ಬೆಂಗಳೂರು, ನವೆಂಬರ್ 03: ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದಿರುವ ಗ್ರೂಪ್ ಎ ರಣಜಿ ಟ್ರೋಫಿ ಪಂದ್ಯದಲ್ಲಿ ಶುಕ್ರವಾರದಂದು ಮಾಯಾಂಕ್ ಅಗರವಾಲ್ ಮಿಂಚಿದರು. ಚೊಚ್ಚಲ ತ್ರಿಶತಕ ಸಿಡಿಸುವ ಮೂಲಕ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಬೃಹತ್ ಮೊತ್ತ ಪೇರಿಸಲು ನೆರವಾದರು.
ರಣಜಿ : ಹೈದರಾಬಾದ್ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ
ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ. ಮಹಾರಾಷ್ಟ್ರ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 245 ರನ್ಗೆ ಕಟ್ಟಿಹಾಕಿದ್ದ ಕರ್ನಾಟಕ, ತನ್ನ ಮೊದಲ ಇನ್ನಿಂಗ್ಸ್ 628/5 ಸ್ಕೋರ್ ಮಾಡಿ ಡಿಕ್ಲೇರ್ ಮಾಡಿಕೊಂಡಿದೆ.
ಕರ್ನಾಟಕದ ಪರ ಆರ್ ಸಮರ್ಥ್ 129ರನ್ (17 ಬೌಂಡರಿ), ಮಾಯಾಂಕ್ ಅಜೇಯ 304(28 ಬೌಂಡರಿ, 4 ಸಿಕ್ಸರ್), ಕರುಣ್ ನಾಯರ್ 116ರನ್(13 ಬೌಂಡರಿ) ಭರ್ಜರಿ ಪ್ರದರ್ಶನ ನೀಡಿದರು.
ಜೊತೆಯಾಟ ದಾಖಲೆ: 2013-14ರ ರಣಜಿ ಫೈನಲ್ನಲ್ಲಿ ಕೆ.ಎಲ್. ರಾಹುಲ್ ಮತ್ತು ಗಣೇಶ ಸತೀಶ್ ಮೊದಲ ವಿಕೆಟ್ಗೆ 216 ರನ್ ಕಲೆ ಹಾಕಿದ್ದು ಹಿಂದಿನ ಉತ್ತಮ ಸಾಧನೆಯಾಗಿತ್ತು. ಆರ್ ಸಮರ್ಥ್ ಹಾಗೂ ಮಾಯಾಂಕ್ ಅವರು ಮೊದಲ ವಿಕೆಟ್ ಗೆ 259 ರನ್ಗಳ ದಾಖಲೆಯ ಜೊತೆಯಾಟ ಸಾಧಿಸಿದರು.
After KL Rahul & Karun Nair, Mayank Agarwal becomes 3rd Karnataka player to score FC triple hundred. #RanjiTrophy #MHAvKAR
— Karnataka Ranji Team (@RanjiKarnataka) November 3, 2017
ಮಾಯಾಂಕ್ ತ್ರಿಶತಕ: ಗುರುವಾರದಂದು ಚೊಚ್ಚಲ ದ್ವಿಶತಕ ಸಿಡಿಸಿದ್ದ ಮಾಯಾಂಕ್ ಅವರು ಅವರು ಶುಕ್ರವಾರದಂದು ಉತ್ತಮವಾಗಿ ಆಡಿ ಮೊದಲ ತ್ರಿಶತಕ ಬಾರಿಸಿದರು.
ಬಲಗೈ ಬ್ಯಾಟ್ಸ್ಮನ್ ಮಯಂಕ್ 2013ರಲ್ಲಿ ಜಾರ್ಖಂಡ್ ವಿರುದ್ಧ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಇದು ಇವರು ಗಳಿಸಿದ ಚೊಚ್ಚಲ ತ್ರಿಶತಕವಾಗಿದೆ. 2015ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ 118 ರನ್ ಗಳಿಸಿದ ಬಳಿಕ ಇಂದಿನ ಪಂದ್ಯದಲ್ಲೇ ನೂರರ ಗಡಿ ದಾಟಿದ್ದು, ಹಾಗೂ ರಣಜಿಯಲ್ಲಿ ಗಳಿಸಿದ ವೈಯಕ್ತಿಕ ಶ್ರೇಷ್ಠ ಗಳಿಸಿದ್ದಾಗಿದೆ.
ಇದುವರೆಗೂ 32 ಪಂದ್ಯಗಳನ್ನಾಡಿದ್ದು ಪ್ರಥಮ ದರ್ಜೆಯಲ್ಲಿ ಎರಡು ಶತಕ ಮತ್ತು ಒಂದು ದ್ವಿಶತಕ ಗಳಿಸಿದ್ದಾರೆ. ಕರ್ನಾಟಕದ ಪರ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಅವರ ನಂತರ ಮಾಯಾಂಕ್ ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ತ್ರಿಶತಕ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.