ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಬ್ರಿಸ್ಬೇನ್ನ ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲೂ ಟೀಮ್ ಇಂಡಿಯಾದ ಕೆಲ ಆಟಗಾರರನ್ನು ಗುರಿಯಾಗಿರಿಸಿ ಪ್ರೇಕ್ಷಕರು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ವರದಿಯಾಗಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರನೇ ಟೆಸ್ಟ್ ಪಂದ್ಯದ ವೇಳೆ ಕೆಲ ಪ್ರೇಕ್ಷಕರು ಜನಾಂಗೀಯವಾಗಿ ನಿಂದಿಸಿದ ಪ್ರಕರಣ ಮೂರು ಹಾಗೂ ನಾಲ್ಕನೇ ದಿನದಾಟದ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಸಿರಾಜ್ ತಕ್ಷಣವೇ ಮೈದಾನದ ಅಂಪೈರ್ಗಳಿಗೆ ಮಾಹಿತಿ ನೀಡಿ ಕೆಲ ಪ್ರೇಕ್ಷಕರನ್ನು ಮೈದಾನದಿಂದ ಹೊರಹಾಕಲುಕಾರಣರಾಗಿದ್ದರು ಈ ಘಟನೆಯ ಬಗ್ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ದೂರನ್ನು ಕುಡ ನೀಡಿತ್ತು.
ನಿರ್ಣಾಯಕ ಟೆಸ್ಟ್ಗೆ ಅಶ್ವಿನ್, ಬೂಮ್ರಾ ಇಲ್ಲ: ಬೌಲಿಂಗ್ ವಿಭಾಗದ ಒಟ್ಟು ಅನುಭವ 4 ಟೆಸ್ಟ್
ಈ ಘಟನೆ ನಡೆದ ಕೆಲವೇ ದಿನಗಳ ಅಂತರದಲ್ಲಿ ಇದೀಗ ಗಾಬಾ ಕ್ರೀಡಾಂಗಣದಲ್ಲೂ ಇಂತದ್ದೇ ಘಟನೆ ನಡೆದಿದೆ ಎಂದು ವರದಿಯಾಗಿದೆ. ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ವಾಶಿಂಗ್ಟನ್ ಸುಂದರ್ ಅವರನ್ನು ಗುರಿಯಾಗಿಸಿ ಆಸ್ಟ್ರೇಲಿಯಾದ ಪ್ರೇಕ್ಷಕರು ಈ ನಿಂದನೆಯನ್ನು ಮಾಡಿದ್ದಾರೆ ಎಂದು ವರದಿಯಾಗಿದೆ.
ಸಿಡ್ನಿಯಲ್ಲಿ ನಡೆದ ಘಟನೆಗೆ ಕ್ರಿಕೆಟ್ ಪ್ರೇಮಿಗಳು, ತಜ್ಞರು ಮಾಜಿ ಆಟಗಾರರು ಸೇರಿದಂತೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು. ಐಸಿಸಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಕೂಡ ನಡೆಸಿದೆ. ಈಗ ಅಂತಾದ್ದೇ ಪ್ರಕರಣ ಮತ್ತೆ ಆಸ್ಟ್ರೇಲುಯಾದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾ ಪ್ರೇಕ್ಷಕರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಭಾರೀ ಪ್ರಮಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ.