ಆ ಸೋಲು ಇಂದಿಗೂ ನನ್ನನ್ನು ಕಾಡುತ್ತಿದೆ
2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತಿದ್ದರ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ ನಮ್ಮದೇ ತವರಿನಲ್ಲಿ ಆಯೋಜನೆಯಾಗಿದ್ದ ಆ ಫೈನಲ್ ಪಂದ್ಯದಲ್ಲಿ ಸೋಲುವುದೆಂದರೆ ಹೇಗೆ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದ ನಾವು ಆ ಪಂದ್ಯದ 9 ಓವರ್ ಮುಕ್ತಾಯವಾದ ಬಳಿಕ ಯಾವುದೇ ವಿಕೆಟ್ ಕಳೆದುಕೊಳ್ಳದೇ 100 ರನ್ ಗಡಿ ದಾಟಿದ್ದೆವು ಆದರೆ ನಂತರ ಸೋಲು ಕಂಡೆವು ಎಂದು ವಿರಾಟ್ ಕೊಹ್ಲಿ ಆ ಸೋಲಿನ ಕುರಿತ ನೋವನ್ನು ಹೊರಹಾಕಿದ್ದಾರೆ.
ಕೆಎಲ್ ರಾಹುಲ್ ಇಂದಿಗೂ ಚಿಂತಿಸುತ್ತಾರೆ
ಇನ್ನೂ ಮುಂದುವರಿದು ಆ ದೊಡ್ಡ ಸೋಲಿನ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ ಆ ಪಂದ್ಯದ ಹೈಲೈಟ್ಸ್ ಪ್ರಸಾರವಾದಾಗಲೆಲ್ಲಾ ಕೆಎಲ್ ರಾಹುಲ್ ಆ ಪಂದ್ಯದ ಸ್ಕ್ರೀನ್ ಶಾಟ್ ತೆಗೆದು ನನಗೆ ಕಳುಹಿಸಿ ಬೇಸರವನ್ನು ವ್ಯಕ್ತ ಪಡಿಸುತ್ತಾರೆ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಕೆಎಲ್ ರಾಹುಲ್ ಇಂದಿಗೂ ಸಹ ಆ ಸೋಲಿನ ನೋವು ನನ್ನನ್ನು ಕಾಡುತ್ತದೆ ಎಂದು ವಿರಾಟ್ ಕೊಹ್ಲಿ ಬಳಿ ಹೇಳಿಕೊಳ್ಳುತ್ತಿರುತ್ತಾರಂತೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕೆಎಲ್ ರಾಹುಲ್ ಆ ಪಂದ್ಯದಲ್ಲಿ 9 ಎಸೆತಗಳಿಗೆ 11 ರನ್ ಬಾರಿಸುವ ಮೂಲಕ ತಂಡಕ್ಕೆ ದೊಡ್ಡ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದರು.
ಆ ಟೂರ್ನಿಯಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ
ಇನ್ನು ಆ ದೊಡ್ಡ ಸೋಲಿನ ಕುರಿತು ಮೆಲುಕು ಹಾಕಿರುವ ವಿರಾಟ್ ಕೊಹ್ಲಿ ಆ ಟೂರ್ನಿಯುದ್ದಕ್ಕೂ ಅಬ್ಬರಿಸಿ ಬೊಬ್ಬಿರಿದಿದ್ದರು. ಹೌದು, 2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೀಡಿದ ಅಮೋಘ ಪ್ರದರ್ಶನವನ್ನು ಇತರೆ ಯಾವುದೇ ಟೂರ್ನಿಯಲ್ಲಿಯೂ ಕೂಡ ಬೇರೆ ಯಾವುದೇ ಆಟಗಾರರು ನೀಡಲಾಗಿಲ್ಲ. ಆ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 973 ರನ್ ಚಚ್ಚುವುದರ ಮೂಲಕ ಆರೆಂಜ್ ಕ್ಯಾಪ್ ವಿಜೇತರಾಗಿ ಹೊರಹೊಮ್ಮಿದರು ಹಾಗೂ ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಆವೃತ್ತಿಯೊಂದರಲ್ಲಿ ಬ್ಯಾಟ್ಸ್ಮನ್ ಗಳಿಸಿದ ಅತಿ ಹೆಚ್ಚು ರನ್ ಎಂಬ ದಾಖಲೆಯಾಗಿ ಉಳಿದಿದೆ.