ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿರುವುದರಿಂದ ಟಿ20 ತಂಡದಿಂದ ಹೊರಗುಳಿದಿದ್ದರು. ಇದೀಗ ಏಕದಿನ ತಂಡದಂದಲೂ ಹೊರಗುಳಿಯುವ ಸಾಧ್ಯತೆ ಬಹುತೇಕ ಹೆಚ್ಚಾಗಿದೆ. ಹೀಗಾಗಿ ಏಕದಿನ ತಂಡಕ್ಕೆ ಶಿಖರ್ ಬದಲಿಗೆ ಯಾರನ್ನು ಆಯ್ಕೆ ಮಾಡಬಹುದು ಎಂಬುದು ಸದ್ಯದ ಕುತೂಹಲ.
ಟಿ20 ಸರಣಿಗೆ ಶಿಖರ್ ಧವನ್ ಬದಲಿಗೆ ಸಂಜು ಸ್ಯಾಮ್ಸನ್ ಆವರನ್ನು ಆಯ್ಕೆ ಮಾಡಲಾಗಿತ್ತು. ಅದರೆ ಏಕದಿನ ತಂಡಕ್ಕೆ ಬದಲಿ ಆಟಗಾರ ಯಾರಾಗ್ತಾರೆ ಅನ್ನೋದು ಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ ಈ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗುವ ಸಾಧ್ಯತೆ ಅಧಿಕವಾಗಿದೆ ಎನ್ನಲಾಗ್ತಿದೆ. ಈಗಾಗಲೇ ಟೆಸ್ಟ್ನಲ್ಲಿ ಆರಂಭಿಕ ಆಟಗಾರನಾಗಿ ಸ್ಥಾನವನ್ನು ಭದ್ರಮಾಡಿಕೊಂಡಿರುವ ಮಯಾಂಕ್ ಏಕದಿನ ಪಂದ್ಯದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಸಿಕ್ಕಿರುವ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿಕೊಂಡು ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಇದೀಗ ಏಕದಿನ ತಂಡದಲ್ಲೂ ಅವಕಾಶ ದೊರೆತರೆ ತನ್ನ ಸಾಮರ್ಥ್ಯ ಏನು ಅನ್ನೋದನ್ನು ಸಾಬೀತು ಪಡುಸುವ ಹುಮ್ಮಸ್ಸಿನಲ್ಲಿದ್ದಾರೆ. ದೇಸಿ ಸೀಮಿತ ಓವರ್ಗಳ ಟೂರ್ನಿಗಳಾದ ವಿಜಯ್ ಹಜಾರೆ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ಚಾಂಒಇಯನ್ ಆಗಲು ಅಗರ್ವಾಲ್ ಪ್ರದರ್ಶನ ಪ್ರಮುಖ ಕಾರಣವಾಗಿತ್ತು. ಅದೇ ರೀತಿ ಅಂತರಾಷ್ಟ್ರೀಯ ಟೂರ್ನಿಯಲ್ಲೂ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ.
ತಂಡದ ಮ್ಯಾನೇಜ್ಮೆಂಟ್ ಜೊತೆಗೆ ಸಮಾಲೋಚನೆ ಮಾಡಿದ ಆಯ್ಕೆ ಸಮಿತಿ ಮಯಾಂಕ್ ಹೆಸರನ್ನು ಶಿಫಾರಸ್ಸು ಮಾಡಿದೆ ಎಂದು ಮೂಲಗಳು ಹೇಳಿದೆ. ವಿಶ್ವಕಪ್ ಸಂದರ್ಭದಲ್ಲಿ ಗಾಯಗೊಂಡಿದ್ದ ವಿಜಯ್ ಶಂಕರ್ ಬದಲಿಗೆ ಮಯಾಂಕ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಆದರೆ ಆಡುವ ಬಳಗದಲ್ಲಿ ಅಗರ್ವಾಲ್ ಅವಕಾಶವನ್ನು ಪಡೆಯುವಲ್ಲಿ ವಿಫಲರಾಗಿದ್ದರು.
ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಧವನ್ಗೆ ವೈದ್ಯಕೀಯ ವರದಿಯ ಪ್ರಕಾರ ಇನ್ನೂ ಮೂರ್ನಾಲ್ಕು ವಾರಗಳ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಏಕದಿನ ತಂಡಕ್ಕೆ ಆಯ್ಕೆಯಾಗಿರುವ ತಂಡದಿಂದ ಶಿಖರ್ ಧವನ್ ಹೊರಬೀಳುವ ಅನಿವಾರ್ಯತೆಯಿದೆ.