ಚೆಸ್ಟರ್ ಲೇ ಸ್ಟ್ರೀಟ್, ಜುಲೈ 02: ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳು ಪ್ರಶಸ್ತಿ ರೇಸ್ನಿಂದ ಹೊರಬಿದ್ದಿವೆ. ಆದರೂ, ಸೋಮವಾರ ಇಲ್ಲಿನ ರಿವರ್ಸೈಡ್ ಕ್ರೀಡಾಂಗಣದಲ್ಲಿ ನಡೆದ ಇತ್ತಂಡಗಳ ನಡುವಣ ಜಟಾಪಟಿ ಪ್ರೇಕ್ಷಕರಿಗೆ ರೋಚಕ ಪಂದ್ಯದ ಸವಿಯನ್ನು ಉಣಬಡಿಸಿತು.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಹೈ ಸ್ಕೋರಿಂಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಆರಂಭಿಕ ಆಘಾತ ಅನುಭವಿಸಿದರೂ ನಿಕೋಲಸ್ ಪೂರನ್ ಅವರ ಅಮೋಘ ಶತಕದ ನೆರವಿನಿಂದ ಗೆಲುವಿನ ಸನಿಹಕ್ಕೆ ದಾಪುಗಾಲಿಟ್ಟಿತ್ತು. ಆದರೆ, 2 ವರ್ಷಗಳ ಬಳಿಕ ಸೀಮಿತ್ ಓವರ್ಗಳ ಕ್ರಿಕೆಟ್ನಲ್ಲಿ ಮೊದಲ ಬಾರಿ ಬೌಲಿಂಗ್ ದಾಳಿಗಿಳಿದ ಶ್ರೀಲಂಕಾ ತಂಡದ ಅನುಭವಿ ಆಟಗಾರ ಏಂಜಲೊ ಮ್ಯಾಥ್ಯೂಸ್, ತಮ್ಮ ಮೊದಲ ಎಸೆತದಲ್ಲೇ ಪೂರನ್ ವಿಕೆಟ್ ಪಡೆದು ಲಂಕಾ ಪಡೆಗೆ 23 ರನ್ ಜಯ ತಂದುಕೊಟ್ಟರು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಅವಿಷ್ಕ ಫರ್ನಾಂಡೊ ಅವರ ಚೊಚ್ಚಲ ಶತಕದ ನೆರವಿನಿಂದ 338/6 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 9 ವಿಕೆಟ್ಗೆ 315 ರನ್ಗಳನ್ನು ಗಳಿಸಿ ಸೋಲಿಗೆ ಶರಣಾಯಿತು.
ಟೀಮ್ ಇಂಡಿಯಾ ಪ್ಲೇಯಿಂಗ್ 11ಗೆ ಈ ಆಲ್ರೌಂಡರ್ ಎಂಟ್ರಿ ಸಾಧ್ಯತೆ!
ಇನಿಂಗ್ಸ್ನ ಕೊನೆಯ ಮೂರು ಓವರ್ಗಳಲ್ಲಿ ಅಂದರೆ 18 ಎಸೆತಗಳಲ್ಲಿ ವೆಸ್ಟ್ ಇಂಡೀಸ್ ಗೆಲುವಿಗೆ 31 ರನ್ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ನಾಯಕ ದಿಮುತ್ ಕರುಣಾರತ್ನೆ ಅವರಿಗೆ ಯಾವ ಬೌಲರ್ಗೆ ಬೌಲಿಂಗ್ ನೀಡುವುದೆಂಬ ತಲೆನೋವು ಶುರುವಾಗಿತ್ತು. ಏಕೆಂದರೆ ತಂಡದ ಸ್ಟಾರ್ ಬೌಲರ್ ಲಸಿತ್ ಮಾಲಿಂಗ ಅವರ ಖಾತೆಯಲ್ಲಿ ಇನ್ನು ಒಂದು ಓವರ್ ಮಾತ್ರವೇ ಬಾಕಿಯಿತ್ತು.
ಟೀಮ್ ಇಂಡಿಯಾ ಸೇರಲು ಮಯಾಂಕ್ ಅಗರ್ವಾಲ್ಗೆ ಐಸಿಸಿ ಗ್ರೀನ್ ಸಿಗ್ನಲ್
ಈ ಸಂದರ್ಭದಲ್ಲಿ ನಾಯಕನ ಬಳಿ ತೆರಳಿದ ತಂಡದ ಅತ್ಯಂತ ಅನುಭವಿ ಆಟಗಾರ ಮ್ಯಾಥ್ಯೂಸ್ ತಮಗೆ ಚೆಂಡು ನೀಡುವಂತೆ ಕೇಳಿಕೊಂಡರು. ಅಂದಹಾಗೆ ಭುಜದ ನೋವಿನ ಸಮಸ್ಯೆ ಕಾರಣ ಮ್ಯಾಥ್ಯೂಸ್ 2017ರ ಬಳಿಕ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡಿಲ್ಲ. ಬಳಿಕ ಕರುಣಾರತ್ನೆ ಆಲ್ರೌಂಡರ್ ಮ್ಯಾಥ್ಯೂಸ್ ಮೇಲೆ ಇಟ್ಟ ಭರವಸೆ ಸುಳ್ಳಾಗಲಿಲ್ಲ. ಬೌಲಿಂಗ್ ದಾಳಿಗೆ ಇಳಿದು ಎಸೆದ ಮೊದಲ ಎಸೆತದಲ್ಲೇ 118 ರನ್ಗಳನ್ನು ಸಿಡಿಸಿ ವಿಂಡೀಸ್ಗೆ ಜಯ ತಂದುಕೊಡಲು ಟೊಂಕ ಕಟ್ಟಿ ನಿಂತಿದ್ದ ಪೂರನ್ ಅವರ ವಿಕೆಟ್ ಪಡೆದೇ ಬಿಟ್ಟರು. ತಮ್ಮ 2 ಓವರ್ಗಳ ಸ್ಪೆಲ್ನಲ್ಲಿ ಮ್ಯಾಥ್ಯೂಸ್ 1 ವಿಕೆಟ್ ಜೊತೆಗೆ ಕೇವಲ 6 ರನ್ಗಳನ್ನು ಮಾತ್ರವೇ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೈ ಬೆರಳು ಮುರಿದರೂ ಲೆಕ್ಕಿದಸೆ ಆಡಿ ಮನ ಗೆದ್ದ ವಹಾಬ್ ರಿಯಾಝ್!
"ಪೂರನ್ ಅದ್ಭುತವಾಗಿ ಆಡುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಓವರ್ಗಳನ್ನು ಉತ್ತಮ ರೀತಿಯಲ್ಲಿ ಮುಗಿಸುವ ಅನಿವಾರ್ಯತೆ ಇತ್ತು. ಮ್ಯಾಥ್ಯೂಸ್ ತಾವು ಈ ಓವರ್ಗಳನ್ನು ಎಸೆಯುವುದಾಗಿ ಮುಂದಾದರು. ಅಷ್ಟೇ ಅದ್ಭುತ ರೀತಿಯಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸಿದರು. ಒಬ್ಬ ನಾಯಕನಾಗಿ ಆಟಗಾರರಿಂದ ಇಂಥದ್ದೊಂದು ಪ್ರದರ್ಶನವನ್ನೇ ನಿರೀಕ್ಷಿಸುತ್ತಿರುತ್ತೇನೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ಕರುಣಾರತ್ನೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.