ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೈದಾನದ ಒಳಗೆ ಮತ್ತು ಮೈದಾನದಾಚೆ ಸವಾಲುಗಳ ಮೇಲೆ ಸವಾಲುಗಳನ್ನು ಎದುರಿಸಿಯೂ ಅದ್ಭುತವಾಗಿ ಪ್ರದರ್ಶನ ನಿಡಿದ ಆಟಗಾರ ಮೊಹಮ್ಮದ್ ಸಿರಾಜ್. ತಂದೆಯ ಅಗಲಿಕೆ, ಪ್ರೇಕ್ಷಕರ ನಿಂದನೆಯ ಜೊತೆಗೆ ಗಾಯದಿಂದಾಗಿ ಅನುಭವಿ ಬೌಲರ್ಗಳ ಅಲಭ್ಯತೆಯ ಮಧ್ಯೆಯೂ ಸಿರಾಜ್ ನೀಡಿದ ಪ್ರದರ್ಶನ ಶ್ರೇಷ್ಠ ಪ್ರತಿಯೊಬ್ಬರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಭರತ್ ಅರುಣ್ ಸಿರಾಜ್ ಅವರ ಸಾಮರ್ಥ್ಯದ ಬಗ್ಗೆ ಮಾತುಗಳನ್ನಾಡಿದ್ದಾರೆ.
ಮೊಹಮ್ಮದ್ ಸಿರಾಜ್ ಆಟದ ಬಗೆಗೆ ಸಾಕಷ್ಟು ಹಸಿವನ್ನು ಹೊಂದಿದ ಆಟಗಾರ, ಆತ ತನ್ನ ಪ್ರದರ್ಶನವನ್ನು ಸುಧಾರಿಸಲು ಮತ್ತು ಉತ್ತಮಗೊಳಿಸಲು ಯಾವಾಗಲು ಪ್ರಯತ್ನಿಸುತ್ತಾರೆ. ಇದು ಆರ್ಸಿಬಿ ತಂಡದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಆತನನ್ನು ನೋಡಿದಾಗಿನಿಂದಲೂ ಮುಂದುವರಿದಿದೆ ಎಂದು ಭರತ್ ಅರುಣ್ ಸಿರಾಜ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಚೊಚ್ಚಲ ಬಾರಿಗೆ ಆಯ್ಕೆಯಾಗಿ ಪದಾರ್ಪಣೆಯನ್ನು ಮಾಡಿದ್ದರು. 3 ಪಂದ್ಯಗಳನ್ನು ಆಡಿ 13 ವಿಕೆಟ್ ಪಡೆಯುವಲ್ಲಿ ಸಿರಾಜ್ ಯಶಸ್ವಿಯಾಗಿದ್ದಲ್ಲದೆ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು.
ಆರ್ ಅಶ್ವಿನ್ ಅವರ ಯುಟ್ಯೂಬ್ನಲ್ಲಿ ಮಾತನಾಡಿದ ಭರತ್ ಅರುಣ್ "ಈ ಮೊದಲು ಅವರ ಸೀಮಿತ ಓವರ್ಗಳಿಗೆ ಟೀಮ್ ಇಂಡಿಯಾವನ್ನು ಕೆಲ ಬಾರಿ ಪ್ರತಿನಿಧಿಸಿದರು. ಆದರೆ ಅವರಲ್ಲಿದ್ದ ಆತ್ಮವಿಶ್ವಾಸ ಅವರ ದೊಡ್ಡ ಸಾಮರ್ಥ್ಯ ಮತ್ತು ಯಶಸ್ಸಿನ ಗುಟ್ಟು. ಅದೇ ಅವರನ್ನು ಈ ಮಟ್ಟಕ್ಕೆ ಕರೆದುಕೊಂಡು ಬಂದಿದೆ" ಎಂದು ಹೇಳಿದ್ದಾರೆ.
ಯುಎಇ ಆಟಗಾರರಿಂದ ಮ್ಯಾಚ್ ಫಿಕ್ಸಿಂಗ್; ಅಮಾನತು ಮಾಡಿದ ಐಸಿಸಿ
ಮೊಹಮ್ಮದ್ ಸಿರಾಜ್ ಆಸ್ಟ್ರೇಲುಯಾ ವಿರುದ್ಧ ಮೆಲ್ಬರ್ನ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆಯನ್ನು ಮಾಡಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳಿಂದ ಭರ್ಜರಿ ಗೆಲುವನ್ನು ಸಾಧಿಸಿತ್ತು. ಇನ್ನು ಬ್ರಿಸ್ಬೇನ್ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯ ಸಿರಾಜ್ ಪಾಲಿಗೆ 3ನೇ ಪಂದ್ಯವಾಗಿತ್ತು. ಆದರೆ ಈ ಪಂದ್ಯದಲ್ಲಿ ತಂಡದ ಯುವ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಜವಾಬ್ಧಾರಿ ಸಿರಾಜ್ ಮೇಲಿತ್ತು. ಇದನ್ನು ಯಶಸ್ವಿಯಾಗಿ ನಿಭಾಯಿಸಿದ ಸಿರಾಜ್ ಐದು ವಿಕೆಟ್ಗಳ ಗೊಂಚಲನ್ನು ಪಡೆಯುವಲ್ಲಿಯೂ ಯಶಸ್ವಿಯಾದರು. ಈ ಅದ್ಭುತ ಪ್ರದರ್ಶನದಿಂದಾಗಿ ಮುಂದಿನ ಇಂಗ್ಲೆಂಡ್ ವಿರುದ್ಧದ ಸರಣಿಗೂ ಸಿರಾಜ್ ಆಯ್ಕೆಯಾಗಿದ್ದು ತವರಿನಲ್ಲಿಯೂ ಇದೇ ಪ್ರದರ್ಶನ ಮುಂದುವರಿಸುವ ಉತ್ಸಾಹದಲ್ಲಿದ್ದಾರೆ.