ಹೀರೋ ಆಗಿ ಮಿನುಗಿದ್ದ ಸಿರಾಜ್
ಸಿರಾಜ್ ಮಾರಕ ದಾಳಿಯಿಂದಾಗಿ ಆವತ್ತು ಕೆಕೆಆರ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 84 ರನ್ ಬಾರಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂದ್ಯವನ್ನು ಭರ್ಜರಿ 8 ವಿಕೆಟ್ಗಳಿಂದ ಗೆದ್ದಿತ್ತು. 13.3ನೇ ಓವರ್ಗೆ ಪಂದ್ಯ ಮುಗಿಸಿಬಿಟ್ಟಿತ್ತು. ಆರ್ಸಿಬಿಯ ಈ ಗೆಲುವಿನ ಬಳಿಕ ಸಿರಾಜ್ ಹೀರೋ ಆಗಿ ಮೆರೆದಿದ್ದರು.
ಅಪ್ಪನಿಗೆ ಅನಾರೋಗ್ಯ ಕಾಡುತ್ತಿದೆ
ಪಂದ್ಯದ ಬಳಿಕ ಸಿರಾಜ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ್ದ ಸಿರಾಜ್, 'ಈ ದಿನಗಳಲ್ಲಿ ಅಪ್ಪನಿಗೆ ಹುಷಾರಿಲ್ಲ. ಅವರ ಶ್ವಾಸಕೋಶಗಳು ತೊಂದರೆಯಲ್ಲಿವೆ. ಅವರು ಉಸಿರಾಡಲು ಕಷ್ಟಪಡುತ್ತಿದ್ದಾರೆ. ನಾನು ನಿಜಕ್ಕೂ ಆ ಬಗ್ಗೆ ಚಿಂತೆಯಲ್ಲಿದ್ದೇನೆ. ಮನೆಗೆ ಹೋಗಿ ಆತನಿಗೆ ಧೈರ್ಯ ಹೇಳೋಣ ಅಂದರೆ ಸಾಧ್ಯವಾಗುತ್ತಿಲ್ಲ,' ಎಂದು ಸಿರಾಜ್ ಹೇಳಿದ್ದಾರೆ.
ಫೋನ್ ಮಾಡಿದಾಗೆಲ್ಲ ಅಪ್ಪ ಅಳುತ್ತಿದ್ದರು
'ನಾನು ತಂದೆಯ ಜೊತೆ ಫೋನ್ನಲ್ಲಿ ಮಾತನಾಡುತ್ತಿದ್ದೆ. ಆದರೆ ನಾನು ಯಾವಾಗ ಫೋನ್ ಮಾಡುತ್ತೇನೋ ಆವಾಗೆಲ್ಲ ಅಪ್ಪ ಅಳುತ್ತಿದ್ದರು. ಅಪ್ಪ ಅಳುವುದನ್ನು ನನ್ನಿಂದ ಸಹಿಸಲಾಗುತ್ತಿರಲಿಲ್ಲ. ಹೀಗಾಗಿ ನಾನು ಬೇಗನೆ ಕಾಲ್ ಕಟ್ ಮಾಡುತ್ತಿದ್ದೆ. ತಂದೆಯ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಕಳೆದ ಪಂದ್ಯದ ವೇಳೆ ಅಪ್ಪ ಆಸ್ಪತ್ರೆಗೆ ದಾಖಲಾಗಿದ್ದರು,' ಎಂದು ಸಿರಾಜ್ ವಿವರಿಸಿದ್ದಾರೆ.
ಪ್ರತೀ ಪತ್ರಿಕೆಯಲ್ಲೂ ನಿನ್ನ ಚಿತ್ರವಿದೆ
'ಕೆಕೆಆರ್ ಪಂದ್ಯದ ಬಳಿಕ ನಾನು ಅಪ್ಪನಿಗೆ ಕಾಲ್ ಮಾಡಿದೆ, ಆಗ ಅಪ್ಪ ಮನೆಯಲ್ಲಿದ್ದರು. ಅದು ನನ್ನನ್ನು ಖುಷಿಪಡಿಸಿತು. ಅಪ್ಪನೂ ಖುಷಿಯಲ್ಲಿದ್ದರು. ಎಲ್ಲರೂ ನನಗೆ ಕಾಲ್ ಮಾಡಿ ನಿನ್ನ ಪ್ರದರ್ಶನದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಹೈದರಾಬಾದ್ನ ಪ್ರತೀ ಪತ್ರಿಕೆಯಲ್ಲೂ ನಿನ್ನ ಚಿತ್ರವಿದೆ,' ಎಂದು ಅಪ್ಪ ಖುಷಿಯಲ್ಲಿ ಹೇಳಿಕೊಂಡಿದ್ದರು ಎಂದು ಸಿರಾಜ್ ಹೇಳಿದ್ದಾರೆ.