ಬೆಂಗಳೂರು, ಅಕ್ಟೋಬರ್ 12: ಬೆಂಗಳೂರಿನಲ್ಲಿರುವ ಉದಯೋನ್ಮುಖ ಕ್ರಿಕೆಟ್ ಆಟಗಾರರಿಗೆ ಸಂತಸದ ಸುದ್ದಿಯಿದೆ. ಬೆಂಗಳೂರಿನಲ್ಲಿ ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ (MSDCA)ಯನ್ನು ಆರಂಭಿಸಲಾಗಿದೆ ಎಂದು ಗೇಮ್ಪ್ಲೇ ಮತ್ತು ಆರ್ಕಾ ಸ್ಪೋರ್ಟ್ಸ್ ಮಾಧ್ಯಮ ಪ್ರಕಟಣೆಯಲ್ಲಿ ಘೋಷಿಸಿದೆ. ಬೆಂಗಳೂರಿನ ಎಂಎಸ್ಡಿಸಿಎ(MSDCA) ಅತ್ಯಾಧುನಿಕ ಮೂಲಸೌಕರ್ಯ ಮತ್ತು ವಿಶ್ವ ದರ್ಜೆಯ ತರಬೇತಿ ಸೌಲಭ್ಯಗಳನ್ನು ಹೊಂದಿದೆ. ಅಲ್ಲದೆ ತರಬೇತಿ ಪಡೆಯುವವರಿಗೆ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಂಎಸ್ಡಿಸಿಎ ಮಾರ್ಗದರ್ಶಕರಾದ ಎಂ.ಎಸ್. ಧೋನಿ ಅಕಾಡೆಮಿಗೆ ಯುವ ಆಟಗಾರರು ಸೇರ್ಪಡೆಯಾಗಲು ಮನವಿ ಮಾಡಿಕೊಂಡಿದ್ದಾರೆ ಎಂದು ಈ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. "ಎಂಎಸ್ ಧೋನಿ ಅಕಾಡೆಮಿ ಪ್ರಾರಂಭಿಸಲು ತುಂಬಾ ಉತ್ಸುಕನಾಗಿದ್ದೇನೆ. ಧೋನಿ ಕ್ರಿಕೆಟ್ ಅಕಾಡೆಮಿ ನಿಮ್ಮ ಕೌಶಲ್ಯಗಳನ್ನು ಚುರುಕುಗೊಳಿಸಲು ಉತ್ತಮ ತಂತ್ರಗಳು ಮತ್ತು ತಂತ್ರಜ್ಞಾನದ ಸಹಾಯದಿಂದ 360 ಡಿಗ್ರಿ ತರಬೇತಿ ವಿಧಾನವನ್ನು ಒದಗಿಸುವುದು ಅಕಾಡೆಮಿಯ ಗುರಿಯಾಗಿದೆ. ನಾವು ಅರ್ಹ ತರಬೇತುದಾರರು ಮತ್ತು ಫಿಟ್ನೆಸ್ ತಜ್ಞರನ್ನು ಕರೆತರುತ್ತೇವೆ. ಈಗಲೇ ನೋಂದಾಯಿಸಿ ಮತ್ತು ನನ್ನ ಅಕಾಡೆಮಿಯ ಭಾಗವಾಗಲು ಸಿದ್ಧರಾಗಿ. ಇದು ಕೇವಲ ಕ್ರಿಕೆಟರ್ ಆಗಲು ಅಷ್ಟೇ ಅಲ್ಲ; ಇದು ಚತುರತೆಯುಳ್ಳವರಾಗಲು ಕೂಡಾ. ಆಟದ ಮಾನಸಿಕ ಮತ್ತು ದೈಹಿಕ ಕೌಶಲ್ಯಗಳನ್ನು ಕಲಿಯಲು ಧೋನಿ ಕ್ರಿಕೆಟ್ ಅಕಾಡೆಮಿಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ಬನ್ನಿ" ಎಂದು ಕರೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
"ನನ್ನ ಒಂದೇ ಒಂದು ಸಲಹೆ ಎಂದರೆ, ಫಲಿತಾಂಶಕ್ಕಿಂತ ಹೆಚ್ಚು ಪ್ರಕ್ರಿಯೆ ಮುಖ್ಯವಾದುದು. ಫಲಿತಾಂಶವು ನಮ್ಮ ಪ್ರಕ್ರಿಯೆಯ ಫಲ ಅಷ್ಟೇ. ಆದರೆ, ಇಂದಿನ ಜಗತ್ತಿನಲ್ಲಿ ನಾವು ಪ್ರಕ್ರಿಯೆಗಿಂತ ಹೆಚ್ಚಾಗಿ ಫಲಿತಾಂಶದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದೇವೆ. ಆದ್ದರಿಂದ, ಪ್ರಕ್ರಿಯೆಯ ಮೇಲೆ ಗಮನ ಕೊಡಿ, ಎಲ್ಲಾ ಸಣ್ಣ ವಿಷಯಗಳನ್ನು ನೋಡಿಕೊಳ್ಳಿ ಮತ್ತು ಇದರಿಂದ ಅಂತಿಮವಾಗಿ ನೀವು ಬಯಸಿದ ಫಲಿತಾಂಶವನ್ನು ಪಡೆಯುತ್ತೀರಿ. ನಾವು ಇನ್ನೂ ಹೆಚ್ಚಿನದನ್ನು ಪಡೆಯಬೇಕಾಗಿತ್ತು ಎಂದು ದೂರುತ್ತಲೇ ಇರುತ್ತೇವೆ. ಆದರೆ ವಾಸ್ತವವಾಗಿ, ನಾವು ಏನು ಮಾಡಿದ್ದೇವೆ ಎಂಬುದರ ಫಲವೇ ನಮಗೆ ಸಿಗುವ ಫಲಿತಾಂಶವಾಗಿರುತ್ತದೆ. ಆದ್ದರಿಂದ, ನಾವು ಚೆನ್ನಾಗಿ ತಯಾರಾದರೆ, ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೆ ಹಾಗೂ ನಾವು ನಮಗೇ ಪ್ರಾಮಾಣಿಕರಾಗಿದ್ದರೆ, ನಾವು ಬಯಸಿದ ಫಲಿತಾಂಶವನ್ನು ಪಡೆಯುತ್ತೇವೆ. ಒಂದು ವೇಳೆ ಅಲ್ಲಿ ಯಾವುದೇ ನ್ಯೂನತೆಯಿದ್ದರೆ, ಅದು ನಮ್ಮ ಮುಂದಿನ ಕಲಿಕೆಯಾಗಿರುತ್ತದೆ. ಆಲ್ ದಿ ಬೆಸ್ಟ್" ಎಂದು ಧೋನಿ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
ಗೇಮ್ಪ್ಲೇ ಮಾಲೀಕರಾದ ದೀಪಕ್ ಎಸ್. ಭಟ್ನಾಗರ್ ಈ ಸಂದರ್ಭದಲ್ಲಿ ಮಾತನಾಡಿ, "ಗೇಮ್ಪ್ಲೇಗೆ ಮಾತ್ರವಲ್ಲದೆ ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಎಲ್ಲಾ ಕ್ರಿಕೆಟಿಗರಿಗೂ ಇಂದು ಮಹತ್ವದ ದಿನವಾಗಿದೆ. ಬೆಂಗಳೂರಿನಲ್ಲಿ ಆರಂಭಗೊಂಡ ಎಂ ಎಸ್ ಧೋನಿ ಕ್ರಿಕೆಟ್ ಅಕಾಡೆಮಿ, ಕ್ರಿಕೆಟ್ನಲ್ಲಿ ದೊಡ್ಡ ಸಾಧನೆ ಮಾಡಲು ಬಯಸುವ ಮಕ್ಕಳು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಅತ್ಯುತ್ತಮ ಮೂಲಸೌಕರ್ಯ ಮತ್ತು ವಿಶ್ವ ದರ್ಜೆಯ ತರಬೇತಿ ಸೌಲಭ್ಯಗಳನ್ನು ಹೊಂದಿದೆ" ಎಂದು ಹೇಳಿದರು.
ಸ್ವತಃ ಮಹೇಂದ್ರ ಸಿಂಗ್ ಧೋನಿ ಅಕಾಡೆಮಿಯ ಮಾರ್ಗದರ್ಶಕರಾಗಿರುವುದರಿಂದ, ಬೆಂಗಳೂರಿನ ಎಲ್ಲಾ ಯುವಜನರಿಗೆ ಕ್ರಿಕೆಟ್ ಮಾಂತ್ರಿಕನಿಂದ ಕಲಿಯಲು ಸಾಧ್ಯ ಜೊತೆಗೆ ಮೀಸಲಾದ ಅರ್ಹ ತರಬೇತುದಾರರ ತಂಡದಿಂದಲೂ ಕೂಡ ಕಲಿಯಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ನಾವು ಎಂ ಎಸ್ ಡಿ ಸಿ ಎ ಬೆಂಗಳೂರು ಆರಂಭಿಸುವುದರ ಮೂಲಕ ಭಾರತೀಯ ಕ್ರಿಕೆಟ್ ಬೆಳೆಯಲು ಕೊಡುಗೆ ನೀಡಲು ಬಯಸುತ್ತೇವೆ ಎಂದು ದೀಪಕ್ ಎಸ್. ಭಟ್ನಾಗರ್ ಹೇಳಿದರು.
ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ ಬೆಂಗಳೂರು, ಇದರ ಸಂಯೋಜಕರಾಗಿರುವ ಎಂ. ವಿಶ್ವನಾಥ್ ಮಾತನಾಡಿ, "ಬೆಂಗಳೂರಿನಲ್ಲಿ ಯುವ ಕ್ರಿಕೆಟಿಗರಿಗೆ ಬಹಳ ಸಂಭ್ರಮದ ಸಮಯ ಇದು. ಈಗ ಶ್ರೇಷ್ಠ ಕ್ರಿಕೆಟಿಗ, ಮಹೇಂದ್ರ ಸಿಂಗ್ ಧೋನಿಯ ಮಾರ್ಗದರ್ಶನದ ಜೊತೆಗೆ ಅತ್ಯುತ್ತಮ ತರಬೇತುದಾರರಿಂದ ಕ್ರಿಕೆಟ್ ಕಲಿಯಬಹುದು. ಬೆಂಗಳೂರಿನಲ್ಲಿರುವ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಅಕಾಡೆಮಿಗೆ ಕರೆತರಲು ನಾನು ಈ ಮೂಲಕ ಆಹ್ವಾನಿಸುತ್ತೇನೆ."
ಎಂ ಎಸ್ ಧೋನಿ ಕ್ರಿಕೆಟ್ ಅಕಾಡೆಮಿಯ ತರಬೇತಿ ನಿರ್ದೇಶಕರಾದ ದಕ್ಷಿಣ ಆಫ್ರಿಕಾದ ಮಾಜಿ ಟೆಸ್ಟ್ ಕ್ರಿಕೆಟಿಗ ಡರೆಲ್ ಕಲಿನನ್, ಅಕಾಡೆಮಿಯಲ್ಲಿ ನೀಡಲಾಗುವ ತರಬೇತಿಯ ಬಗ್ಗೆ ವಿವರಿಸಿದರು. "ನಮ್ಮ ಕೋಚಿಂಗ್ ಫಿಲಾಸಫಿ ತುಂಬಾ ಸರಳವಾಗಿದೆ. ಮೊದಲಿಗೆ, ನಾವು ಮಕ್ಕಳನ್ನು ಮೌಲ್ಯಮಾಪನ ಮಾಡುತ್ತೇವೆ ಮತ್ತು ಅವರಿಗೆ ಕ್ರಿಕೆಟ್ ಬಗ್ಗೆ ಹೆಚ್ಚು ಕಲಿಸುತ್ತೇವೆ. ತಪ್ಪುಗಳು ಸ್ವಾಗತಾರ್ಹ. ತಪ್ಪುಗಳು ಒಳ್ಳೆಯದೆ, ಅದರಿಂದಲೇ ಕಲಿಯುವುದು. ನಮಗೆ ಬೆಳವಣಿಗೆಯ ಉದ್ದೇಶವಿದೆ. ಪ್ರತಿದಿನ ನಾವು ಹೇಗೆ ವಿಭಿನ್ನವಾಗಿ ಮತ್ತು ಉತ್ತಮವಾಗಿ ಕೆಲಸಗಳನ್ನು ಮಾಡಬಹುದೆಂದು ಯೋಚಿಸಬೇಕು ಹಾಗೆಯೇ ನೀವು ಶ್ರೇಷ್ಠ ಕ್ರಿಕೆಟಿಗರಾಗಲು ಅಗತ್ಯವಿರುವ ಎಲ್ಲಾ ಅಗತ್ಯ ಸಂಪನ್ಮೂಲಗಳನ್ನು ನಾವು ಒದಗಿಸುತ್ತೇವೆ," ಎಂದು ಡರೆಲ್ ಕಲಿನನ್ ಹೇಳಿದರು.
ಒಬ್ಬ ಯಶಸ್ವಿ ಕ್ರಿಕೆಟಿಗನಾಗಲು, ಆತ ಆತ್ಮವಿಶ್ವಾಸದಿಂದಿರಬೇಕು, ಒತ್ತಡದಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ವಿವಿಧ ಪರಿಸರಗಳಿಗೆ ಹೊಂದಿಕೊಳ್ಳಬೇಕು ಎಂಬ ನಂಬಿಕೆಯೊಂದಿಗೆ ಎಂ ಎಸ್ ಡಿ ಸಿ ಎ ಕಾರ್ಯನಿರ್ವಹಿಸುತ್ತದೆ. ಕ್ರಿಕೆಟ್ ತಂತ್ರಗಳು ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಆಟದ ಅರ್ಥ ಮತ್ತು ಅಂತಃಪ್ರಜ್ಞೆಯನ್ನು ಸುಧಾರಿಸಲು ಅಕಾಡೆಮಿಯ ತರಬೇತಿ ಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಎಂಎಸ್ಡಿಸಿಎಯ ಗಮನ, ಕೇವಲ ನೆಟ್ಗಳಲ್ಲಿ ಪ್ರದರ್ಶನ ನೀಡಲು ಆಟಗಾರರಿಗೆ ಸಹಾಯ ಮಾಡುವುದಲ್ಲ, ಬದಲಿಗೆ ವಾಸ್ತವವಾಗಿ ಆಟದಲ್ಲಿ ಯಶಸ್ವಿಯಾಗಬಲ್ಲ ವ್ಯಕ್ತಿಯಾಗಿ ಅವರನ್ನು ರೂಪಿಸುವುದು.
ಐಪಿಎಲ್ನಲ್ಲಿ ಆರ್ಸಿಬಿ ನಾಯಕರಾಗಿ ವಿರಾಟ್ ಕೊಹ್ಲಿ ಅಂಕಿ-ಅಂಶಗಳು!
ಎಂಎಸ್ಡಿಸಿಎಯಲ್ಲಿ ತರಬೇತಿಯು ಬಹಳಷ್ಟು ಆಟದ ಪ್ರಜ್ಞೆ ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಪಂದ್ಯದ ಸಮಯದಲ್ಲಿ ಆಡುವವರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತದೆ ಹೊರತು ನೆಟ್ನಲ್ಲಿ ಕಲಿಸುವುದಲ್ಲ. ಎಂಎಸ್ಡಿಸಿಎ ಕ್ರಿಕೆಟ್ ಕೋಚಿಂಗ್ ಪ್ರೋಗ್ರಾಂ ಗುಣಮಟ್ಟದ ಕ್ರಿಕೆಟಿಗರನ್ನು ಬೆಳೆಸುವುದನ್ನು ಉತ್ತೇಜಿಸುತ್ತದೆ ಹಾಗೂ ನಾಯಕನಾಗಿರುವ ವ್ಯಕ್ತಿ, ಬಲವಾದ ತಂಡವನ್ನು ನಡೆಸುವ ಸಾಮರ್ಥ್ಯಗಳನ್ನು ಹೊಂದಿರುತ್ತಾನೆ, ಶ್ರೇಷ್ಠತೆಗಾಗಿ ಶ್ರಮಿಸುತ್ತಾನೆ ಮತ್ತು ಕ್ರೀಡಾ ಮನೋಭಾವ ಮತ್ತು ನ್ಯಾಯಯುತ ಆಟವನ್ನು ಪ್ರದರ್ಶಿಸುತ್ತಾನೆ ಎಂದು ನಂಬಿದೆ.
ಆರ್ಕಾ ಸ್ಪೋರ್ಟ್ಸ್ನ ಕನಸಿನ ಕೂಸು, ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ. ನಮ್ಮ ದೇಶದ ಮಹತ್ವಾಕಾಂಕ್ಷಿ ಕ್ರೀಡಾ ಸಮುದಾಯಕ್ಕೆ ಶ್ರೇಷ್ಠ ಕ್ರಿಕೆಟಿಗರನ್ನು ನೀಡುವ ಏಕೈಕ ಚಿಂತನೆಯೊಂದಿಗೆ ಆರಂಭವಾಗಿದೆ. ಎಂಎಸ್ ಧೋನಿ ಮಾರ್ಗದರ್ಶನ ಮತ್ತು ಮಿಹಿರ್ ದಿವಾಕರ್ ಸ್ಥಾಪಿಸಿದ ಎಂಎಸ್ಡಿಸಿಎ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ತರಬೇತಿ ಮತ್ತು ಅಭಿವೃದ್ಧಿಗಾಗಿ ಸ್ಥಾಪಿತವಾಗಿದೆ. ಸುಧಾರಿತ ತಂತ್ರಜ್ಞಾನ, ಪ್ರಧಾನ ತರಬೇತಿ ಸೌಲಭ್ಯಗಳು ಮತ್ತು ಅರ್ಹ ತರಬೇತುದಾರರನ್ನು ಹೊಂದಿದ ಎಂಎಸ್ಡಿಸಿಎ ಜಗತ್ತಿನ ಮೂಲೆ ಮೂಲೆಗಳಿಗೂ ತನ್ನ ಛಾಪನ್ನು ಮೂಢಿಸುವತ್ತ ಗುರಿ ಇಟ್ಟಿದೆ.
ಎಂ ಎಸ್ ಡಿ ಸಿ ಎ ಬೆಂಗಳೂರು ಬಗ್ಗೆ ಮಾಹಿತಿ
•ಅರ್ಹ ತರಬೇತುದಾರರಿಂದ ಕಲಿಕೆ
•ಅತ್ಯಾಧುನಿಕ ಸೌಲಭ್ಯ
•70 ಗಜಗಳ ಪಂದ್ಯ ಮೈದಾನ
•5 ಸೆಂಟರ್ ಟರ್ಫ್ ಪಿಚ್ಗಳು
•2 ಆಸ್ಟ್ರೋ ಟರ್ಫ್ ಪಿಚ್ಗಳು
•2 ಸಿಮೆಂಟ್ ಪಿಚ್ಗಳು
•5 ಅಭ್ಯಾಸ ಮಾಡುವ ಟರ್ಫ್ ಪಿಚ್ಗಳು
ವಿಳಾಸ: ಸರ್ವೇ ನಂ. 34, ಕಾಡ ಅಗ್ರಹಾರ, ಬಿದರಹಳ್ಳಿ ಹೋಬಳಿ, ಬೆಂಗಳೂರು
ಇಮೇಲ್ ವಿಳಾಸ: [email protected]
ಗೇಮ್ಪ್ಲೇ ಬಗ್ಗೆ ಮಾಹಿತಿ:
ಬೆಂಗಳೂರು ಮೂಲದ ಗೇಮ್ಪ್ಲೇ ಕ್ರೀಡೆಗಳನ್ನು ಉತ್ತೇಜಿಸುವ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಗೇಮ್ಪ್ಲೇ 5 ಟರ್ಫ್ ವಿಕೆಟ್ಗಳೊಂದಿಗೆ 13 ಎಕರೆ ಪ್ರದೇಶದಲ್ಲಿ ಕ್ರಿಕೆಟ್ ಸೌಲಭ್ಯವನ್ನು ಹೊಂದಿದೆ. ಈ ಕಂಪನಿಯು 2019 ರಲ್ಲಿ ದೀಪಕ್ ಎಸ್. ಭಟ್ನಾಗರ್ ಅವರಿಂದ ಆರಂಭವಾಯಿತು. ದೀಪಕ್ ಅವರು ಕ್ರಿಕೆಟ್ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿರುವವರು ಹಾಗೂ ಸ್ವತಃ ಕ್ರಿಕೆಟಿಗರೂ ಕೂಡ. ಗೇಮ್ಪ್ಲೇ ಶೀಘ್ರದಲ್ಲೇ ಕ್ರೀಡಾ ರೆಸಾರ್ಟ್ ಆರಂಭಿಸಲಿದ್ದು, ಸೆಮಿ-ಒಲಿಂಪಿಕ್ ಗಾತ್ರದ ಈಜುಕೊಳ ಮತ್ತು ಡಿಸೈನರ್ ಈಜುಕೊಳ, 2 ಲೌಂಜ್ ಕೆಫೆಗಳು, 15 ಕಾಟೇಜ್ಗಳು ಇರಲಿವೆ, ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಆಟದ ಮೈದಾನ ಹಾಗೂ 50,000 ಚದರ ಅಡಿಯ ಪಾರ್ಟಿ ಸ್ಥಳವನ್ನು ಹೊಂದಿರಲಿದೆ.