವೂ ಪ್ರತ್ಯೇಕವಾದ ರಣತಂತ್ರವನ್ನು ಹೆಣೆದಿದೆ ಎಂದಿದ್ದಾರೆ. "ನಾವು ತಂಡವಾಗಿ ನಮ್ಮ ಮೇಲೆ ಭರವಸೆಯನ್ನು ಹೊಂದಿದ್ದೇವೆ. ನಮ್ಮ ಬಳಿ ಪ್ರತಿ ಆತಗಾರನಿಗೂ ಪ್ರತ್ಯೇಕ ರಣತಂತ್ರವಿದೆ. ಕೆಲ ಸಂದರ್ಭದಲ್ಲಿ ಇದು ಕೆಲಸ ಮಾಡುತ್ತದೆ ಕೆಲ ಬಾರಿ ಇಲ್ಲ. ಆದರೆ ಎದುರಾಳಿ ಅತ್ಯಂತ ಬಲಿಷ್ಠ ಸಾಮರ್ಥ್ಯದ ಬ್ಯಾಟಿಂಗ್ ಲೈನ್ಅಪ್ ಹೊಂದಿದ್ದಾಗ ನಿಮ್ಮ ಮೇಲಿನ ನಿರೀಕ್ಷೆಗೆ ತಕ್ಕನಾಗಿ ಪ್ರದರ್ಶನ ನೀಡಲು ವಿಫಲವಾದರೆ ಎದುರಾಳಿಗಳು ನಿಮ್ಮನ್ನು ಮುಗಿಸಿಬಿಡುತ್ತಾರೆ" ಎಂದು ಮಾರ್ಕ್ವುಡ್ ಅಭಿಪ್ರಾಯಪಟ್ಟಿದ್ದಾರೆ.